ರಸ್ತೆಯ ಗುಂಡಿ ಮುಚ್ಚಿ ವಾಹನ ಸವಾರರ ಸಂಕಷ್ಟಕ್ಕೆ ನೆರವಾದ ತಾಯಿ- ಮಗಳು
ಮಂಗಳೂರು, ಜುಲೈ 29: ರಸ್ತೆ ಹಾಳಾದರೆ ನೋಡಿಕೊಳ್ಳುವುದಕ್ಕೆ ಸರ್ಕಾರ ಇದೆ, ತೆರಿಗೆ ಕಟ್ಟುತ್ತೇವೆ. ರಸ್ತೆ ದುರಸ್ಥಿ ಮಾಡುವುದು ನಮ್ಮ ಜವಾಬ್ದಾರಿ ಅಲ್ಲ ಎಂದು ನಾವೆಲ್ಲಾ ದೂರಿರುತ್ತೇವೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರಿಯಡ್ಕದ ತಾಯಿ-ಮಗಳು, ಪ್ರತಿದಿನ ರಸ್ತೆಯ ಹೊಂಡ- ಗುಂಡಿಗಳಲ್ಲಿ ಬೀಳುವ ದ್ವಿಚಕ್ರ ವಾಹನ ಸವಾರರ ಸ್ಥಿತಿಯನ್ನು ನೋಡಲಾಗದೆ, ಬಿರುಸಿನ ಮಳೆಯ ನಡುವೆಯೂ ರಸ್ತೆ ದುರಸ್ತಿ ಮಾಡಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿ ಪ್ರದೇಶದ ಪೆರಿಯಡ್ಕ ಎಂಬಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ಹೊಂಡ- ಗುಂಡಿಗಳಿಂದ ತುಂಬಿದೆ.
ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸಂಕಷ್ಟಕ್ಕೆ ಸ್ಥಳೀಯರಾದ ಆಶಾ ಕಾರ್ಯಕರ್ತೆ ಅನಂತಾವತಿ ಮತ್ತು ಆಕೆಯ ತಾಯಿ ಸೇಸಮ್ಮ ಸ್ಪಂದಿಸಿದ್ದು, ರಸ್ತೆಯ ಹೊಂಡ- ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿದ್ದಾರೆ.
ಅಮ್ಮ- ಮಗಳು ಸುರಿವ ಮಳೆಯಲ್ಲಿ ಗುಂಡಿ ಮುಚ್ಚುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಗುಂಡಿಗಳು ಪ್ರತ್ಯಕ್ಷವಾಗುತ್ತಿದ್ದು, ರಸ್ತೆ ಬದಿಯಲ್ಲೇ ತಾಯಿ ಮಗಳು ಮನೆ ಹೊಂದಿದ್ದಾರೆ.
ಪ್ರತಿದಿನ ಹೊಂಡಕ್ಕೆ ಬಿದ್ದು ಸಾಕಷ್ಟು ಬೈಕ್ ಸವಾರರಿಗೆ ಗಾಯವಾದ ಘಟನೆ ನಡೆಯುತ್ತಿತ್ತು. ಇದರಿಂದಾಗಿ ತಾಯಿ- ಮಗಳು ಹೊಂಡ ಮುಚ್ಚಲು ಮುಂದಾಗಿದ್ದಾರೆ.