ಮತಾಂತರ ನಿಷೇಧವಾಗದಿದ್ದರೆ ಉಪವಾಸ ಸತ್ಯಾಗ್ರಹ; ಮಂಗಳೂರಿನಲ್ಲಿ ಸ್ವಾಮೀಜಿಗಳ ಎಚ್ಚರಿಕೆ
ಮಂಗಳೂರು, ಅಕ್ಟೋಬರ್ 22: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಯಾಗಬೇಕೆಂಬ ಒತ್ತಾಯ ಜೋರಾಗಿದೆ. ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ರಾಜ್ಯಾದ್ಯಂತ ಹೋರಾಟ ಮಾಡಲು ನಿರ್ಧಾರ ಮಾಡಿದ್ದು, ಇದರ ಮೊದಲ ಅಂಗವಾಗಿ ಸ್ವಾಮೀಜಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ಮಾಡಿದೆ.
ಮಂಗಳೂರಿನ ವಿವಿಧ ಕ್ಷೇತ್ರಗಳ ಸ್ವಾಮೀಜಿಗಳು ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಮತಾಂತರ ನಿಷೇಧ ಕಾಯಿದೆ ಜಾರಿಯಾಗಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯಿದೆಯನ್ನು ತುರ್ತಾಗಿ ಅನುಷ್ಠಾನಕ್ಕೆ ತಂದು, ಬೇಕಾದ ಕಾನೂನುಗಳನ್ನು ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ, ಸುದ್ದಿಗೋಷ್ಠಿಯಲ್ಲಿ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ರಾಜಶೇಖಾರನಂದ ಸ್ವಾಮೀಜಿ, ಚಿಲಿಂಬಿ ಓಂಶಕ್ತಿ ಮಠದ ವಿದ್ಯಾನಂದ ಸ್ವರಸ್ವತಿ ಶ್ರೀ ಮತ್ತು ಮಾತೃಶ್ರೀ ಶಿವಜ್ಞಾನಿ ಸ್ವಾಮೀಜಿ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿ, "ಹಿಂದೂಗಳ ಮತಾಂತರ ವಿರೋಧವಾಗಿ ಸರಕಾರ ಶೀಘ್ರವಾಗಿ ಕಠಿಣ ಕಾನೂನು ಜಾರಿಗೊಳಿಸಬೇಕು. ಇದರಿಂದ ಮಾತ್ರ ಮತಾಂತರ ಪಿಡುಗು ನಿರ್ಮೂಲನೆ ಸಾಧ್ಯ. ಅಲ್ಪಸಂಖ್ಯಾತರು ಬಹುಸಂಖ್ಯಾತ ಹಿಂದೂಗಳನ್ನು ಮದುವೆ, ಮನೆ ಕೊಡಿಸುವ, ಶಿಕ್ಷಣ ಕೊಡಿಸುವ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತದೆ. ಇದರ ವಿರುದ್ಧ ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡುವ ಅನಿವಾರ್ಯತೆಯಿದೆ. ಈಗ ಐಟಿ- ಬಿಟಿ ಕಂಪೆನಿಗಳಲ್ಲೂ ಉದ್ಯೋಗದ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ," ಎಂದು ಹೇಳಿದ್ದಾರೆ.
ಇನ್ನು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, "ಮತಾಂತರ ನಿಷೇಧ ಕಾನೂನು ಜೊತೆ ತುರ್ತಾಗಿ ಆಧ್ಯಾದೇಶ ಜಾರಿಯಾಗಬೇಕಿದೆ. ಈ ಹಿಂದೆ ಬಡವರು, ಶಿಕ್ಷಣ ವಂಚಿತರು, ರೋಗಿಗಳಿಗೆ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿತ್ತು. ಇದೀಗ ಐಟಿ- ಬಿಟಿ ವಲಯದಲ್ಲೂ ಮತಾಂತರ ಪಿಡುಗು ಪ್ರವೇಶ ಪಡೆದಿದೆ. ಈ ಮೂಲಕ ಇದಕ್ಕೆ ಕಾನೂನನ್ನು ಪ್ರಬಲಗೊಳಿಸುವ ಮೂಲಕ ತೊಡೆದುಹಾಕಲು ಪ್ರಯತ್ನ ಪಡಲಿದ್ದೇವೆ. ಮಂಗಳೂರಿನಲ್ಲಿ ಈಗಾಗಲೇ ಎಂಟು ಕುಟುಂಬಗಳು ಮತಾಂತರವಾಗುವ ಹಂತದಲ್ಲಿವೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಾಣಿಲ ಮೋಹನದಾಸ ಸ್ವಾಮೀಜಿ ಮಾತನಾಡಿ, "ಎಲ್ಲಾ ಕಡೆಗಳಲ್ಲೂ ಮತಾಂತರ ಜಾಲ ವ್ಯಾಪಿಸುತ್ತಿದ್ದು, ಬೇರೆ ಬೇರೆ ರೀತಿಯ ಆಮಿಷಗಳನ್ನೊಡ್ಡಿ ಮತಾಂತರ ನಡೆಯುತ್ತಿದೆ. ಇದನ್ನು ತೊಡೆದುಹಾಕಲು ಕಾನೂನಾತ್ಮಕ ವ್ಯವಸ್ಥೆಗಳಾಗಬೇಕಾಗಿದೆ," ಎಂದು ಹೇಳಿದರು.
ಓಂಶಕ್ತಿ ವಿದ್ಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, "ಲವ್ ಜಿಹಾದ್ ವೈರಸ್ ರೀತಿಯಲ್ಲಿ ಹರಡುತ್ತಿದ್ದು, ಬಹುಸಂಖ್ಯಾತ ಹಿಂದೂಗಳನ್ನು ಸಂಪೂರ್ಣ ನಾಶಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ. ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಮತಾಂತರ ಮಾಡಲಾಗುತ್ತಿದೆ. ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳಿಗೆ ನಾವು ಗೌರವಿಸುತ್ತೇವೆ. ಆದರೆ ಹಿಂದೂ ಧರ್ಮದವರನ್ನು ಮತಾಂತರ ಮಾಡಿದ್ದಲ್ಲಿ ಮಾತ್ರ ನಾವು ಸುಮ್ಮನಿರುವುದಿಲ್ಲ. ಮತಾಂತರವನ್ನು ವಿರೋಧಿಸಿ ನಾವು ಅಮರಣಾಂತ ಉಪವಾಸ ಮಾಡಲೂ ನಾವು ಸಿದ್ಧ," ಎಂದು ಹೇಳಿದರು.
ಸುದ್ದಿಗೋಷ್ಠಿಗೂ ಮುನ್ನ ಸ್ವಾಮೀಜಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ರನ್ನು ಭೇಟಿಯಾಗಿ, ಸರ್ಕಾರಕ್ಕೆ ಮತಾಂತರ ನಿಷೇಧ ಕಾಯಿದೆಯ ಕಾನೂನು ಬಲಪಡಿಸಲು ಮನವಿ ನೀಡಿದ್ದಾರೆ. ಸರ್ಕಾರದ ಮುಂದಿನ ಅಧಿವೇಶನದಲ್ಲಿ ಅಧ್ಯಾದೇಶ ತರದಿದ್ದರೆ ಹೋರಾಟ ಮಾಡುವ ಎಚ್ಚರಿಕೆಯನ್ನು ಸ್ವಾಮೀಜಿಗಳು ನೀಡಿದ್ದಾರೆ.