ಕಿದು ಸಿಪಿಸಿಆರ್ ಐ ಕೇಂದ್ರ ಸ್ಥಳಾಂತರಿಸದಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆದೇಶ
ಮಂಗಳೂರು, ಜುಲೈ 19: ದಕ್ಷಿಣ ಕನ್ನಡ ಜಿಲ್ಲೆಯ ಕಿದು ಎಂಬಲ್ಲಿರುವ ಸಿಪಿಸಿಆರ್ ಐ ಸಂಸ್ಥೆಯನ್ನು ಸ್ಥಳಾಂತರಿಸದಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ನವದೆಹಲಿಯಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಅರಣ್ಯ ಇಲಾಖೆ, ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಿದ ಬಾಬ್ತು 19,26,77,670 ಕೋಟಿ ರೂಪಾಯಿಯನ್ನು ಪಾವತಿಸುವಂತೆ ಸಿಪಿಸಿಆರ್ ಐಗೆ ನಿರ್ದೇಶನ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಡಿ.ವಿ.ಸದಾನಂದ ಗೌಡ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ವಿವರಣೆ ನೀಡಿದರು. ಈ ಬಗ್ಗೆ ಉಂಟಾಗಿರುವ ಗೊಂದಲದ ಬಗ್ಗೆ ಮನವರಿಕೆ ಮಾಡಿದರು.
ಅಡಿಕೆ ಕುರಿತ ಅಫಿಡವಿಟ್ ಹಿಂಪಡೆಯಲು ಬಿಜೆಪಿ ಸಂಸದರ ನಿಯೋಗ ಮನವಿ
ತೆಂಗು, ಕೋಕೋ ಮತ್ತು ಗೇರು ತಳಿಗಳಿಂದ ಉತ್ತಮವಾದ ಬೆಳೆಗಳನ್ನು ಬೆಳೆಯುವ ಉದ್ದೇಶದಿಂದ ಸಿಪಿಸಿಆರ್ ಐ ಕೇಂದ್ರವನ್ನು 1972ರಲ್ಲಿ ಕಿದು ಎಂಬಲ್ಲಿ ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ ಸ್ಟಿಟ್ಯೂಟ್ ಅಡಿಯಲ್ಲಿ ಸ್ಥಾಪಿಸಲಾಯಿತು. ಈ ಕೇಂದ್ರವನ್ನು ಬೀಜದ ಫಾರ್ಮ್ ಆಗಿ ಮಾಡಲಾಯಿತು, ನಂತರ 2001ರಲ್ಲಿ ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಯಿತು. 1972ರಲ್ಲಿ ಸುಬ್ರಹ್ಮಣ್ಯದಲ್ಲಿ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ ನಂತರ ಕರ್ನಾಟಕ ಸರ್ಕಾರದಿಂದ ಗುತ್ತಿಗೆಗೆ 60 ಹೆಕ್ಟೇರ್ ಅರಣ್ಯ ಭೂಮಿಯನ್ನು ದೇಣಿಗೆ ಪಡೆದು ಕಚೇರಿಯನ್ನು ಕಿದುವಿಗೆ ಸ್ಥಳಾಂತರಿಸಲಾಯಿತು. 1973ರಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು. ಅದೇ ವರ್ಷದಲ್ಲಿ ಹೆಚ್ಚುವರಿ 60 ಹೆಕ್ಟೇರ್ ಕೃಷಿ ಭೂಮಿಯನ್ನಾಗಿ ವಿಸ್ತರಿಸಲಾಯಿತು.
1998ರಲ್ಲಿ ತೆಂಗು ಜೆನೆಟಿಕ್ ರಿಸೋರ್ಸ್ ನೆಟ್ವರ್ಕ್ ಅಡಿ ದಕ್ಷಿಣ ಏಷ್ಯಾದ ಅಂತರರಾಷ್ಟ್ರೀಯ ತೆಂಗು ಜೀನ್ ಬ್ಯಾಂಕ್ ಅನ್ನು ಈ ಕೇಂದ್ರದಲ್ಲಿ ಸ್ಥಾಪಿಸಲಾಯಿತು. ಇದೀಗ ಕೇಂದ್ರಕ್ಕೆ ಸಿಪಿಸಿಆರ್ ಐ ಸಂಶೋಧನಾ ಕೇಂದ್ರ ಮತ್ತು ದಕ್ಷಿಣ ಏಷ್ಯಾದ ಅಂತರರಾಷ್ಟ್ರೀಯ ತೆಂಗಿನ ಜೀನ್ ಬ್ಯಾಂಕ್ ಎಂದು ಮರುನಾಮಕರಣ ಮಾಡಲಾಗಿದೆ. ಕಿದುವಿನಲ್ಲಿ 453 ತೆಂಗು ಜರ್ಮ್ ಪ್ಲಾಸಂನಲ್ಲಿ 95 ಪ್ರಭೇದಗಳಿವೆ. ಕಿದು ಸಂಶೋಧನಾ ಕೇಂದ್ರದ ವ್ಯಾಪ್ತಿಯಲ್ಲಿ 95 ಹೆಕ್ಟೇರ್ ತೆಂಗು, 7.5 ಹೆಕ್ಟೇರ್ ನಲ್ಲಿ ಅಡಿಕೆ ಮತ್ತು 2.5 ಹೆಕ್ಟೇರ್ ನಲ್ಲಿ ಕೋಕೋ ಬೆಳೆಯಲಾಗಿದೆ.
ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ನಳಿನ್ ಕುಮಾರ್ ಕಟೀಲ್ ಮಾತು
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ರೈತ ಗುಂಪುಗಳಿಗೆ ನಿಯಮಿತ ತರಬೇತಿ ನೀಡುವಲ್ಲಿ ಕೇಂದ್ರ ಪ್ರಮುಖ ಪಾತ್ರ ವಹಿಸುತ್ತಿದೆ. ವಿವಿಧ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ಸಂಶೋಧನಾ ಸಂಸ್ಥೆಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ತಮ್ಮ ಶೈಕ್ಷಣಿಕ ಅವಶ್ಯಕತೆಗಳಿಗಾಗಿ ಈ ಕೇಂದ್ರವನ್ನು ಅವಲಂಬಿಸಿದ್ದಾರೆ.
ಲೋಕಸಭೆಯಲ್ಲಿ ಪ್ರತಿಧ್ವನಿಸಿದ ರನ್ ವೇಯಿಂದ ವಿಮಾನ ಜಾರಿದ ಘಟನೆ
ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಕಾರ್ಯದರ್ಶಿ ಸಿ.ಎಲ್.ಮಿಶ್ರಾ ಅವರಿಗೆ ಕರ್ನಾಟಕ ಅರಣ್ಯ ಇಲಾಖೆಗೆ ಪಾವತಿಸಲು ಬಾಕಿಯಿರುವ 19,26,77,670 ಕೋಟಿ ರೂಪಾಯಿಯನ್ನು ಮನ್ನಾ ಮಾಡುವ ಮತ್ತು ಕಿದು ಸಿಪಿಸಿಆರ್ ಐಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸದೆ ಅಲ್ಲೇ ಮುಂದುವರೆಸುವಂತೆ ಇಲಾಖೆಯ ಮಹಾನಿರ್ದೇಶಕರ ಮೂಲಕ ತಕ್ಷಣ ಆದೇಶ ಹೊರಡಿಸಲು ಸೂಚಿಸಿದ್ದಾರೆ.