ಕುದುರೆ ಏರಿ ಕಾಲೇಜಿಗೆ ಬರುವ ಕುಡ್ಲದ ಕುವರ!
ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಇಂದಿನ ಯುವಕರು ಬೈಕು, ಕಾರುಗಳಿಗೆ ತಂದೆ-ತಾಯಿ ಮುಂದೆ ಬೇಡಿಕೆ ಇಡುತ್ತಾರೆ. ಆದರೆ, ಇಂದಿನ ಕಾಲದಲ್ಲೂ ಕಾಲೇಜು ಯುವಕ ಮಹಾರಾಜನಂತೆ ಕುದುರೆ ಏರಿ ಬರುತ್ತಾನೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು.
ಹೌದು, ಮಂಗಳೂರಿನ ರೋಶನಿ ನಿಲಯದಲ್ಲಿ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ (ಎಂಎಸ್ಡಬ್ಲ್ಯು) ಓದುತ್ತಿರುವ ಅವಿನಂದ್ ಆಚ್ಚನಹಳ್ಳಿ ಕುದುರೆ ಏರಿ ಕಾಲೇಜಿಗೆ ಬರುವ ಕುವರ. ಮೂಲತಃ ಹಾನಸ ಜಿಲ್ಲೆಯ ಸಕಲೇಶಪುರದವಾರದ ಅವಿನಂದ್ ಸದ್ಯ ಮಂಗಳೂರಿನಲ್ಲಿ ಓದುತ್ತಿದ್ದಾರೆ.
ಪರಿಸರ ರಕ್ಷಿಸಲು ತಮ್ಮ ಕೈಲಾದ ಕೊಡುಗೆ ನೀಡಬೇಕು ಎಂಬ ಕಸನು ಕಂಡಿದ್ದ ಅವಿನಂದ್ಗೆ ಹೊಳೆದ ಐಡಿಯಾ ಕುದುರೆ ಸವಾರಿ. ಕಾಲೇಜಿಗೆ ತನ್ನ ಸಿಕಂದರ್ ಕುದುರೆ ಏರಿ ಬರುವ ಇವರು ಅದನ್ನು ಕಾಲೇಜಿನ ಆವರಣದಲ್ಲಿಯೇ ಕಟ್ಟಿ ಹಾಕುತ್ತಾರೆ. ಭಾರೀ ಬಿಸಿಲು ಅಥವ ಮಳೆ ಇದೆ ಎಂದರೆ ಮಾತ್ರ ಕುದುರೆಗೆ ವಿಶ್ರಾಂತಿ. ಇಲ್ಲವಾದಲ್ಲಿ ಅವರ ಸವಾರಿ ಕುದುರೆ ಮೇಲೆ.
ನಿತ್ಯವೂ ಫಳ್ನೀರ್ನಲ್ಲಿರುವ ಮನೆಯಿಂದ ವೆಲೆನ್ಸಿಯಾದಲ್ಲಿರುವ ಕಾಲೇಜಿಗೆ ಕುದುರೆಯಲ್ಲಿ ಬರುವ ಅವಿನಂದ್ಗೆ ಸಂಚಾರಿ ಪೊಲೀಸರಿಂದಾಗಲಿ, ಸಾರ್ವಜನಿಕರಿಂದಾಗಲಿ ಯಾವುದೇ ತೊಂದರೆ ಉಂಟಾಗಿಲ್ಲ, ಹಾಗೆಯೇ ಸಿಕಂದರ್ ಸಹ ಯಾರಿಗೂ ತೊಂದರೆ ನೀಡಿಲ್ಲ. ತರಬೇತಿ ಪಡೆದ ಕುದುರೆ ಸಿಕಂದರ್ ಬಗ್ಗೆ ಮತ್ತು ತಮ್ಮ ಹವ್ಯಾಸದ ಬಗ್ಗೆ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದಾರೆ ಅವಿನಂದ್. ಬನ್ನಿ ಸಿಕಂದರ್ ಬಗ್ಗೆ ತಿಳಿಯೋಣ
ಚಿಕ್ಕಂದಿನಿಂದಲೂ ಕುದುರೆ ಸವಾರಿ ಆಸೆ ಇತ್ತು
ನನಗೆ ಚಿಕ್ಕಂದಿನಿಂದಲೂ ಕುದುರೆ ಸವಾರಿ ಮಾಡುವ ಆಸೆ ಇತ್ತು ಎಂದು ಹೇಳುವ ಅವಿನಂದ್ ಆಚ್ಚನಹಳ್ಳಿ ಅದನ್ನು ಈಗ ಜಾರಿಗೆ ತಂದಿದ್ದಾರೆ. ನಿತ್ಯ ಕಾಲೇಜಿಗೆ ಕುದುರೆ ಏರಿ ಬರುತ್ತಾರೆ. ಮೂಲತಃ ಹಾನಸ ಜಿಲ್ಲೆಯ ಸಕಲೇಶಪುರದವಾರದ ಅವಿನಂದ್ ಸದ್ಯ ಮಂಗಳೂರಿನಲ್ಲಿ ಎಂಎಸ್ಡಬ್ಲ್ಯು ಓದುತ್ತಿದ್ದಾರೆ.
ಎರಡು ತಿಂಗಳು ತರಬೇತಿ ಪಡೆದಿದ್ದೇನೆ
ನನಗೆ ಮೊದಲು ಕುದುರೆ ಓಡಿಸಿ ಅಭ್ಯಾಸವಿರಲಿಲ್ಲ, ಬೆಂಗಳೂರಿನ ಜೆ.ಪಿ.ನಗರದ ಹಾರ್ಸ್ ಟೇಬಲ್ ಸಂಸ್ಥೆಯಲ್ಲಿ ಎರಡು ತಿಂಗಳು ತರಬೇತಿ ಪಡೆದೆ. ನಂತರ ಸಿಕಂದರ್ ಓಡಿಸಲು ಆರಂಭಿಸಿದೆ ಎಂದು ಅವಿನಂದ್ ತಮ್ಮ ಕುದುರೆ ಸವಾರಿ ಕಲಿತ ದಿನಗಳನ್ನು ನೆನಪಿಸಿಕೊಂಡರು.
ಸಿಕಂದರ್ ಬಗ್ಗೆ ಹೇಳಿ
ನನ್ನ ಮೆಚ್ಚಿನ ಕುದುರೆಗೆ ಸಿಕಂದರ್ ಎಂದು ಹೆಸರಿಟ್ಟಿದ್ದೇನೆ. ಮಹಾರಾಷ್ಟ್ರದ ಕಾಟವಾಡಿ ಬ್ರೀಡ್ನ ಈ ಕುದುರೆಯನ್ನು ಮೈಸೂರಿನಿಂದ ತಂದಿದ್ದೇನೆ. ಇದು ತರಬೇತಿ ಪಡೆದ ಕುದುರೆಯಾಗಿದ್ದು, ರಸ್ತೆಯಲ್ಲಿ ಹೇಗೆ ಸಾಗಬೇಕು ಮುಂತಾದ ವಿಚಾರಗಳ ಕುರಿತು ಪರಿಣಿತರಿಂದ ತೆರಬೇತಿ ಪಡೆದಿದೆ. ಆದ್ದರಿಂದ ಜನರಿಗೆ ತೊಂದರೆ ಮಾಡುವುದಿಲ್ಲ ಎಂದು ಸಿಕಂದರ್ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.
ಎರಡು ತಿಂಗಳ ಹಿಂದೆ ತಂದ ಕುದುರೆ
ತರಬೇತಿ
ಪಡೆದ
ಬಳಿಕ
ಅವಿನಂದ್
ಮೈಸೂರಿನಿಂದ
ಸಿಂಕದರ್ನನ್ನು
ತಂದಿದ್ದಾರೆ.
Guardian
for
Infrastructure
developmentನ
ಎಂ.ಪಿ.ಗಣೇಶ್
ಅವರು
ಕುದುರೆಯನ್ನು
ಅವಿನಂದ್ಗೆ
ಕೊಡಿಸುವಲ್ಲಿ
ಸಹಾಯ
ಮಾಡಿದ್ದಾರೆ.
ಕುದುರೆ
ತಂದಾಗಿನಿಂದ
ಫಳ್ನೀರ್ನಲ್ಲಿರುವ
ಮನೆಯಿಂದ
ವೆಲೆನ್ಸಿಯಾದಲ್ಲಿರುವ
ರೋಶನಿ
ನಿಲಯದ
ಕಾಲೇಜಿಗೆ
ಅದರಲ್ಲಿ
ಬರುತ್ತಾರೆ.
ಕಾಲೇಜಿನವರ ಆಕ್ಷೇಪಣೆಯಿಲ್ಲ
ಕಾಲೇಜಿನ ಆಡಳಿತ ಮಂಡಳಿಯಾಗಲಿ, ನನ್ನ ಸ್ನೇಹಿತರಾಗಲಿ ಕುದುರೆ ತುರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ, ಬದಲಾಗಿ ಬೆಂಬಲ ನೀಡುತ್ತಾರೆ ಎಂದು ಅವಿನಂದ್ ಹೇಳುತ್ತಾರೆ. ಕಾಲೇಜಿನಲ್ಲಿ ಅದನ್ನು ಕಟ್ಟಿ ಹಾಕಲು ಜಾಗ ಕೊಟ್ಟಿದ್ದಾರೆ. ನಾನು ಬ್ಯುಸಿ ಇದ್ದರೆ ನನ್ನ ಸ್ನೇಹಿತರು ಸಿಕಂದರ್ ಯೋಗ ಕ್ಷೇಮ ನೋಡಿಕೊಳ್ಳುತ್ತಾರೆ. ಕಾಲೇಜಿನಲ್ಲಿ ಅದಕ್ಕೆ ಹುಲ್ಲು ಹಾಕುವ ಕೆಲಸ ಮಾಡುತ್ತಾರೆ ಎಂದು ಅವಿನಂದ್ ಸ್ನೇಹಿತರ ಸಹಾಯವನ್ನು ನೆನಪು ಮಾಡಿಕೊಳ್ಳುತ್ತಾರೆ.
ಯಾರೂ ತೊಂದರೆ ಮಾಡಿಲ್ಲ
ಸಿಕಂದರ್ ನಲ್ಲಿ ಸಂಚರಿಸುವುದಕ್ಕೆ ಸಂಚಾರಿ ಪೊಲೀಸರಾಗಲಿ, ಸಾರ್ವಜನಿಕರಾಗಲಿ ಆಕ್ಷೇಪಣೆ ಮಾಡಿಲ್ಲ. ಏಕೆಂದರೆ ಸಿಕಂದರ್ ತೆರಬೇತಿ ಪಡೆದ ಕುದುರೆಯಾಗಿದ್ದು ಯಾರಿಗೂ ತೊಂದರೆ ಮಾಡಿಲ್ಲ. ಮನೆಯಲ್ಲಿ ತಂದೆ-ತಾಯಿ ಸಹ ನನಗೆ ಬೆಂಬಲ ನೀಡುತ್ತಾರೆ ಎಂದು ಅವಿನಂದ್ ಹೇಳುತ್ತಾರೆ.
ಇಂತಹ ವಿನೂತನ ಪ್ರಯತ್ನ ಏಕೆ
ನಾನು ಮಾಸ್ಟರ್ ಆಫ್ ಸೋಶಿಯಲ್ ವರ್ಕ್ (ಎಂಎಸ್ಡಬ್ಲ್ಯು) ವಿದ್ಯಾರ್ಥಿ ಪರಿಸರವನ್ನು ಕಾಪಾಡಲು ನನ್ನ ಕೈಲಾದ ಪ್ರಯತ್ನ ಮಾಡಬೇಕು ಎಂಬುದು ನನ್ನ ಆಸೆ. ಅದಕ್ಕಾಗಿ ಇಂತಹ ತೀರ್ಮಾನ ತೆಗೆದುಕೊಂಡೆ. ಎಲ್ಲಾ ಕಡೆ ನಾನು ಕುದುರೆ ಏರಿ ಪ್ರಯಾಣಿಸುತ್ತೇನೆ. ಭಾರೀ ಮಳೆ ಅಥವ ಬಿಸಿಲಿದ್ದರೆ ಮಾತ್ರ ಸಿಕಂದರ್ ತೆಗೆದುಕೊಂಡು ಹೋಗುವುದಿಲ್ಲ. ಅದಕ್ಕೆ ಆವಾಗ ವಿಶ್ರಾಂತಿ ನೀಡುತ್ತೇನೆ ಎಂದು ಅವಿನಂದ್ ಹೇಳುತ್ತಾರೆ.
ಸವಾರಿ ಬಗ್ಗೆ ತರಬೇತಿ ನೀಡಬೇಕು
ಅವಿನಂದ್ ಮುಂದೆ ಕುದುರೆ ಸವಾರಿ ಬಗ್ಗೆ ತರಬೇತಿ ನೀಡುವ ಶಾಲೆ ಆರಂಭಿಸಬೇಕೆಂಬ ಹಂಬಲ ಹೊಂದಿದ್ದಾರೆ. ಪ್ರಾಣಿಪ್ರಿಯರಾಗಿರುವ ಅವರು ಕಾಲೇಜಿನಲ್ಲಿಯೂ ಕೆಲವು ಪಕ್ಷಿಗಳನ್ನು ತಂದಿಟ್ಟಿದ್ದಾರೆ.