ಗೋವುಗಳ ಅಕ್ರಮ ಸಾಗಾಟಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ
ಮಂಗಳೂರು, ಜೂನ್ 11: ಗೋವುಗಳ ಕಳ್ಳತನ ಹಾಗು ಅಕ್ರಮ ಸಾಗಾಟದ ವಿರುದ್ಧ ಮುಸ್ಲಿಂ ಸಂಘಟನೆಗಳು ದನಿ ಎತ್ತಿವೆ. ಇಸ್ಲಾಂ ಧರ್ಮದಲ್ಲಿ ಅಕ್ರಮ ಹಾಗೂ ಕಳ್ಳತನಕ್ಕೆ ಅವಕಾಶ ಇಲ್ಲ. ಯಾವುದೇ ಪ್ರಾಣಿಯನ್ನು ಕಳವು ಮಾಡಿ, ಅಕ್ರಮವಾಗಿ ಸಾಗಿಸಿ, ಹತ್ಯೆ ಮಾಡುವುದು ಧರ್ಮ ವಿರೋಧಿ ಎಂಬ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಲ್ಹಾಜ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರ ಹೇಳಿಕೆಗೆ ಬೆಂಬಲ ವ್ಯಕ್ತವಾಗುತ್ತಿದೆ.
ಉಡುಪಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಒಂದು ಧರ್ಮದವರು ಗೋವನ್ನು ಪೂಜನೀಯವಾಗಿ ಕಾಣುತ್ತಿದ್ದರೆ, ಇನ್ನೊಂದು ಧರ್ಮದವರು ಅದನ್ನು ಸೇವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಧರ್ಮದವರ ಭಾವನೆಗೆ ಧಕ್ಕೆ ಬಾರದಂತೆ ಗೌರವದಿಂದ ನಾವು ನಡೆದುಕೊಳ್ಳಬೇಕಾಗಿದೆ. ಸಾಗಾಟ ಮಾಡುವಾಗ ಜಾನುವಾರುಗಳಿಗೆ ಚಿತ್ರಹಿಂಸೆ ನೀಡಬಾರದು. ಕಳವುಗೈದ ದನ, ಕರುಗಳನ್ನು ವಧೆ ಮಾಡಬಾರದು. ಅಂತಹ ಜಾನುವಾರುಗಳ ಮಾಂಸವನ್ನು ಬೇರೆಯವರಿಗೆ ತಿನ್ನಿಸಬಾರದು. ಹಲಾಲ್ ರೂಪದಲ್ಲಿರುವ ಮಾಂಸವನ್ನು ಮಾತ್ರ ನಮಗೆ ತಿನ್ನಲು ಇಸ್ಲಾಂ ಕಲಿಸಿ ಕೊಟ್ಟಿದೆ ಎಂದು ಅವರು ಹೇಳಿಕೆ ನೀಡಿದ್ದರು.
ಬೆಳ್ತಂಗಡಿಯಲ್ಲಿ ಐಷಾರಾಮಿ ಕಾರಿನಲ್ಲಿ ದನಗಳ ಸಾಗಾಟ
ಈಗ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಅವರ ಹೇಳಿಕೆಗೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯೂತ್ ಲೀಗ್ ಬೆಂಬಲ ಸೂಚಿಸಿದೆ. ಮಾಂಸಕ್ಕಾಗಿ ದನಕರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುವ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಖಾಸಗಿ ಬಸ್ ನಲ್ಲಿ ಅಕ್ರಮ ದನದ ಮಾಂಸ ಸಾಗಾಟ ಪತ್ತೆ
ಇತ್ತೀಚೆಗೆ ಬೆಳ್ತಂಗಡಿಯ ಮುಂಡಾಜೆಯಲ್ಲಿ ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುವಾಗ ಕಾರಿನಲ್ಲಿದ್ದ ಐದು ದನಗಳು ಸತ್ತು, ಒಂದು ಒದ್ದಾಡುವ ಸ್ಥಿತಿಯಲ್ಲಿದ್ದ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆಯನ್ನು ಖಂಡಿಸಿರುವ ಯೂತ್ ಲೀಗ್, ಹಣಕ್ಕಾಗಿ ಗೋವುಗಳಿಗೆ ಹಿಂಸೆ ಕೊಟ್ಟು, ಕ್ರೂರವಾಗಿ ಕೊಂದು ಮಾಂಸದ ವ್ಯಾಪಾರ ಮಾಡುವ ಯಾರೇ ಆಗಲಿ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದೆ.