ಒಂದೇ ಶಾಲೆಯ 32 ಮಕ್ಕಳಿಗೆ ಚಿಕನ್ ಪಾಕ್ಸ್, ಒಂದು ವಾರ ರಜೆ ಘೋಷಣೆ
ಮಂಗಳೂರು, ಜೂನ್ 23: ಕಡಬದ ಒಂದೇ ಶಾಲೆಯ 32 ವಿದ್ಯಾರ್ಥಿಗಳು ಮತ್ತು ಶಿಕ್ಷಕಿಗೆ ತೀವ್ರ ಜ್ವರ ಮತ್ತು ಚಿಕನ್ ಪಾಕ್ಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆಗೆ ಒಂದು ವಾರಗಳ ಕಾಲ ರಜೆ ಘೋಷಣೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.
ಜೂನ್ 27ರ ತನಕ ಶಾಲೆಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಸಾಂಕ್ರಾಮಿಕ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸೂಚನೆಯ ಪ್ರಕಾರವಾಗಿ ರಜೆಯನ್ನು ಘೋಷಣೆ ಮಾಡಲಾಗಿದೆ. ಆರೋಗ್ಯ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಶಾಲೆಯ 32 ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ಜ್ವರ ಮತ್ತು ಚಿಕನ್ ಪಾಕ್ಸ್ ಕಂಡುಬಂದಿದ್ದು ಈ ಖಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಆರೋಗ್ಯ ಇಲಾಖೆಯ ಸೂಚನೆಯ ಪ್ರಕಾರವಾಗಿ ರಜೆಯನ್ನು ನೀಡಿದ್ದೇವೆ ಅಂತ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹೇಳಿದ್ದಾರೆ.
ಸಂಬಂಧಿಕರ ಮನೆಗೆ ಹೋಗಿದ್ದಾಗ ಸೋಂಕು
ಈ ಶಾಲೆಯ ವಿದ್ಯಾರ್ಥಿಯೊಬ್ಬ ಕುಂದಾಪುರದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿಯ ಮಕ್ಕಳಿಗೆ ಇದ್ದ ಚಿಕನ್ ಫಾಕ್ಸ್ ಈ ಬಾಲಕನಿಗೂ ತಗುಲಿದೆ. ತೀವ್ರ ಜ್ವರ ಮತ್ತು ಚಿಕನ್ ಪಾಕ್ಸ್ ನಡುವೆಯೂ ಕೂಡ ಶಾಲೆಗೆ ಬಂದ ಹಿನ್ನೆಲೆಯಲ್ಲಿ ಆತನಿಂದಾಗಿ ಆ ತರಗತಿಯ ವಿದ್ಯಾರ್ಥಿಗಳಿಗೆ , ಅವರಿಂದ ಇಡೀ ಶಾಲೆಯ ಇತರ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗ ಹರಡಿರುವ ಸಾಧ್ಯತೆಗಳಿವೆ.
ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ
ಮೊದಲು ಸೋಂಕಿಗೆ ಒಳಪಟ್ಟ ವಿದ್ಯಾರ್ಥಿಯಿಂದ ಈ ರೋಗ ಹರಡಿರುವ ಸಾಧ್ಯತೆಗಳಿರುವ ಕಾರಣಕ್ಕಾಗಿ ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪ್ರತಿನಿತ್ಯ ರೋಗಪೀಡಿತ ವಿದ್ಯಾರ್ಥಿಗಳಿಗೆ ಮನೆಗೆ ಭೇಟಿ ನೀಡಿ, ಅವರ ಆರೋಗ್ಯವನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯ ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಅತೀ ಶೀಘ್ರದಲ್ಲಿ ವಿದ್ಯಾರ್ಥಿಗಳು ಸಹಜಸ್ಥಿತಿಗೆ ಬರುವ ನಿರೀಕ್ಷೆಯಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆಯ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಕೆ. ತಿಳಿಸಿದ್ದಾರೆ.
ಈ ರೋಗಪೀಡಿತ ವಿದ್ಯಾರ್ಥಿಗಳನ್ನು ಮುಂಜಾಗ್ರತ ಕ್ರಮವಾಗಿ ಪ್ರತಿನಿತ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅವರ ಮನೆಯವರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಈ ಸಾಂಕ್ರಾಮಿಕ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಹಿನ್ನೆಲೆಯಲ್ಲಿ ಮತ್ತು ಮೈಮೇಲೆ ನೀರುಕೋಟ್ಲೆ ಬೀಳುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸ್ಥಳೀಯ ಆರೋಗ್ಯ ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ ಎಂದು ಜಗದೀಶ್ ಹೇಳಿದ್ದಾರೆ.
ತೀವ್ರ ಜ್ವರಕ್ಕೆ ಒಂದನೇ ತರಗತಿ ಬಾಲಕಿ ಸಾವು
ಮತ್ತೊಂದೆಡೆ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಬಂಟ್ವಾಳದ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕದ ಹನುಮಾನ್ ನಗರದ ನಿವಾಸಿ ರವಿ ಆಚಾರ್ಯ ಎಂಬವರ ಪುತ್ರಿ ಆರು ವರ್ಷದ ಆರಾಧ್ಯ ಆಚಾರ್ಯ ಮೃತಪಟ್ಟ ದುರ್ದೈವಿ ಬಾಲಕಿ. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಎರಡು ದಿನಗಳಿಂದ ಏಕಾಏಕಿ ಜ್ವರ ಉಲ್ಬಣಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾಳೆ. ಆರಾಧ್ಯ ಆಚಾರ್ಯ ಬಂಟ್ವಾಳದ ಮಾಣಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಬಾಲಕಿಯ ಸಾವಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಗೌರವಾರ್ಥವಾಗಿ ಶಾಲೆಗೆ ಗುರುವಾರ ರಜೆ ಘೋಷಣೆ ಮಾಡಲಾಗಿದೆ.
ಚಿಕನ್ ಪಾಕ್ಸ್ ಗುಣಲಕ್ಷಣಗಳು
ಚಿಕನ್ ಫಾಕ್ಸ್ ರೋಗಕ್ಕೆ varicella zoster virus ಎಂಬ ವೈರಸ್ ಕಾರಣವಾಗಿದೆ. ಇದೊಂದು ಅತ್ಯಂತ ಸಾಂಕ್ರಾಮಿಕ ರೋಗವಾಗಿದ್ದು, ಸಾಮಾನ್ಯವಾಗಿ ಸೋಂಕು ಇರುವ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ. ಚಿಕನ್ ಫಾಕ್ಸ್ಗೆ ತುತ್ತಾದ ವ್ಯಕ್ತಿಯ ಸೀನಿನ ಹನಿಗಳು ಅಥವಾ ಆ ವ್ಯಕ್ತಿಯು ಕೆಮ್ಮಿದಾಗ ಹೊರಹೊಮ್ಮುವ ಸಣ್ಣ ಸಣ್ಣ ಹನಿಗಳಲ್ಲಿ ಈ ವೈರಾಣು ಇರುತ್ತದೆ. ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ರೋಗಲಕ್ಷಣವು ವೈರಸ್ಗೆ ತುತ್ತಾದ ವ್ಯಕ್ತಿಯ ಸಂಪರ್ಕದ 15ರಿಂದ 16 ದಿನಗಳ ನಂತರ ಗೋಚರಿಸುತ್ತದೆ. ಚಿಕನ್ ಪಾಕ್ಸ್ ಆರಂಭಿಕ ಲಕ್ಷಣ ಫ್ಲೂ ಜ್ವರದಂತೆಯೇ ಇರುತ್ತದೆ. ಹಾಗಾಗಿ ಮಕ್ಕಳಲ್ಲಿ ತೀವ್ರ ಜ್ವರ ಕಾಣಿಸಿಕೊಂಡರೆ ಆದಷ್ಟು ಬೇಗ ಆಸ್ಪತ್ರೆಗೆ ದಾಖಲಿಸಿದರೆ ಒಳಿತು.
Recommended Video