ಮಂಗಳೂರು: ಅಂಗವಿಕಲರ ಜಾಗೃತಿಗೆ ಅಶ್ವಿನಿ ಅಂಗಡಿ ಸಂವಾದ
ಮಂಗಳೂರು, ಮಾ. 12: ವಿಕಲಚೇತನರ ಹಕ್ಕಿಗಾಗಿ ಜಗತ್ತಿನಾದ್ಯಂತ ಸಂಗೀತ, ಚಲನಚಿತ್ರ, ಸಂವಾದಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ಸಾಧಕಿ ಅಶ್ವಿನಿ ಅಂಗಡಿ ಅವರಿಂದ 'ಪ್ರೇರಣಾತ್ಮಕ ಸಂವಾದ' ಕಾರ್ಯಕ್ರಮವನ್ನು ಮಂಗಳೂರಿನ ನವಭಾರತ ವೃತ್ತದ ಸಮೀಪದ ಟಿ. ವಿ. ರಮಣ ಪೈ ಸಭಾಂಗಣದಲ್ಲಿ ಮಾ.14ರಂದು ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ.
ಯುವ ಬ್ರಿಗೇಡ್' ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಧುರೀಣ ರಾಜೇಂದ್ರ ಕುಮಾರ್ ಹಾಗೂ ಕರ್ನಾಟಕ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲಿದ್ದಾರೆ.[ಅಶ್ವಿನಿ ಅಂಗಡಿ ಯಾರು?]
ಯುವ ಬ್ರಿಗೇಡ್ ನಲ್ಲಿ ತೊಡಗಿಕೊಂಡಿರುವ ಅಶ್ವಿನಿ ಅಂಗಡಿ, ಸ್ವತ: ಅಂಧರಾಗಿದ್ದುಕೊಂಡು ಜಗತ್ತಿನ 20 ದೇಶಗಳ ವಿವಿಧ ರೀತಿಯ ಅಂಗವಿಕಲರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ. ಗ್ರಾಮೀಣ ಭಾಗದ ಅಂಗವಿಕಲ ಮಹಿಳೆಯರ ಸಮಗ್ರ ಅಭಿವೃದ್ಧಿ ಪ್ರೇರಣೆ ನೀಡಲು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಚಿಂತನೆಗಳನ್ನು ಪ್ರಚುರ ಪಡಿಸಲು ಸಂವಾದ ಆಯೋಜಿಸಲಾಗಿದೆ.[ಅಶ್ವಿನಿ ಅವರ ಬೆಳಕು ಶಾಲೆ ಬಗ್ಗೆ ಗೊತ್ತಾ]
ಜಾಗತಿಕ ಯುವ ರಾಯಭಾರಿಯಾಗಿರುವ ಅಶ್ವಿನಿ ಅಂಗಡಿ, ಅಂಧರಿಗಾಗಿ ವಸತಿಯುತ ಬೆಳಕು ಅಕಾಡೆಮಿ ಶಾಲೆ' ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇದರಲ್ಲಿ 5 ವರ್ಷದಿಂದ 8ವರ್ಷ ಪ್ರಾಯದ ಅಂಧ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಎಂ ನರೇಶ್ ಶಣೈ (9448123933) ಅವರನ್ನು ಸಂಪರ್ಕಿಸಬಹುದು.