14 ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಕ್ಕೆ ಸಿದ್ದಗೊಂಡ ಮೂಡಬಿದ್ರೆ
ಮಂಗಳೂರು, ನವೆಂಬರ್ 30: ಜೈನ ಕಾಶಿ ಮೂಡಬಿದ್ರೆಯಲ್ಲಿ ಆಳ್ವಾಸ್ ನುಡಿಸಿರಿಯ ಕಂಪು ಹರಡಲು ಕ್ಷಣಗಣನೆ ಆರಂಭವಾಗಿದೆ. 14 ನೇ ವರ್ಷದ 'ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಮ್ಮೇಳನ' ಶುಕ್ರವಾರದಿಂದ ಆರಂಭಗೊಳ್ಳಲಿದೆ. 3 ದಿನಗಳ ಕಾಲ ನಡೆಯುವ ಈ ಆಳ್ವಾಸ್ ನುಡಿಸಿರಿ ಸಮ್ಮೇಳನ ಈ ಭಾರಿ ಹಲವು ವಿಶೇಷತೆಗಳನ್ನು ಹೊಂದಿದೆ.
'ಆಳ್ವಾಸ್ ನುಡಿಸಿರಿ' ಪ್ರಶಸ್ತಿ ಬೇಡವೆಂದ ಎಚ್.ಎಸ್.ದೊರೆಸ್ವಾಮಿ
ಕನ್ನಡ ನಾಡು, ನುಡಿ, ಜಲ ಕುರಿತ ಗಂಭೀರ ಚಿಂತನೆಗೆ ವೇದಿಕೆಯಾಗುವ ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ವೈಭವ ಡಿಸೆಂಬರ್ 1ರಿಂದ ಡಿಸೆಂಬರ್ 3 ರವರೆಗೆ ನಡೆಯಲಿದೆ. ನುಡಿಸಿರಿಯು ಕಲೆ ಮತ್ತು ಸಾಹಿತ್ಯಾಸಕ್ತರಿಗೆ ಸಂಸ್ಕೃತಿಯ ರಸದೌತಣ ಉಣಬಡಿಸಲಿದೆ.
15 ಮಂದಿ ಸಾಧಕರಿಗೆ 2017ರ 'ಆಳ್ವಾಸ್ ನುಡಿಸಿರಿ' ಪುರಸ್ಕಾರ
ಲಕ್ಷಾಂತಕ ಕಲಾಸಕ್ತರ ಸಮಾಗಮಕ್ಕೆ ಮೂಡಬಿದ್ರೆ ವೇದಿಕೆಯಾಗಲಿದ್ದು, 14 ನೇ ವರ್ಷದ ಆಳ್ವಾಸ್ ನುಡಿಸಿರಿಯನ್ನು ಖ್ಯಾತ ವಿಮರ್ಶಕ ಡಾ. ಸಿ. ಎನ್. ರಾಮಚಂದ್ರನ್ ಉದ್ಘಾಟಿಸಲಿದ್ದಾರೆ.
ನುಡಿಸಿರಿ ಸರ್ವಧ್ಯಕ್ಷ ನಾಗತಿಹಳ್ಳಿ
ನುಡಿಸಿರಿಯ ಸರ್ವಧ್ಯಕ್ಷತೆಯನ್ನು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಹಿಸಲಿದ್ದಾರೆ. 'ಕರ್ನಾಟಕ ಬಹುತ್ವದ ನೆಲೆಗಳು' ಎಂಬ ಪ್ರಧಾನ ಪರಿಕಲ್ಪನೆಯಡಿ 3 ದಿನಗಳ ಕಾಲ ವಿಚಾರಗೋಷ್ಠಿಗಳು ನಡೆಯಲಿವೆ. 12 ವೇದಿಕೆಗಳಲ್ಲಿ ಕನ್ನಡ ನಾಡು, ನುಡಿ, ಜಲದ ಕುರಿತು ಒಂದೆಡೆ ಗಂಭೀರ ಚರ್ಚೆ ನಡೆದರೆ ಮತ್ತೊಂದೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಕಲಾಸಕ್ತರ ಮನ ತಣಿಸಲಿದೆ.
ಕೃಷಿ ಸಿರಿ ಹೈಲೈಟ್
ಈ ಬಾರಿಯ ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ 15 ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಆಳ್ವಾಸ್ ನುಡಿಸಿರಿಯಲ್ಲಿ ಆಳ್ವಾಸ್ ಕೃಷಿಸಿರಿ ಸಮ್ಮೇಳನ ನಡೆಯಲಿದ್ದು 3 ದಿನಗಳ ಕಾಲವೂ ಕೃಷಿಕರಿಗೆ ಮಾಹಿತಿ ಮತ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗುರುವಾರ ಸಂಜೆ ಕೃಷಿಸಿರಿ ಸಮೇಳನಕ್ಕೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಚಾಲನೆ ನೀಡಲಿದ್ದಾರೆ. ಜಾನುವಾರು ಪ್ರದರ್ಶನ, ಫಲಪುಷ್ಟ ಪ್ರದರ್ಶನ, ಅತೀ ವಿರಳ ಸಮುದ್ರ ಚಿಪ್ಪುಗಳ ಪ್ರದರ್ಶನ ಸೇರಿದಂತೆ ಕುತೂಹಲಕಾರಿ ಸಂಗತಿಗಳಿಗೆ ಕೃಷಿಸಿರಿಯು ವೇದಿಕೆಯಾಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿ
ಆಳ್ವಾಸ್ ನುಡಿಸಿರಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಕೂಡಾ ನಡೆಯಲಿದ್ದು 5 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕನ್ನಡದ ಕಲರವ ಕಾಣಲಿದ್ದು ಈ ಭಾರಿ ವಿಶೇಷವಾಗಿ ದೇಸಿ ಕ್ರೀಡೆಗಳಿಗೂ ಆದ್ಯತೆ ನೀಡಲಾಗಿದೆ.
ಕೋಣಗಳ ಸೌಂದರ್ಯ ಸ್ಪರ್ಧೆ
ತುಳುನಾಡಿನ ಜನಪದ ಕ್ರೀಡೆ ಕಂಬಳದ ಓಟದ ಕೋಣಗಳ ಸೌಂದರ್ಯ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ . ವಿಜೇತ ಕೋಣಗಳಿಗೆ ಪ್ರಥಮ 50 ಸಾವಿರ, ದ್ವಿತೀಯ 30 ಸಾವಿರ ಮತ್ತು ತೃತೀಯ 20 ರೂಪಾಯಿ ಬಹುಮಾನ ಘೋಷಿಸಲಾಗಿದೆ. ಕೋಣ ಓಡಿಸುವವರ ಸೌಂದರ್ಯ ಸ್ಪರ್ಧೆ ಕೂಡ ನಡೆಯುತ್ತಿದ್ದು ಅದರಲ್ಲಿ ಪ್ರಥಮ 20 ಸಾವಿರ ರೂಪಾಯಿ ಮತ್ತು ದ್ವಿತೀಯ 10 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಶ್ರೀಮಂತ ಸಂಸ್ಕೃತಿಯ ಅನಾವರಣ
ಒಂದೆಡೆ ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ರಾಜಕೀಯ ಮೇಲಾಟಗಳಿಗೆ ವೇದಿಕೆಯಾಗಿ ವಿವಾದಗಳ ಸುಳಿಯಲ್ಲಿ ಸಿಲುಕಿದೆ. ಇತ್ತ ಜೈನ ಕಾಶಿ ಮೂಡಬಿದ್ರೆಯಲ್ಲಿ ಸಾಂಸ್ಕೃತಿಕ ಉತ್ಸವಕ್ಕೆ ಸಿದ್ದತೆಗಳು ಜೋರಾಗಿವೆ. ಸಾಹಿತ್ಯಾಸಕ್ತರಿಗೆ ದಾಹವನ್ನು ಆಳ್ವಾಸ್ ನುಡಿಸಿರಿ ತಣಿಸಲಿದ್ದು ಕನ್ನಡದ ಶ್ರೀಮಂತ ಸಂಸ್ಕೃತಿಯ ಅನಾವರಣ ನಡೆಯಲಿದೆ.