"ಜನರು ಬಂಡೆಯನ್ನು ಹುಡಿ ಮಾಡಿದ್ದಾರೆ, ಹುಲಿಯನ್ನು ಗೂಡಿಗೆ ಕಳುಹಿಸಿದ್ದಾರೆ"
ಮಂಗಳೂರು, ನವೆಂಬರ್ 11: "ಕಾಂಗ್ರೆಸ್ ಪಕ್ಷದ ಕಣ್ಣೀರಿನ ರಾಜಕಾರಣ ಜನರಿಗೆ ತಿಳಿದಿದೆ. ಹೀಗಾಗಿಯೇ ಜನರು ಬಂಡೆಯನ್ನು ಹುಡಿ ಮಾಡಿದ್ದಾರೆ. ಹುಲಿಯನ್ನು ಗೂಡಿಗೆ ಕಳುಹಿಸಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರಾ, ಆರ್ ಆರ್ ನಗರ ಉಪಚುನಾವಣೆ ಗೆಲುವಿಗೆ ಸಂತಸ ವ್ಯಕ್ತಪಡಿಸಿದರು. "ಶಿರಾದಲ್ಲಿ ಸಂಘಟನಾತ್ಮಕ ಕಾರ್ಯ ಯಶಸ್ಸು ತಂದುಕೊಟ್ಟಿದೆ. ಮೂರು ತಿಂಗಳ ಕಾಲ ಕಾರ್ಯಕರ್ತರು ಈ ಗೆಲುವಿಗೆ ಶ್ರಮ ವಹಿಸಿದ್ದಾರೆ. ಅದಕ್ಕೆ ಒಳ್ಳೆಯ ಫಲ ಸಿಕ್ಕಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯಗೆ ಮೂಲೆಗುಂಪಾಗುವ ಭಯವಿದೆ: ನಳಿನ್ ಕುಮಾರ್ ಕಟೀಲ್
"ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಎನ್ನುವುದನ್ನು ಜನತೆಯೇ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಕಣ್ಣೀರಿನ ನಾಟಕ ಜನರಿಗೆ ಗೊತ್ತಾಗಿದೆ. ಜನ ಬಂಡೆಯನ್ನು ಹುಡಿ ಮಾಡಿ, ಹುಲಿಯನ್ನು ಗೂಡಿಗೆ ಕಳುಹಿಸಿದ್ದಾರೆ" ಎಂದರು.
ಮೋದಿ ಅಲೆ ಎಲ್ಲಿ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ನಳಿನ್, "ಈಗ ಕರ್ನಾಟಕ ಜನತೆ ಕೇಳುತ್ತಿದ್ದಾರೆ, ನಿಮ್ಮ ಗೂಡೆಲ್ಲಿ ಎಂದು. ಸಿದ್ದರಾಮಯ್ಯನವರೇ ಹಗಲು ಕನಸು ಕಾಣುವುದನ್ನು ಬಿಡಿ" ಎಂದರು. ಇನ್ನು ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿ, "ಬಿಜೆಪಿಯಲ್ಲಿ ನಾಯಕತ್ವದ ಪ್ರಶ್ನೆಯೇ ಉದ್ಭವಿಸಿಲ್ಲ. ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪವರೇ ಸಿಎಂ" ಎಂದರು.