ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ಕೊಟ್ಟ ಸಂಸದ ನಳಿನ್ ಕುಮಾರ್ ಕಟೀಲ್
ಮಂಗಳೂರು, ಮೇ 30: ಕರಾವಳಿಯಲ್ಲಿ ಇಂದು ವರುಣ ಬಿಡುವು ಪಡೆದಿದ್ದಾನೆ. ನಿನ್ನೆ ಸುರಿದ ಭಾರೀ ಮಳೆಗೆ ತತ್ತರಿಸಿದ್ದ ಮಂಗಳೂರಿನ ಜನ ಇಂದು ನಿರಾಳರಾಗಿದ್ದಾರೆ. ಮಂಗಳೂರಿನಲ್ಲಿ ಸೃಷ್ಠಿ ಅಗಿದ್ದ ಪ್ರವಾಹದ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ಜಿಲ್ಲಾಡಳಿತದ ವತಿಯಿಂದ ಒಟ್ಟು ಮಳೆ ಹಾನಿಯ ಬಗ್ಗೆ ಇನ್ನಷ್ಟೇ ಅಂದಾಜು ಮಾಡಬೇಕಾಗಿದೆ.
ಈ ನಡುವೆ ನೆರೆಪೀಡಿತ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಇಂದು ಭೇಟಿ ನೀಡಿದರು. ನಗರದ ಬಿಜೈ, ಆನೆಗುಂಡಿ, ನಂದಿಗುಡ್ಡೆ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಪ್ರವಾಹ ಪೀಡಿತ ಕರಾವಳಿಗೆ ಪರಿಹಾರ: ಸಿಎಂ ಎಚ್ಡಿಕೆ ಭರವಸೆ
ನಿನ್ನೆ ಸುರಿದ ಭಾರೀ ಮಳೆಗೆ ನಗರದ ಆನೆಗುಂಡಿ ಪ್ರದೇಶದ 30 ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಭೇಟಿ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಸಂತ್ರಸ್ತರಿಗೆ ಪರಿಹಾರ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತುರ್ತು ಪರಿಸ್ಥಿತಿ ನಿಭಾಯಿಸಲು ಬಿಜೆಪಿ ವತಿಯಿಂದ ಎರಡು ಸಹಾಯ ಕೇಂದ್ರ ತೆರೆಯಲಾಗಿದ್ದು, ಮಂಗಳೂರು ನಗರದಲ್ಲಾದ ಈ ಅವಾಂತರಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದರು.
ನಗರದಲ್ಲಿ ಮಳೆಗೆ ಸಂಗ್ರಹವಾಗಿದ್ದ ಮಳೆ ನೀರು ಸರಿಯಾಗಿ ಹರಿದು ಹೋಗಿಲ್ಲ. ನಗರದಲ್ಲಿ ರಾಜಕಾಲುವೆಗಳ ಒತ್ತುವರಿಯಾಗಿದೆ. ಈ ಒತ್ತುವರಿ ಕುರಿತು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಒತ್ತುವರಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ತಿಳಿಸಿದ್ದೇನೆ ಎಂದು ಅವರು ಹೇಳಿದರು.