'ನನ್ನ ವಿರುದ್ಧ ಜಿಹಾದಿಗಳ ಷಡ್ಯಂತ್ರ'- ಪೋಸ್ಟ್ ಬಗ್ಗೆ ಸಂಸದೆ ಶೋಭಾ ಸ್ಪಷ್ಟನೆ
ಮಂಗಳೂರು, ಮೇ 25: ಕಲ್ಲಡ್ಕದ ಯುವಕ ನಿಶಾಂತ್ ಎಂಬುವವರ ಸಾವಿನ ಕುರಿತಾಗಿ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿರುವ ಸಂಸದೆ ಶೋಭಾ ಕರಂದ್ಲಾಜೆ, "ಜಿಹಾದಿಗಳು ಮತ್ತೊಂದು ಷಡ್ಯಂತ್ರ ಮಾಡಿದ್ದು, ನನ್ನ ಹೆಸರಲ್ಲಿ ಸುಳ್ಳು ಪೋಸ್ಟ್ ಮಾಡಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Recommended Video
ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಅವರು, "ಕಲ್ಲಡ್ಕದ ನಿಶಾಂತ್ ಎಂಬ ಯುವಕ ಸಾವನ್ನಪ್ಪಿದ್ದು, ಅದು ಜಿಹಾದಿಗಳಿಂದ ಆದ ತೊಂದರೆಯೆಂದು ನಾನು ಟ್ವೀಟ್ ಮಾಡಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇವೆಲ್ಲವೂ ಸುಳ್ಳು ಸುದ್ದಿ. ನಾನು ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ, ಈ ಕುರಿತು ಯಾವುದೇ ಪೋಸ್ಟ್ ಮಾಡಿಲ್ಲ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರಿನ ಪೊಲೀಸ್ ಆಯುಕ್ತರಲ್ಲಿ ವಿನಂತಿಸುತ್ತೇನೆ" ಎಂದು ತಿಳಿಸಿದ್ದಾರೆ.
ಶೋಭಾ ಕರಂದ್ಲಾಜೆಗೆ ಬೆದರಿಕೆ ಕರೆ: ವಿಡಿಯೋ ಮಾಡಿ ಬೇಸರ ಹಂಚಿಕೊಂಡ ಸಂಸದೆ
"ಕಿಡಿಗೇಡಿಗಳ ಈ ಕೃತ್ಯಕ್ಕೆ ಸಾಥ್ ನೀಡುವ ಹಾಗೂ ಈ ರೀತಿ ವದಂತಿಗಳ ಮೂಲಕ ಸಾಮರಸ್ಯ-ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ಆಯುಕ್ತರಿಗೆ ಸೂಚಿಸಲಾಗಿದೆ. ಮತಾಂಧ ಜಿಹಾದಿಗಳ ಈ ದುಷ್ಕೃತ್ಯಕ್ಕೆ ಕಾಂಗ್ರೆಸ್ ನಾಯಕರು ಸೇರಿಕೊಂಡಿರುವುದು ಅವರ ವಿಕೃತ ಮನಸ್ಥಿತಿಯನ್ನು ತೆರೆದಿಡುತ್ತದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ನಿಶಾಂತ್ ಪ್ರಕರಣ: ಕಲ್ಲಡ್ಕದ ನಿಶಾಂತ್ ಎಂಬ ಯುವಕ ಪಾಣೆ ಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಕೂಡಲೇ ಶಮೀರ್ ಮುಹಮ್ಮದ್ ಮೊಮ್ಮು, ತೌಸೀಫ್ ಝಾಹಿದ್ ಜಾಯಿ, ಅಕ್ಕರಂಗಡಿಯ ಮುಕ್ತಾರ್, ಆರಿಫ್ ಹೈವೇ ಎಂಬುವರು ನದಿಗೆ ಹಾರಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.
ಈ ಘಟನೆಯ ಬಳಿಕ "ಜಿಹಾದಿಗಳಿಂದ ಹಿಂದೂ ಸಂಘಟನೆಯ ಕಲ್ಲಡ್ಕದ ನಿಶಾಂತ್ ಎಂಬ ಯುವಕನ ಹತ್ಯೆ ನಡೆದಿದೆ ಎಂಬ ಮಾಹಿತಿ ಬಂದಿದೆ. ಕೂಡಲೇ ಆ ಜಿಹಾದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಮಿತ್ ಶಾರಿಗೆ ತಿಳಿಸಿದ್ದೇನೆ" ಎಂದು ಸಂಸದೆ ಶೋಭಾ ಕರಂದ್ಲಾಜೆ ಪೋಸ್ಟ್ ಮಾಡಿರುವಂತೆ ಸ್ಕ್ರೀನ್ ಶಾಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, "ನಾನು ಈ ರೀತಿಯ ಯಾವುದೇ ಹೇಳಿಕೆ ಅಥವಾ ಟ್ವೀಟ್ ಮಾಡಿರುವುದಿಲ್ಲ, ಈ ಟ್ವೀಟನ್ನು ನನ್ನದೆಂದು ಬಿಂಬಿಸಲು ಪ್ರಯತ್ನಿಸಿರುತ್ತಾರೆ" ಎಂದಿದ್ದಾರೆ.