ಮೋದಿ ಮುಖವಾಡ ಇಟ್ಟುಕೊಂಡು ಸಂಸದ ನಳಿನ್ ಮತ ಯಾಚನೆ: ರಮಾನಾಥ್ ರೈ
ಮಂಗಳೂರು, ಏಪ್ರಿಲ್ 10: ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡವನ್ನು ಇಟ್ಟುಕೊಂಡು ಸಂಸದ ನಳಿನ್ ಕುಮಾರ್ ಕಟೀಲ್ ಜನರಲ್ಲಿ ಮತ ಯಾಚಿಸುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ್ ರೈ ಕಿಡಿ ಕಾರಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಒಬ್ಬ ಕಳಪೆ ಸಂಸದ ಅಂತ ಬಿಜೆಪಿಗರೇ ಹೇಳುತ್ತಿದ್ದಾರೆ. ಕಳೆದ 10 ವರ್ಷದಲ್ಲಿ ನಳಿನ್ ಕುಮಾರ್ ಕಟೀಲ್ ಈ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಕರಾವಳಿಯಲ್ಲಿ ಕೇಸರಿಯಾಗಿ ಬದಲಾದ ಕಾಂಗ್ರೆಸ್: ಉದ್ದೇಶವೇನು?
ಪ್ರಧಾನಿ ಮೋದಿ ದಕ್ಷಿಣ ಕನ್ನಡ ಜಿಲ್ಲೆಗೆ ಏನು ಕೊಟ್ಟಿದ್ದಾರೆ ? ಒಎನ್ ಜಿಸಿ, ಎಂಆರ್ ಪಿಎಲ್, ಪಾಸ್ಪೋರ್ಟ್ ಆಫೀಸ್ ಕರಾವಳಿಗೆ ತಂದದ್ದು ನಮ್ಮ ಕಾಂಗ್ರೆಸ್ ಸರಕಾರ. ಆದರೆ ಬಿಜೆಪಿ ಸರಕಾರ ಇದ್ದ ಸಮಯದಲ್ಲಿ ಇಲ್ಲಿ ಇದ್ದ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ಕಚೇರಿಯನ್ನು ಮುಂಬಯಿಗೆ ವರ್ಗಾವಣೆ ಮಾಡಿದ್ದಾರೆ. ವಿಜಯ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗ ಕಡಬದಲ್ಲಿರುವ ತೋಟಗಾರಿಕಾ ಸಂಶೋಧನಾ ಕೇಂದ್ರವನ್ನು ಹೈದ್ರಾಬಾದ್ ಗೆ ಸ್ಥಳಾಂತರಿಸುತ್ತಿದ್ದಾರೆ ಎಂದ ಅವರು, ಇಷ್ಟೆಲ್ಲಾ ನಡೆಯುತ್ತಿದ್ದರೂ ಸಂಸದ ನಳಿನ್ ಕುಮಾರ್ ಕಟೀಲ್ ಮಾತ್ರ ಚಕಾರ ಎತ್ತಿಲ್ಲ ಎಂದು ಕಿಡಿ ಕಾರಿದರು.