ನಳಿನ್ ಕುಮಾರ್ ಕಟೀಲ್ ಆಯ್ಕೆ ಸಮರ್ಥಿಸಿಕೊಂಡ ಕೋಟ ಶ್ರೀನಿವಾಸ್ ಪೂಜಾರಿ
ಮಂಗಳೂರು, ಆಗಸ್ಟ್ 22: ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಮರ್ಥಿಸಿಕೊಂಡಿದ್ದಾರೆ. ನಳಿನ್ ಆಯ್ಕೆ ಕುರಿತು ಅಪಸ್ವರ ಎತ್ತಿರುವ ಬಸವನಗೌಡ ಪಾಟೀಲ್ ಪ್ರಶ್ನೆಗೆ ಉತ್ತರಿಸುವುದಿಲ್ಲ ಎಂದಿದ್ದಾರೆ.
ಕರಾವಳಿಗೆ ಇನ್ನಷ್ಟು ಸಚಿವ ಸ್ಥಾನ ಕೊಡಲು ಸಿಎಂಗೆ ಮನವಿ ಮಾಡಿದ್ದೇವೆ - ಕೋಟ ಶ್ರೀನಿವಾಸ್ ಪೂಜಾರಿ
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದ ಅವರು, "ನಳಿನ್ ಸಂಘದ ಪ್ರಚಾರಕರಾಗಿ ಮುನ್ನಲೆಗೆ ಬಂದವರು. ಮೋದಿ, ಅಮಿತ್ ಶಾ, ಯಡಿಯೂರಪ್ಪ ಕೂಡ ಪ್ರಚಾರಕರಾಗಿದ್ದವರು. ಅದೇ ರೀತಿ ನಳಿನ್ ಕುಮಾರ್ ಕಟೀಲ್ ಕೂಡ. ಕರಾವಳಿಯಲ್ಲಿ ಅದ್ಭುತವಾಗಿ ಪಕ್ಷ ಸಂಘಟನೆ ಜೊತೆಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಮೂರು ವರ್ಷಗಳ ಕಾಲಾವಧಿಯಲ್ಲಿ ಕಾರ್ಯಕರ್ತರ ಮನಸ್ಸನ್ನು ನಳಿನ್ ಮುಟ್ಟಲಿದ್ದಾರೆ ಎಂಬ ವಿಶ್ವಾಸವಿದೆ. ಯಾರಿಗೆ ಏನೇ ಗೊಂದಲವಿದ್ದರೂ ಮುಂಬರುವ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ದೊರೆಯಲಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಕರಾವಳಿಗೆ ಸಚಿವ ಸ್ಥಾನ ನೀಡದ ವಿಚಾರವಾಗಿ ಭುಗಿಲೆದ್ದೆರುವ ಅಸಮಾಧಾನವನ್ನು ತಣ್ಣಗಾಗಿಸಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಂದಾಗಿದ್ದಾರೆ. ಮಂಗಳೂರಿನಲ್ಲಿ ಈ ಬಗ್ಗೆ ಸಮರ್ಥನೆ ನೀಡಿರುವ ಅವರು, "ಮೊನ್ನೆ 17 ಮಂದಿಯನ್ನು ಮಾತ್ರ ಸಚಿವರನ್ನಾಗಿ ಮಾಡಲಾಗಿದೆ. ಸರಕಾರಕ್ಕೆ ಬೆಂಬಲ ಕೊಟ್ಟವರನ್ನು ನೋಡಿಕೊಂಡು ಸಂಪುಟ ಮಾಡಿದ್ದಾರೆ. ಕರಾವಳಿಗೆ ಹೆಚ್ಚು ಸ್ಥಾನಗಳನ್ನು ಕೊಡಬೇಕೆನ್ನುವುದು ಸತ್ಯ. ಈ ಬಗ್ಗೆ ಸಿಎಂ ಭೇಟಿಯಾಗಿ ಕರಾವಳಿಗೆ ಸಚಿವ ಸ್ಥಾನ ಕೊಡಲು ಮನವಿ ಮಾಡಿದ್ದೇನೆ" ಎಂದರು.
ಈ ಮೊದಲು ಪ್ರವಾಹ ಪೀಡಿತ ಪ್ರದೇಶಗಳ ಕುರಿತಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ಕಾರ್ಯಗಳ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ ಸರ್ಕಾರದ ಆದೇಶವನ್ನು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಭಾಗಿಯಾಗಿ ಸಚಿವರಿಗೆ ಮಾಹಿತಿ ನೀಡಿದರು.