ಮಂಗಳೂರಿನ 'ಪಿಲಿಕುಳ ಜೈವಿಕ ಉದ್ಯಾನವನ' ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್
ಮಂಗಳೂರು, ಅಕ್ಟೋಬರ್ 6: ಮಂಗಳೂರು ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನ ಇನ್ನಷ್ಟು ಸುಂದರಗೊಳ್ಳುತ್ತಿದೆ. ಉದ್ಯಾನವನದಲ್ಲಿ ಎಂ.ಆರ್.ಪಿ.ಎಲ್ ಪ್ರಾಯೋಜಕತ್ವದಲ್ಲಿ ಪ್ರಥಮ ಹಂತದ ಹಸಿರೀಕರಣ ಯೋಜನೆ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ.
ಉದ್ಯಾನವನದ 30 ಎಕರೆ ಪ್ರದೇಶಗಳಲ್ಲಿ 2000 ಕ್ಕೂ ಹೆಚ್ಚು ಪಶ್ಚಿಮ ಘಟ್ಟದ ವಿವಿಧ ತಳಿಯ ಸಸ್ಯಗಳನ್ನು ನೆಡಲಾಗಿದೆ . ಜೈವಿಕ ಉದ್ಯಾನವನದಲ್ಲಿರುವ 300 ಕ್ಕೂ ಮಿಕ್ಕಿ ಸಸ್ಯಹಾರಿ ಪ್ರಾಣಿಗಳಿಗೆ ತಿನ್ನಲು ನೇಪಿಯರ್ ಸಿ.ಒ 4 ಜಾತಿಯ ಮೇವನ್ನು ಅಲ್ಲಿಯೇ ಬೆಳೆಸಲು ಯೋಜನೆ ರೂಪಿಸಲಾಗಿದೆ.
ನಿಸರ್ಗಧಾಮದಲ್ಲಿ ಔಷಧೀಯ ಸಸ್ಯಗಳ
ಪಶ್ಚಿಮ ಘಟ್ಟದ ವಿವಿಧ ತಳಿಯ 2000 ಸಸ್ಯಗಳನ್ನು ನೆಡಲಾಗಿದ್ದು ಇದರಲ್ಲಿ ಔಷಧೀಯ ಸಸ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೆಡಲಾಗಿದೆ.
ಚಿಟ್ಟೆ ಆಕರ್ಷಣೆಗೆ ಮೆಗಾ ಪ್ಲಾನ್
ಇದೇ ಪ್ರದೇಶದಲ್ಲಿ ಚಿಟ್ಟೆಗಳನ್ನು ಆಕರ್ಷಿಸುವ ಉದ್ದೇಶದಿಂದ ಚಿಟ್ಟೆಗಳಿಗೆ ಪ್ರೀಯವಾದ 1000 ಕ್ಕೂ ಹೆಚ್ಚು ವಿವಿಧ ಜಾತಿಯ ಸಸ್ಯಗಳನ್ನು ನೆಡಲಾಗಿದೆ. ಇದರಿಂದ ಚಿಟ್ಟೆಗಳು ಉದ್ಯಾನವನಕ್ಕೆ ಆಗಮಿಸಲಿವೆ.
ಸುಂದರ ತಾವರೆಗಳು
ವಿವಿಧ ಜಾತಿಯ ಸುಂದರ ತಾವರೆಗಳು ಹಾಗೂ ಜಲ ಸಸ್ಯಗಳು ಮುಂಬರುವ ದಿನಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲಿದೆ . ಮೃಗಾಲಯದ ಪ್ರಾಣಿ ಪಕ್ಷಿಗಳಿಗಾಗಿಯೇ ಬಾಳೆ, ಅನಾನಸ್, ಕಬ್ಬು, ಗೆಡ್ಡೆ ಗೆಣಸುಗಳನ್ನು ಬೆಳೆಸಲಾಗುತ್ತಿದೆ. ಈ ಪ್ರದೇಶವು ಸಸ್ಯಶಾಸ್ತ್ರ ಅಧ್ಯಯನ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ.
ಅಕ್ಟೋಬರ್ 8ರಂದು ಉದ್ಘಾಟನೆ
ಅಕ್ಟೋಬರ್ 8 ರಂದು ಜೈವಿಕ ಉದ್ಯಾನವನದಲ್ಲಿ ಪೂರ್ಣಗೊಂಡ ಪ್ರಥಮ ಹಂತದ ಹಸಿರೀಕರಣ ಯೋಜನೆ ಉದ್ಘಾಟನೆ ಗೊಳ್ಳಲಿದೆ. ಈ ಸಂದರ್ಭದಲ್ಲಿ ಎರಡನೇ ಹಂತದ ಯೋಜನೆಗೂ ಚಾಲನೆ ದೊರಕಲಿದೆ .