ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು?
ಮಂಗಳೂರು ಮಾರ್ಚ್ 13: ಕರಾವಳಿಯ ಶಕ್ತಿ ಪೀಠಗಳಲ್ಲಿ ಒಂದಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ. ಬ್ರಹ್ಮಕಲಶೋತ್ಸದ ಹಿನ್ನೆಲೆಯಲ್ಲಿ ಇಂದು ಪೊಳಲಿ ರಾಜರಾಜೇಶ್ವರಿ ದೇವಿಗೆ 501 ಕಲಶಾಭಿಷೇಕ, ದುರ್ಗಾಪರಮೇಶ್ವರೀ ದೇವಿಗೆ 501 ಕಲಶಾಭಿಷೇಕ ಹಾಗೂ ಪರಿವಾರ ದೇವರುಗಳಿಗೆ 108 ಕಲಶಗಳ ಅಭಿಷೇಕ ನಡೆದಿದೆ.
ಪರಶುರಾಮ ಸೃಷ್ಟಿಯ ಪವಿತ್ರ ಭೂಮಿ ಎಂದೇ ಕರೆಯಲಾಗುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅಥವಾ ತುಳುನಾಡು ದೈವ-ದೇವಾಲಯಗಳ ಬೀಡು. ಸಕಲ ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಿರುವ ತಪೋ ಭೂಮಿ. ಶಾಂತಿಧಾಮಗಳ ತಮರು.
ಎತ್ತ ಸಾಗಿದರೂ ದೈವ ದೇವಾಲಯಗಳ ಸಾನಿಧ್ಯಗಳು ಹೆಜ್ಜೆಗೊಂದರಂತೆ ಗೋಚರಿಸುತ್ತವೆ. ಕರಾವಳಿಯುದ್ದಕ್ಕೂ ವ್ಯಾಪಿಸಿರುವ ಅಸಂಖ್ಯಾತ ದೇವ ಸನ್ನಿಧಿಗಳು ತಮ್ಮ ಕಾರಣಿಕ ಶಕ್ತಿಗಳ ಮೂಲಕವೇ ಭಕ್ತರ ಸಕಲ ಕಷ್ಟಗಳನ್ನು ನಿವಾರಿಸುತ್ತಿವೆ.
ಇಂತಹ ಕ್ಷೇತ್ರಗಳ ಪೈಕಿ ಸುತ್ತ ಹಸಿರು ವನರಾಜಿಯ ನಡುವೆ ನದಿ ತೀರದ ರಮಣೀಯ ಪರಿಸರದಲ್ಲಿ ಬೆಳಗುತ್ತಿದೆ ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರ. ಸಕಲ ಭಕ್ತಾದಿಗಳ ಆರಾಧನಾ ತಾಣವಾಗಿ ಕಂಗೊಳಿಸುತ್ತಿದೆ ಪೊಳಲಿಯ ಶ್ರೀ ರಾಜರಾಜೇಶ್ವರೀ ಕ್ಷೇತ್ರ.
ಪೊಳಲಿ ರಾಜರಾಜೇಶ್ವರಿ ದೇವಾಲಯದ ಧ್ವಜಸ್ತಂಭ ಪ್ರತಿಷ್ಠೆ ವೇಳೆ ಪವಾಡ!
ನಗರ ಹೊರವಲಯದಲ್ಲಿ ಸುತ್ತ ಹಸಿರು ವನಸಿರಿಯ ನಡುವೆ ವಿಶಾಲ ಬಯಲು ಗದ್ದೆಗಳ ಮಧ್ಯೆ, ಜುಳು ಜುಳು ಹರಿಯುವ ಫಲ್ಗುಣಿ ನದಿ ತಟದಲ್ಲಿದೆ ಶ್ರೀ ರಾಜರಾಜೇಶ್ವರಿಯ ದಿವ್ಯ ಸಾನಿಧ್ಯ. ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಅತೀ ಪುರಾತನ ದೇವಾಲಯಗಳಲ್ಲಿ ಒಂದು. ಸುಮಾರು ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನವನ್ನು ಸುರಥ ಮಹಾರಾಜನು ನಿರ್ಮಿಸಿದನೆಂದು ಪ್ರತೀತಿಯಿದೆ.
ಸಮಸ್ತ ರಾಜ್ಯಗಳನ್ನು ಮರಳಿ ಪಡೆದ ಅರಸ
ಹಿಂದೆ ಪುರಾಣ ಕಾಲದಲ್ಲಿ ಸುರಥ ಮಹಾರಾಜನು ವೈರಿಗಳ ಆಕ್ರಮಣದಿಂದ ನಡೆದ ಯುದ್ದದಲ್ಲಿ ಸೋತು ಎಲ್ಲವನ್ನು ಕಳೆದುಕೊಂಡು ವೈರಾಗ್ಯದಿಂದ ಬರುತ್ತಿದ್ದ. ಈ ಸಂದರ್ಭದಲ್ಲಿ ಸುಮೇದಿ ಎಂಬ ವೈಶ್ಯನು ಸಿಕ್ಕಿದ್ದನು.ಇವರಿಬ್ಬರು ಒಟ್ಟಾಗಿ ಕಾಡದಾರಿಯಲ್ಲಿ ಹೋಗುತ್ತಿರಲು ಸುಮೇಧ ಮುನಿಯ ಆಶ್ರಮವನ್ನು ಕಂಡು ಮುನಿವರ್ಯರಲ್ಲಿ ತನ್ನ ಕಷ್ಟವೆಲ್ಲವನ್ನು ಹೇಳಿಕೊಂಡನು.ಋಷಿ ಮುನಿಯು ಅರಸನಿಗೆ ಶ್ರೀ ರಾಜರಾಜೇಶ್ವರಿಯ ಮಂತ್ರೋಪದೇಶವನ್ನು ಕೊಟ್ಟು ಧ್ಯಾನ ಮಾಡುವಂತೆ ಸೂಚಿಸುತ್ತಾನೆ.
ಮುನಿಯ ಸೂಚನೆಯಂತೆ ರಾಜನು ಶ್ರೀ ದೇವಿಯ ಧ್ಯಾನದಲ್ಲಿರಲು ಒಂದು ದಿನ ಕನಸಿನಲ್ಲಿ ಆಸ್ಥಾನರೂಢಳಾಗಿ ಪರಿವಾರ ಸಹಿತ ಕುಳಿತಿದ್ದ ಶ್ರೀ ದೇವಿಯನ್ನು ಕಾಣುತ್ತಾನೆ. ಅರಸ ಈ ವಿಷಯವನ್ನು ಕೂಡಲೇ ಮುನಿಗೆ ತಿಳಿಸುತ್ತಾನೆ.ಸುಮೇಧ ಮುನಿಯು ಅರಸನಿಗೆ ತಾನು ಕಂಡಂತೆಯೇ ಮೂರ್ತಿಯನ್ನು ಸೃಷ್ಟಿಸಿ, ಪ್ರತಿಷ್ಠಾಪಿಸಿ ಪೂಜಿಸು ಎಂದು ಸಲಹೆ ನೀಡುತ್ತಾನೆ.ಅದರಂತೆ ರಾಜನು ಮಣ್ಣಿನಿಂದ ಪರಿವಾರ ಸಹಿತ ಶ್ರೀದೇವಿಯ ಮೂರ್ತಿಯನ್ನು, ಸೃಷ್ಟಿಸಿ, ಪೂಜಿಸಲು ಆರಂಭಿಸುತ್ತಾನೆ.ಈ ಮೂಲಕ ತಾನು ಕಳಕೊಂಡ ಸಮಸ್ತ ರಾಜ್ಯಗಳನ್ನು ಮರಳಿ ಪಡೆದನೆಂಬುದು ಪ್ರತೀತಿ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ
ಇದು ದೇವಸ್ಥಾನದ ವಿಶೇಷ
ಪುಳಿನ, ಪೊಳಲ್ ಎಂದರೆ ಮಣ್ಣು ಎಂಬ ಅರ್ಥದಿಂದ ಶ್ರೀ ದೇವಿಯ ಕ್ಷೇತ್ರಕ್ಕೆ ಪುಳಿನಾಪುರ, ಬಳಿಕ ಅದು ಪೊಳಲಿ ಎಂಬ ಹೆಸರು ಬಂದಿದೆ. ಪೊಳಲಿ ಕ್ಷೇತ್ರದ ಆರಾಧ್ಯ ದೇವತೆ ಶ್ರೀ ರಾಜರಾಜೇಶ್ವರಿ. ಶ್ರೀ ಕ್ಷೇತ್ರದಲ್ಲಿ ದೇವಿಯ ಜೊತೆಗೆ ನೆಲೆಸಿರುವ ಪರಿವಾರ ದೇವತೆಗಳು ಸಕಲ ಭಕ್ತಾದಿಗಳನ್ನು ಪೊರೆಯುತ್ತಿದ್ದಾರೆ. ಕ್ಷೇತ್ರದ ಆರಾಧ್ಯ ಮೂರ್ತಿ ತಾಯಿ ರಾಜರಾಜೇಶ್ವರಿಯಾಗಿದ್ದರೂ ಕ್ಷೇತ್ರದಲ್ಲಿ ವಿಶೇಷ ಸೇವಾದಿ ಪೂಜೆಗಳು ಸಲ್ಲಿಕೆಯಾಗುವುದು ಮಾತ್ರ ಪರಿವಾರ ದೇವತೆಗಳ ಪೈಕಿ ಓರ್ವನಾದ ಸುಬ್ರಹ್ಮಣ್ಯನಿಗೆ ಎನ್ನುವುದು ಮತ್ತೊಂದು ವಿಶೇಷ.
ಪ್ರಥಮ ಪೂಜೆ ದುರ್ಗಾಪರಮೇಶ್ವರಿಗೆ
ಪೊಳಲಿ ಕ್ಷೇತ್ರದ ಪ್ರಧಾನ ದೇವತೆ ಶ್ರೀ ರಾಜರಾಜೇಶ್ವರಿ.ಗರ್ಭಗುಡಿಯ ಎಡಗಡೆಯಲ್ಲಿ ಭದ್ರಕಾಳಿ, ಬಲಕಡೆಯಲ್ಲಿ ಶ್ರೀ ಸುಬ್ರಹ್ಮಣ್ಯ, ಶ್ರೀ ಮಹಾಗಣಪತಿ, ಬ್ರಹ್ಮವಟು, ವಿಷ್ಣುವಟು, ಶೂಲಿನಿ, ದಂಡಿನಿ, ಮುಂಡಿನಿ ಪರಿವಾರ ಗಣಗಳ ಸಾನಿಧ್ಯವಿದೆ.ಶ್ರೀ ಕ್ಷೇತ್ರದ ಹೊರಾಂಗಣದ ಬಲಬದಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ಗುಡಿಯಿದ್ದು, ಸುಮೇಧ ಮುನಿಯು ಪ್ರತಿಷ್ಠಾಪಿಸಿದನೆಂದು ಪುರಾಣದಲ್ಲಿದೆ. ಎಡಬದಿಯಲ್ಲಿ ಶ್ರೀ ಕ್ಷೇತ್ರಪಾಲನ ಸನ್ನಿಧಿಯಿದೆ. ದೈನಂದಿನ ಪೂಜೆಗಳಲ್ಲಿ ಪ್ರಥಮ ಪೂಜೆ ದುರ್ಗಾಪರಮೇಶ್ವರಿಗೆ ನಡೆಯುತ್ತದೆ. ನಂತರ ಶ್ರೀ ರಾಜರಾಜೇಶ್ವರೀ ದೇವಿಗೆ ಹಾಗೂ ಪರಿವಾರ ದೇವತೆಗಳಿಗೆ ಪೂಜೆ ನಡೆಯುತ್ತದೆ.
ಭಕ್ತ ಮಹಾಸಾಗರವೇ ಹರಿದು ಬರುತ್ತದೆ
ಶ್ರೀ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರೀಯ ಸಾನಿಧ್ಯದಷ್ಟೇ ಶ್ರೀ ಸುಬ್ರಹ್ಮಣ್ಯನ ಸಾನಿಧ್ಯವಿದ್ದು ಜಾತ್ರೋತ್ಸವಗಳು ಶ್ರೀ ಸುಬ್ರಹ್ಮಣ್ಯನಿಗೆ ನಡೆಯುವುದು ವಿಶೇಷ. ಶೀ ಭದ್ರಕಾಳಿ ದೇವರಿಗೆ ರಾತ್ರಿ ಗಾಯತ್ರಿ ಪೂಜೆ ನಡೆಯುತ್ತದೆ. ಕ್ಷೇತ್ರದಲ್ಲಿ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಸ್ವರೂಪಳಾದ ಶ್ರೀ ಮಾತೆ, ಭಕ್ತರ ಭಕ್ತಿಗೆ ಫಲವನ್ನು ಈಯುತ್ತಾ ಇಷ್ಟಪ್ರದಾಯಕಿಯಾಗಿ ಇಲ್ಲಿ ಮೆರೆಯುತ್ತಿದ್ದಾಳೆ. ಈ ಕಾರಣದಿಂದಾಗಿ ಇಲ್ಲಿಗೆ ಭಕ್ತಮಾಹಾಸಾಗರವೇ ಹರಿದು ಬರುವುದು ವಿಶೇಷ.
1 ತಿಂಗಳ ಕಾಲ ನಿರಂತರ ಜಾತ್ರೆ
ಪೊಳಲಿ ಕ್ಷೇತ್ರದ ಅತ್ಯಂತ ವಿಶೇಷವೆಂದರೆ ಪೊಳಲಿ ಜಾತ್ರೆ. ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವವು ಬರೋಬ್ಬರಿ ಒಂದು ತಿಂಗಳ ಕಾಲ ನಡೆಯುತ್ತದೆ. ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ಪೊಳಲಿ ಚೆಂಡು ಎನ್ನುವ ಆಚರಣೆ ಲೋಕ ಪ್ರಸಿದ್ಧವಾಗಿದೆ. ಪೊಳಲಿ ಶ್ರೀ ಕ್ಷೇತ್ರವು ಸುಮಾರು 16 ಮಾಗಣೆಗಳಿಗೊಳಪಟ್ಟಿದ್ದು, ಸಾವಿರ ಸೀಮೆಯ ದೇವಾಲಯವೆಂದೇ ಪ್ರಸಿದ್ಧಿ ಪಡೆದಿದೆ. ಶ್ರೀ ಕ್ಷೇತ್ರದ ವಿಶೇಷತೆಯೆಂದರೆ ಸುಮಾರು 1 ತಿಂಗಳ ಕಾಲ ನಡೆಯುವ ಸುದೀರ್ಘ ಜಾತ್ರೆ. ಮೀನ ಮಾಸದ ಸಂಕ್ರಮಣದಂದು ಧ್ವಜಾರೋಹಣ ನಡೆದರೆ ಸುಮಾರು 1 ತಿಂಗಳ ಕಾಲ ನಿರಂತರ ಜಾತ್ರೆ ನಡೆಯುತ್ತದೆ.ರಾಜ್ಯದ ಬೇರೆಲ್ಲೂ ಒಂದು ತಿಂಗಳ ಜಾತ್ರೆ ನಡೆಯದಿರುವುದು ಈ ಕ್ಷೇತ್ರದ ವಿಶೇಷ.