ಸುರತ್ಕಲ್: ಟೋಲ್ ಕೇಂದ್ರ ರದ್ದುಗೊಳಿಸುವಂತೆ ಸೆ. 21ರಂದು ಪ್ರತಿಭಟನೆ
ಮಂಗಳೂರು, ಸೆಪ್ಟೆಂಬರ್ 18 : ಸುರತ್ಕಲ್ ಟೋಲ್ ಕೇಂದ್ರ ರದ್ದುಗೊಳಿಸುವಂತೆ, ಸರ್ವಿಸ್ ರಸ್ತೆಗಳ ನಿರ್ಲಕ್ಷ್ಯವನ್ನು ವಿರೋಧಿಸಿ ಮತ್ತು ಹೆದ್ದಾರಿ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಸೆಪ್ಟೆಂಬರ್ 21ರಂದು ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಅಕ್ರಮ ಸುಂಕ ಸಂಗ್ರಹಿಸುತ್ತಿರುವ ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚಬೇಕು, ಹೆದ್ದಾರಿ ಗುಂಡಿಗಳನ್ನು ಮುಚ್ಚಿ ಕೂಡಲೇ ದುರಸ್ಥಿಗೆ ಮುಂದಾಗಬೇಕು ಎಂದು ಆಗ್ರಹಿಸಿ ಜನಪರ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 21ರ ಗುರುವಾರ ಬೆಳಗ್ಗೆ 10 ಗಂಟೆಗೆ ಸುರತ್ಕಲ್ ಟೋಲ್ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಯಲಿದೆ.
ಜನಹಿತ ಬಯಸುವ ವಿವಿಧ ಸಂಘ ಸಂಸ್ಥೆಗಳು ಈ ಮೆರವಣಿಗೆ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ ಎಂದು ಟೋಲ್ ವಿರೋಧಿ ಹೋರಾಟ ಸಮಿತಿಯ ಸಮನ್ವಯಕಾರ ಶ್ರೀನಾಥ್ ಕುಲಾಲ್ ತಿಳಿಸಿದ್ದಾರೆ.
ದುಬಾರಿ ಟೋಲ್ ಹಣ ಪಡೆಯುತ್ತಿದ್ದರೂ ಕೂಡಾ ಸರಿಯಾದ ನಿರ್ವಹಣೆ ಇಲ್ಲದೆ ಕೂಳೂರು, ಪಣಂಬೂರು, ಬೈಕಂಪಾಡಿ, ಸುರತ್ಕಲ್ ಭಾಗದ ಹೆದ್ದಾರಿ ಹೊಂಡ ಗುಂಡಿಗಳಿಂದ ತುಂಬಿಹೋಗಿದೆ.
ಹೆದ್ದಾರಿ ನಿಯಮಗಳಿಗೆ ವಿರುದ್ಧವಾಗಿ 10 ಕಿ.ಮೀ ಅಂತರದಲ್ಲಿ ಸುರತ್ಕಲ್ NITK ಹಾಗೂ ಹೆಜಮಾಡಿ ಎರಡು ಕಡೆ ಅಕ್ರಮವಾಗಿ ಟೋಲ್ (ಸುಂಕ) ಸಂಗ್ರಹಿಸಲಾಗುತ್ತಿದೆ.
ಅಷ್ಟೇ ಅಲ್ಲದೆ, ಟೋಲ್ ಗೆ ಪರ್ಯಾಯವಾಗಿರುವ ರಸ್ತೆಗಳನ್ನೂ ಬಲವಂತವಾಗಿ ಮುಚ್ಚುವ ಪ್ರಯತ್ನವನ್ನು ಟೋಲ್ ಗುತ್ತಿಗೆದಾರರು ಮಾಡುತ್ತಿದ್ದು, ಇದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.