ಹಿಂದೂ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು
ಮಂಗಳೂರು, ಜೂನ್ 17 : ಕೋಮುದ್ವೇಷದ ಅಪಖ್ಯಾತಿಗೆ ಗುರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಜ್ವಲಂತ ನಿದರ್ಶನ ಬೆಳಕಿಗೆ ಬಂದಿದೆ. ಪುತ್ತೂರಿನ ಕಬಕದ ವಿದ್ಯಾಪುರ ಜನವಸತಿ ಕಾಲನಿಯಲ್ಲಿ ಈ ಘಟನೆ ನಡೆದಿದೆ.
ಇಲ್ಲಿನ ಜನವಸತಿ ಕಾಲನಿಯಲ್ಲಿ ವಾಸವಿದ್ದ ಭವಾನಿ (52) ಎಂಬುವವರು ಅಕಾಲಿಕವಾಗಿ ನಿಧನರಾಗಿದ್ದರು. ಭವಾನಿ ಮತ್ತು ಅವರ ಸೋದರ ಕೃಷ್ಣ ಮಾತ್ರ ಮನೆಯಲ್ಲಿ ವಾಸವಿದ್ದು, ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ . ಆದರೆ, ನಿನ್ನೆ ಬೆಳಗ್ಗೆ ಭವಾನಿ ಅವರು ಮೃತಪಟ್ಟಾಗ ಶವದ ಅಂತ್ಯಸಂಸ್ಕಾರಕ್ಕೂ ಸಹೋದರ ಕೃಷ್ಣ ಅವರ ಬಳಿ ಹಣವಿರಲಿಲ್ಲ.
ಗೂಡ್ಸ್ ಗಾಡಿಯಲ್ಲೇ ಶವ ರವಾನೆ: ಮೈಸೂರಿನಲ್ಲಿ ಅಮಾನವೀಯ ಘಟನೆ
ಈ ಸಂದರ್ಭದಲ್ಲಿ ಸ್ಥಳೀಯರು ಶವ ಸಂಸ್ಕಾರಕ್ಕೂ ಹತ್ತಿರ ಬರಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಭವಾನಿ ಅವರ ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಮುಸ್ಲಿಂ ಬಂಧುಗಳು ಒಟ್ಟಾಗಿದ್ದಾರೆ. ಮಹಿಳೆಯರು ಮತ್ತು ಯುವಕರು ಒಟ್ಟು ಸೇರಿ ಹಣ ಸಂಗ್ರಹಿಸಿ ಶವವನ್ನು ಮನೆಯಿಂದ ಹೊರಕ್ಕೆ ಒಯ್ದು ಅಂತಿಮ ಸಂಸ್ಕಾರ ನಡೆಸಿದ್ದಾರೆ.
ರಂಜಾನ್ ಸಂಭ್ರಮದ ನಡುವೆಯೂ ಮುಸ್ಲಿಮರು ಹಿಂದು ಮಹಿಳೆಯ ಶವವನ್ನು ಸ್ಮಶಾನಕ್ಕೆ ಹೊತ್ತೊಯ್ದು ಸಂಸ್ಕಾರ ನೆರವೇರಿಸಿದ್ದು, ಶ್ಲಾಘನೆಗೆ ಪಾತ್ರವಾಗಿದ್ದಲ್ಲದೆ ಕೋಮು ಸಾಮರಸ್ಯಕ್ಕೆ ನಿದರ್ಶನವಾಗಿದೆ.