'ವಿಜಯಾ ಬ್ಯಾಂಕ್ ವಿಲೀನ, ಏಪ್ರಿಲ್ 1 ಕರಾವಳಿ ಪಾಲಿಗೆ ಬ್ಲ್ಯಾಕ್ ಡೇ'
ಮಂಗಳೂರು, ಮಾರ್ಚ್ 30: ಕೇಂದ್ರ ಸರಕಾರ ಏಪ್ರಿಲ್ 1 ರಿಂದ ವಿಜಯಾ ಬ್ಯಾಂಕ್ ಅಸ್ಥಿತ್ವವನ್ನು ಅಧಿಕೃತವಾಗಿ ರದ್ದುಗೊಳಿಸಿ, ಬ್ಯಾಂಕ್ ಅಫ್ ಬರೋಡಾದ ಭಾಗವಾಗಿ ಘೋಷಿಸಿರುವುದು ಅತ್ಯಂತ ಖಂಡನೀಯ ಎಂದು ಡಿ ವೈ ಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತ ಪಡಿಸಿದ್ದಾರೆ .
ಮಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕರಾವಳಿಯ ಪ್ರತಿಷ್ಠೆಯ ಸಂಕೇತವಾಗಿದ್ದ ವಿಜಯ ಬ್ಯಾಂಕ್ ಅನ್ನು ನಷ್ಟ ದಲ್ಲಿರುವ ಇತರ ಬ್ಯಾಂಕ್ ಗಳೊಂದಿಗೆ ವಿಲೀನ ಮಾಡುವ ಮೂಲಕ ಕೇಂದ್ರದ ಮೋದಿ ಸರಕಾರ ತುಳುನಾಡಿನ ಜನರ ಭಾವನೆ, ಬೇಡಿಕೆಯನ್ನು ಪೂರ್ಣವಾಗಿ ಕಡೆಗಣಿಸಿದೆ ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಆಘಾತಕಾರಿ ಬೆಳವಣಿಗೆ ವಿಲೀನ ಪ್ರಕ್ರಿಯೆ ತಡೆಯಲು ಯತ್ನಿಸದ ಕರಾವಳಿ ಭಾಗದ ಬಿಜೆಪಿ ಸಂಸದರು, ಶಾಸಕರ ವೈಫಲ್ಯವೇ ನೇರ ಕಾರಣ ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಅತ್ತಾವರ ಎ ಬಿ ಶೆಟ್ಟಿ, ಮೂಲ್ಕಿ ಸುಂದರ ರಾಮ ಶೆಟ್ಟರ ಅಪಾರ ಶ್ರಮದ ಫಲವಾಗಿ ವಿಜಯಾ ಬ್ಯಾಂಕ್ ಬೆಳೆದು ನಿಂತಿತ್ತು. ಕರಾವಳಿ ಭಾಗದ ಯುವಜನರಿಗೆ ಉದ್ಯೋಗ, ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ಬಂಡವಾಳ ನೀಡುತ್ತಾ ಕರಾವಳಿಯ ಆರ್ಥಿಕತೆಗೆ ವಿಜಯಾ ಬ್ಯಾಂಕ್ ಅಪಾರ ಕೊಡುಗೆ ನೀಡಿದೆ. ತನ್ನ ಬೆಳವಣಿಗೆ, ಜನೋಪಕಾರಿ ನಿಲುವುಗಳಿಂದ ತುಳುನಾಡಿನ ಅಸ್ಮಿತೆಯಾಗಿಯೂ ವಿಜಯಾ ಬ್ಯಾಂಕ್ ಕರಾವಳಿಗರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿತ್ತು.
ಲಾಭದಲ್ಲಿ ನಡೆಯುತ್ತಿದ್ದ ವಿಜಯಾ ಬ್ಯಾಂಕನ್ನು ಗುಜರಾತ್ ಮೂಲದ ಬ್ಯಾಂಕ್ ಗಳೊಂದಿಗೆ ವಿಲೀನ ಮಾಡುವ ನಿರ್ಧಾರವನ್ನು ಕೇಂದ್ರದ ನರೇಂದ್ರ ಮೋದಿ ಸರಕಾರ ಪ್ರಕಟಿಸಿದಾಗ ಇಡೀ ಕರಾವಳಿ ಈ ಜನವಿರೋಧಿ ತೀರ್ಮಾನವನ್ನು ವಿರೋಧಿಸಿ ಪ್ರತಿಭಟನೆ ದಾಖಲಿಸಿತ್ತು.
ವಿಲೀನ ತೀರ್ಮಾನ ಹಿಂಪಡೆದು ಕರಾವಳಿಯ ಹೆಮ್ಮೆಯಾದ ವಿಜಯಾ ಬ್ಯಾಂಕ್ ಉಳಿಸುವಂತೆ ಸ್ಥಳೀಯ ಸಂಸದರು, ಶಾಸಕರನ್ನು ಆಗ್ರಹಿಸಿತ್ತು.
ಆ ಸಂದರ್ಭ ವಿಲೀನ ತೀರ್ಮಾನ ಬದಲಾಗುವ ಭರವಸೆ ಜನತೆಯಲ್ಲಿ ಮೂಡಿತ್ತು. ಅದಕ್ಕೆ ಪೂರಕವಾಗಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಸದಾನಂದ ಗೌಡ ವಿಜಯಾ ಬ್ಯಾಂಕ್ ಉಳಿಸಲು ಯತ್ನಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಎಲ್ಲಾ ನಿರೀಕ್ಷೆಗಳನ್ನು ಮೀರಿ ಎಪ್ರಿಲ್ ಒಂದರಿಂದ ವಿಜಯಾ ಬ್ಯಾಂಕ್ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ಎಪ್ರಿಲ್ ಒಂದು ಸುಂದರ ರಾಮ ಶೆಟ್ಟರ ಕನಸು ಕಮರಿದ ಕರಾಳ ದಿನವಾಗಿ ಇತಿಹಾಸದಲ್ಲಿ ದಾಖಲಾಗಲಿದೆ.
ಕರಾವಳಿಯ ಜನತೆಯೂ ಏಪ್ರಿಲ್ 1 ನ್ನು ಬ್ಲ್ಯಾಕ್ ಡೇ ಯನ್ನಾಗಿ ಆಚರಿಸಿ ಕೇಂದ್ರದ ಮೋದಿ ಸರಕಾರ, ಸ್ಥಳೀಯ ಬಿಜೆಪಿ ಸಂಸದರಾದ ನಳಿನ್ ಕುಮಾರ್ ಕಟೀಲ್ , ಶೋಭಾ ಕರಂದ್ಲಾಜೆಯವರಿಗೆ ನಾಗರಿಕರ ಪ್ರಬಲ ಪ್ರತಿಭಟನೆ ದಾಖಲಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಸಿದ್ದಾರೆ.