ಕರಾವಳಿ ಮುಸ್ಲಿಮರಲ್ಲಿ ಕಿಚ್ಚೆಬ್ಬಿಸಿದ ಯುಟಿ ಖಾದರ್ ವಿವಾದಿತ ಹೇಳಿಕೆ
ಮಂಗಳೂರು, ಮಾರ್ಚ್ 1: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಚಿವ ಯು.ಟಿ ಖಾದರ್ ಅವರ ಸಂಕಷ್ಟಗಳು ಹೆಚ್ಚುತ್ತಲೇ ಇವೆ . ದಿನದಿಂದ ದಿನಕ್ಕೆ ಸಚಿವ ಖಾದರ್ ಒಂದಲ್ಲಾ ಒಂದು ವಿವಾದಗಳಲ್ಲಿ ಸಿಲುಕುತ್ತಿದ್ದಾರೆ.
ಮಂಗಳೂರಿನ ನಟೋರಿಯಸ್ ಟಾರ್ಗೆಟ್ ಗ್ರೂಪ್ ಲೀಡರ್ ಇಲ್ಯಾಸ್ ನೊಂದಿಗಿದ್ದ ಫೋಟೋ ವಿವಾದ ಒಂದೆಡೆಯಾದರೆ, ಇನ್ನೊಂದೆಡೆ ಇಲ್ಯಾಸ್ ಕೊಲೆ ಆರೋಪಿಗಳೊಂದಿಗೆ ಖಾದರ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು.
ಇಲ್ಯಾಸ್ ಕೊಲೆ ಆರೋಪಿಗಳ ಜತೆ ಸಚಿವ ಯು.ಟಿ. ಖಾದರ್ ಪೋಟೋ ವೈರಲ್
ಈಗ ಮತ್ತೆ ಸಚಿವ ಯು.ಟಿ. ಖಾದರ್ ವಿವಾದಕ್ಕೆ ಸಿಲುಕಿದ್ದಾರೆ. ಈ ಬಾರಿ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ತೆರಳಿರುವ ಕರಾವಳಿಯ ಯುವಕರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
"ಊರಿನಲ್ಲಿ ಜನರಿಗೆ ಢೋಂಗಿ ಮಾಡಿ ವಿದೇಶಕ್ಕೆ ಹೋಗ್ತಾರೆ," ಎಂದು ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದು, ಇದಕ್ಕೆ ಮುಸ್ಲಿಂ ಸಮುದಾಯದಿಂದಲೇ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಸೀದಿಯ ಉರೂಸ್ ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್ ಈ ಹೇಳಿಕೆ ನೀಡಿದ್ದು ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.
ಮುಸ್ಲಿಂ ಆದವ ಹಿಂದೂ ದೇವಾಲಯಗಳಿಗೆ ಹೋಗುವುದು ಹರಾಂ ಎಂದು ಕೆಲವರು ಸಚಿವ ಯು.ಟಿ. ಖಾದರ್ ವಿರುದ್ಧ ಈ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಟೀಕಾಕಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು ಮಾತಿನ ಭರದಲ್ಲಿ, ವಿದೇಶಕ್ಕೆ ಹೋಗುವ ಮೊದಲು ಊರಿನಲ್ಲಿ ಜನರಿಗೆ ಢೋಂಗಿ ಮಾಡಿ ತೆರಳುತ್ತಾರೆ. ಇಂತಹ ಢೋಂಗಿ ಲೋಫರ್ ಗಳು ನನಗೆ ಪಾಠ ಹೇಳುವ ಅಗತ್ಯ ಇಲ್ಲ ಎಂದು ಕಿಡಿಕಾರಿದ್ದರು.
ಇದೀಗ ಖಾದರ್ ಮಾತಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಸಮುದಾಯದಿಂದಲೇ ಆಕ್ರೋಶ ಹೊರಬಿದ್ದಿದೆ. ಕೆಲವು ಕಿಡಿಗೇಡಿಗಳು ಸಚಿವರ ಕ್ಷೇತ್ರ ಉಳ್ಳಾಲದಲ್ಲಿ ಫ್ಲೆಕ್ಸ್ , ಬ್ಯಾನರ್ ಗಳನ್ನು ಹರಿದು ಹಾಕಿ ತಮ್ಮ ಸಿಟ್ಟು ಹೊರಹಾಕಿದ್ದಾರೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟ ಸಚಿವ ಖಾದರ್ ಅವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆ ತೆರಳುವ ಕರಾವಳಿಯ ಮುಸ್ಲಿಂ ಸಮುದಾಯದ ಯುವಕರನ್ನು ಹಿಯಾಳಿಸಿರುವುದು ಸರಿಯಲ್ಲ ಎಂದು ಟೀಕಿಸಿರುವ ಮುಸ್ಲಿಂ ಒಕ್ಕೂಟ, ಸಚಿವ ಯು.ಟಿ ಖಾದರ್ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದೆ.
ಚುನಾವಣೆ ಹತ್ತಿರ ಬರ್ತಿರುವಾಗಲೇ ಯು.ಟಿ. ಖಾದರ ಇಂತಹ ಬೆಳವಣಿಗೆ ಆಹಾರವಾಗಿರುವುದು ಅವರ ವಿರೋಧಿಗಳಿಗೆ ಭರಪೂರ ಸರಕು ನೀಡಿದಂತಾಗಿದೆ.
ಯುಟಿ ಖಾದರ್ ವಿರುದ್ಧ ಜೆಡಿಎಸ್ ನಿಂದ ಮುಸ್ಲಿಂ ಮುಖಂಡ ಅಶ್ರಫ್ ಕಣಕ್ಕೆ?
ಕಾಂಗ್ರೆಸ್ ಬಗ್ಗೆ ಅಮಿತ್ ಶಾಗೆ ಭಯ - ಯು.ಟಿ. ಖಾದರ್ ವ್ಯಂಗ್ಯ
ಮೋದಿ ಅವರ ಬೆಂಗಳೂರು ಭಾಷಣ ಕೇವಲ 'ಸಂಡೇ ಶೋ': ಯು.ಟಿ.ಖಾದರ್