'ಸೌಹಾರ್ದತೆಯ' ಶೋಭಾಯಾತ್ರೆಗೆ ಮುಸ್ಲಿಮರಿಂದ ಸ್ವಾಗತ
ಮಂಗಳೂರು, ಜನವರಿ 7: ಶ್ರೀ ಉಳ್ಳಾಲ್ತಿ ಅಮ್ಮನವರ ನೂತನ ಸ್ವರ್ಣ ಬಿಂಬ ಹಾಗೂ ಕಂಚಿನ ಬಿಂಬಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಶ್ರೀ ಉಳ್ಳಾಲ್ತಿ ಧರ್ಮ ಅರಸರ ಧರ್ಮ ನಡಾವಳಿ ಮಹೋತ್ಸವ ಜನವರಿ 6 ರಿಂದ 12ರ ಸೌಹಾರ್ದಯುತವಾಗಿ ನಡೆಯಲಿದ್ದು ಇದರ ಅಂಗವಾಗಿ ನಡೆದ ಶೋಭಾಯಾತ್ರೆಯನ್ನು ಮುಸಲ್ಮಾನರು ಸ್ವಾಗತಿಸಿದರು.
ಈ ಪ್ರಯುಕ್ತ ಶುಕ್ರವಾರ ಸಂಜೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಇರುವ ಜೈ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆಗೆ ಉಮಾಪುರಿಯ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್ ಚಾಲನೆ ನೀಡಿದರು. ಸುಮಾರು ಸಾವಿರಕ್ಕೂ ಅಧಿಕ ಹಿಂದೂ ಧರ್ಮಿಯರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ 50ಕ್ಕೂ ಅಧಿಕ ಮುಸ್ಲಿಂ ಬಾಂಧವರು ಮೆರವಣಿಗೆಯನ್ನು ಸ್ವಾಗತಿಸಿದರು. ಎಲ್ಲರಿಗೂ ತಂಪು ಪಾನೀಯ ಮತ್ತು ಕುಡಿಯುವ ನೀರು ವಿತರಿಸಿದರು.[ದಸರಾ : ಮಡಿಕೇರಿಯಲ್ಲಿ ದಶ ಮಂಟಪಗಳ ಶೋಭಾಯಾತ್ರೆ]
ಪಾನೀಯ ವಿತರಣೆಯ ನೇತೃತ್ವ ವಹಿಸಿದ್ದ ಉಳ್ಳಾಲ ನಗರಸಭೆ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಮಾತನಾಡಿ, ಉಳ್ಳಾಲದಲ್ಲಿ ಎಲ್ಲರೂ ಜತೆಯಾಗಿ ಬಾಳುತ್ತಿದ್ದೇವೆ. ಹೊರೆಕಾಣಿಕೆ ಮೆರವಣಿಗೆಯಲ್ಲಿ ಎಲ್ಲರೂ ಪಾಲ್ಗೊಳ್ಳುವ ಹಾಗೂ ಮೆರವಣಿಗೆಯಲ್ಲಿ ಭಕ್ತರಿಗೆ ತಂಪು ಪಾನೀಯ ವಿತರಿಸಿರುವುದು ಇದಕ್ಕೆ ಸಾಕ್ಷಿ. ಉಳ್ಳಾಲದಲ್ಲಿ ಕೆಡುಕು ಉಂಟು ಮಾಡುವ ಕೆಲವರಿಗೆ ಇದು ಪಾಠವಾಗಲಿದೆ ಎಂದರು.
ನಗರಸಭೆ ಸದಸ್ಯ ಮುಸ್ತಾಫ, ಸ್ಥಳೀಯರಾದ ಫೈರೋಝ್, ಅದ್ರಾಮ, ಮೋನು, ಅಹಮ್ಮದ್ ಬಾವಾ ಕೊಟ್ಟಾರ ತಂಪು ಪಾನೀಯಗಳನ್ನು ವಿತರಿಸಿದರು. ಇದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.