ಪಶ್ಚಿಮ ಘಟ್ಟದಲ್ಲಿ ನಿಗೂಢ ಸ್ಫೋಟಗಳು, ಕಾದಿದೆಯಾ ಗಂಡಾಂತರ?
Recommended Video
ಮಂಗಳೂರು, ಆಗಸ್ಟ್ 21: ಪಶ್ಚಿಮ ಘಟ್ಟಗಳ ಉದ್ದಕ್ಕೂ ಭೂಮಿ ಬಿರುಕು ಬಿಡುತ್ತ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆಯಾ? ಕಳೆದ ಒಂದು ವಾರದಿಂದ ಇಂಥಹ ದುರಂತದ ಸನ್ನಿವೇಶಗಳು ಎದುರಾಗುತ್ತಿದ್ದು, ಪಶ್ಚಿಮ ಘಟ್ಟ ತಪ್ಪಲಿನ ಜನರ ಅತಂಕಕ್ಕೆ ಕಾರಣವಾಗಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಡೆದಿರುವ ಕೆಲವು ನಿಗೂಢ ದುರಂತ ಪ್ರಸಂಗಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದ ರಾಜ್ಯ ಸರಕಾರ ಮಾತ್ರ ಕೈಕಟ್ಟಿ ಕುಳಿತುಕೊಂಡಿದೆ. ದಿನದಿಂದ ದಿನಕ್ಕೆ ಪಶ್ಚಿಮ ಘಟ್ಟಗಳ ಶ್ರೇಣಿ ಕುಸಿಯುತ್ತಿದೆ ಅನ್ನುವುದಕ್ಕೆ ಸ್ಪಷ್ಟ ಸಾಕ್ಷ್ಯಗಳು ದೊರೆಯಲಾರಂಭಿಸಿದೆ. ಈ ದುರಂತದ ಸಾಕ್ಷ್ಯ ನುಡಿಯುವ ವಿಡಿಯೋ ಹಾಗು ಫೋಟೋ ಗಳು ಲಭ್ಯ ವಾಗುತ್ತಿವೆ.
ಕೂಜುಮಲೆ, ಕಲ್ಮಕಾರಿನಲ್ಲಿ ನಡೆದ ದುರಂತವನ್ನು ಜಿಲ್ಲಾಡಳಿತ ಮುಚ್ಚಿಟ್ಟಿದ್ದೇಕೆ?
ಸುಳ್ಯ ತಾಲೂಕಿನ ಕಲ್ಮಕಾರಿನ ಬಳಿ ಕಡಮಕಲ್ ಎಸ್ಟೇಟ್ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಎಸ್ಟೇಟ್ ಒಳಗಿರುವ ಹೊಳೆಯ ಸೇತುವೆ ಕೊಚ್ಚಿ ಹೋಗಿದ್ದು, ಬೃಹತ್ ಮರಗಳು ಛಿದ್ರಗೊಂಡು ಬಿದ್ದಿದೆ.
ಮೂರು ದಿನಗಳ ಹಿಂದೆ ಈ ಭಾಗದಲ್ಲಿ ಭಾರೀ ಸ್ಫೋಟ ಸಂಭವಿಸಿದ ಸದ್ದು ಕೇಳಿದ್ದು, ಇದರಿಂದ ಎಸ್ಟೇಟ್ ಕಾರ್ಮಿಕರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಭಯಭೀತರಾಗಿದ್ದಾರೆ. ಹೀಗೆ ದಕ್ಷಿಣ ಕನ್ನಡ ಹಾಗೂ ಅದರ ಗಡಿ ಭಾಗದ ಪ್ರದೇಶಗಳಲ್ಲಿ ಎಂತೆಂಥ ಅನಾಹುತ ಸಂಭವಿಸಿದೆ ಎಂಬ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ...
ಅರಣ್ಯ ಛಿದ್ರವಾಗಿರುವುದು ಪತ್ತೆ
ಕೊಡಗಿನ ಗಡಿಭಾಗದ ಬ್ರಹ್ಮಗಿರಿ ಬೆಟ್ಟಗಳ ನಡುವೆ ಜಲಸ್ಫೋಟವಾಗಿ ಸಾವಿರಾರು ಎಕರೆ ವ್ಯಾಪ್ತಿಯಲ್ಲಿ ಅರಣ್ಯ ಛಿದ್ರವಾಗಿರುವುದು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಟ್ಟಕಡೆಯ ಗ್ರಾಮ ಕಲ್ಮಕಾರಿನ ಬಳಿಯ ಕಡಮಕಲ್ ಎಸ್ಟೇಟ್ ನಡುವೆ 5 ಕಿಮೀ ದುರ್ಗಮ ದಾರಿಯಲ್ಲಿ ನಡಿಗೆಯಿಂದಷ್ಟೆ ಈ ಜಾಗಕ್ಕೆ ತಲುಪಬಹುದಾಗಿದೆ.
ಇದೇ ಬೆಟ್ಟದ ಇನ್ನೊಂದು ಭಾಗದಲ್ಲಿರುವ ಗ್ರಾಮವೇ ಜೋಡುಪಾಲ. ಈ ಎಲ್ಲಾ ದೃಶ್ಯಗಳು ದುರಂತದ ಕಥೆ ಹೇಳುತ್ತಿವೆ. ಪಶ್ಚಿಮ ಘಟ್ಟಕ್ಕೆ ಗಂಡಾಂತರ ಕಾದಿದೆ ಅನ್ನುವುದಕ್ಕೆ ಬೇರೆ ಸಾಕ್ಷ್ಯ ಬೇಕಿಲ್ಲ.
2 ವರ್ಷಗಳ ಹಿಂದೆ ಭೂಮಿಯಲ್ಲಿ ಬಿರುಕು
ಕಡಮಕಲ್ ಎಸ್ಟೇಟ್ ಕಾರ್ಮಿಕನೊಬ್ಬ ಹೇಳುತ್ತಿರುವಂತೆ ಸ್ಫೋಟದ ಸದ್ದು ಕೇಳಿ ಶೇಕಡ.40ರಷ್ಟು ಕಾರ್ಮಿಕರು ಈಗಾಗಲೇ ಭಯದಿಂದ ಜಾಗ ಬಿಟ್ಟು ತೆರಳಿದ್ದಾರೆ. ಈ ಭಾಗದಲ್ಲಿ ಮತ್ತೆ ನಿರಂತರ ಭಾರೀ ಮಳೆಯಾದರೆ ಪಶ್ಚಿಮ ಘಟ್ಟದ ತಪ್ಪಲು ಕುಸಿಯಲಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಭಾರೀ ಭೂ ಕುಸಿತ ಸಂಭವಿಸಿರುವ ಜೋಡುಪಾಲ, ಮದೆನಾಡು ಪ್ರದೇಶದಲ್ಲಿ 2 ವರ್ಷಗಳ ಹಿಂದೆ ಭೂಮಿಯಲ್ಲಿ ಬಿರುಕು ಕಂಡುಬಂದಿತ್ತು. ಶಿಶಿರ ಎಂಬುವವರ ತೋಟದದಿಂದ ಬೆಟ್ಟದ ಉದ್ದಕ್ಕೂ ಭೂಮಿ ಬಿರುಕು ಬಿಟ್ಟಿತ್ತು. ಇತ್ತೀಚೆಗೆ ಈ ಬಿರುಕು ಹೆಚ್ಚಾಗುತ್ತಾ ಹೋಗಿತ್ತು . ಈ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆಯೇ ಭೂಮಿ ಕುಸಿಯುವ ಮುನ್ಸೂಚನೆ ದೊರೆತಿತ್ತು.
ಭಾರತದ ಭೀಕರ ಪ್ರವಾಹಗಳು, 1 ಲಕ್ಷ ಮಂದಿ ಮೃತರು, 4 ಲಕ್ಷ ಕೋಟಿ ನಷ್ಟ
ಭೂಮಿಯಡಿ ಭಾರೀ ಸದ್ದು
ಭೂ ಕುಸಿತ ಸಂಭವಿಸಿದ ಜೋಡುಪಾಲ ಹಾಗೂ ಮದೆನಾಡಿನಲ್ಲಿ ದುರಂತ ಸಂಭವಿಸುವ ಮೊದಲು ಭಾರೀ ಸ್ಫೋಟದ ಸದ್ದು ಕೇಳಿಬಂದಿತ್ತು. ಈ ಭಾರೀ ಸ್ಫೋಟದ ಸದ್ದಿಗೆ ಮದೆನಾಡು ಹಾಗು ಜೋಡುಪಾಲದ ಜನರು ಆತಂಕಕ್ಕೆ ಒಳಗಾಗಿದ್ದರು. ಬೆಟ್ಟ ಕುಸಿಯುವ ಮೊದಲು ಈ ಗ್ರಾಮಗಳ ಭೂಮಿಯಡಿಯಲ್ಲಿ ಭಾರೀ ಸದ್ದಾಗಿ ರೈಲು ಸಂಚರಿಸಿದಂತೆ ಆನುಭವ ಆಗಿತ್ತು ಎಂದು ಜೋಡುಪಾಲದ ನಿವಾಸಿ ಶಿಶಿರ ತಿಳಿಸಿದ್ದಾರೆ.
ಜಮೀನು ನಾಶವಾಗುವ ಸಾಧ್ಯತೆ
ಇತ್ತೀಚೆಗೆ ಕೂಜುಮಲೆ ಅರಣ್ಯದ ಕೊಡಗು ಗಡಿಭಾಗದ ಮಾಯಿಲ ಕೋಟೆ ಎಂಬಲ್ಲಿಯೂ ಮಧ್ಯಾಹ್ನದ ಸಮಯ ಭಾರೀ ಸ್ಪೋಟದ ಶಬ್ದ ಕೇಳಿಬಂದಿತ್ತು. ಈ ಬಾರಿ ಶಬ್ದದಿಂದ ಬೆದರಿದ ಸ್ಥಳೀಯ ಜನರು ಇತರೆಡೆ ಪಲಾಯನ ಮಾಡಿದ್ದರು.
ಇದೀಗ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಜನರಲ್ಲಿ ಆತಂಕ ಶುರುವಾಗಿದೆ. ಇಲ್ಲಿಯ ಬಾಡಡ್ಕ ಎಂಬಲ್ಲಿನ ಬೆಟ್ಟದಲ್ಲಿ ನಿನ್ನೆ ಬಿರುಕು ಕಂಡುಬಂದಿದೆ . ಇಲ್ಲಿಯ ನಿವಾಸಿ ಸುಂದರ ಮಲೆಕುಡಿಯರವರ ಮನೆಯ ಹಿಂಬದಿಯ ಗುಡ್ಡ ಸುಮಾರು 1 ಕಿ ಮೀ ದೂರದವರೆಗೂ ಭೂಮಿ ಬಿರುಕು ಬಿಟ್ಟಿದೆ.
ಪರಿಣಾಮ ಗುಡ್ಡ ಜರಿದು ಬೀಳುವ ಆತಂಕ ಸೃಷ್ಟಿಯಾಗಿದೆ. ಬೆಟ್ಟ ಜರಿದರೆ ಸುಂದರ ಮಲೆಕುಡಿಯರ ಮನೆ ಸಹಿತ ನೂರಾರು ಎಕರೆ ಕೃಷಿ ಜಮೀನು ಸಂಪೂರ್ಣ ನಾಶವಾಗುವ ಸಾಧ್ಯತೆಯಿದೆ .
ಜೋಡುಪಾಳ, ಮದೆನಾಡು ದುರಂತದ ಮುನ್ಸೂಚನೆ ನೀಡಿದ್ದವೆ ಕಾಡುಪ್ರಾಣಿಗಳು?
ಹರಿದು ಬರುತ್ತಿರುವ ನೀರು
ಈ ನಡುವೆ ಸುಬ್ರಹ್ಮಣ್ಯ ಸಮೀಪದ ಅರಣ್ಯ ಪ್ರದೇಶ ಗುತ್ತಿಗಾರಿನ ದೇವಚಳ್ಳ, ಕರಂಗಲ್ಲು ಬೆಟ್ಟದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಯಲಾರಂಭಿಸಿದೆ. ಬೆಟ್ಟದ ಮೇಲಿಂದ ಭಾರೀ ಪ್ರಮಾಣದಲ್ಲಿ ಕಲ್ಲು ಮಣ್ಣು ಹರಿದು ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಟ್ಟ ಕುಸಿಯುವ ಭೀತಿ ಎದುರಾಗಿದ್ದು, ಬೆಟ್ಟದ ತಪ್ಪಲಿನಲ್ಲಿರುವ ಹತ್ತಾರು ಎಕರೆ ಅಡಿಕೆ, ರಬ್ಬರ್ ತೋಟ ನಾಶವಾಗುವ ಆತಂಕ ಕಾಡಲಾರಂಭಿಸಿದೆ. ದೇವಚಳ್ಳ, ಕರಂಗಲ್ಲು ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.