ಪತ್ನಿ ಬಡಿದು ಕೊಂದ ಪತಿ ಕಟ್ಟಿದ್ದು ಬೇರೆಯ ಕಥೆ!
ಮಂಗಳೂರು, ಆಗಸ್ಟ್ 18; ಕುಡಿತದ ನಶೆ ಎಂತಹವರನ್ನೂ ರಾಕ್ಷಸರನ್ನಾಗಿ ಮಾಡುತ್ತದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಲಭ್ಯವಾಗಿದೆ. ಮದುವೆಯಾದ ಒಂದೂವರೆ ವರ್ಷದಲ್ಲೇ ಪಾಪಿ ಗಂಡ ಅಮಾಯಕ ಹೆಂಡತಿಯನ್ನು ಬಡಿದು ಕೊಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಧರೆಗುಡ್ಡೆ ಎಂಬಲ್ಲಿ ನಡೆದಿದೆ.
ಮದ್ಯದ ಅಮಲಿನಲ್ಲಿ ಹೆಂಡತಿಗೆ ಹೊಡೆದ ಪತಿರಾಯ, ಮದ್ಯದ ಅಮಲು ಕಡಿಮೆಯಾದ ಬಳಿಕ ಕಾಲು ಜಾರಿ ಬಿದ್ದಳು ಎಂದು ಕಥೆ ಕಟ್ಟಿದ್ದಾನೆ. ಆದರೆ ಪೊಲೀಸರ ತನಿಖೆಯ ವೇಳೆ ಪಾಪಿ ಗಂಡನ ಕರಾಮತ್ತು, ಕಟ್ಟಿದ ಕಥೆ ಬಯಲಾಗಿದೆ.
ಮಂಗಳೂರು: ಕೊರೊನಾ ಸೋಂಕಿಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಮೂಡಬಿದಿರೆ ತಾಲೂಕಿನ ಧರೆಗುಡ್ಡೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಠ ನಿವಾಸಿ ದಿನರಾಜ್ ಹೆಂಡತಿಯನ್ನು ಕೊಲೆಗೈದ ಪತಿ ಮಹಾಶಯ. ದಿನರಾಜ್ ಮತ್ತು ಸುನೀತಾ ಎಂಬುವವರಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದೆ. ಬಡತನದಿಂದಲೇ ಹುಟ್ಟಿ ಬೆಳೆದ ಸುನೀತಾಗೆ ತಾಯಿ ಮಾತ್ರ ಆಸರೆಯಾಗಿದ್ದರು.
ಅಪಘಾತದಲ್ಲಿ ಮೃತಪಟ್ಟ ಗಂಡನ ನೆನಪಿಗಾಗಿ ದೇವಾಲಯ ಕಟ್ಟಿದ ಪತ್ನಿ
ಸಂಬಂಧಿಕರು, ಊರವರು ಜೊತೆ ಸೇರಿ ಸುನೀತಾಳನ್ನು ದಿನರಾಜ್ಗೆ ಮದುವೆ ಮಾಡಿ ಕೊಟ್ಟಿದ್ದರು. ಸುನಿತಾ ತಾಯಿ, ಸಂಬಂಧಿಕರೆಲ್ಲಾ ತಮ್ಮ ಮಗಳ ಕಷ್ಟವೆಲ್ಲಾ ನಿವಾರಣೆ ಆಯಿತು ಅಂತಾ ಖುಷಿಯಲ್ಲಿದ್ದರು. ಮೂಡಬಿದಿರೆಯಲ್ಲಿ ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ದಿನರಾಜ್ ಕೂಡಾ ಮದುವೆಯಾಗಿ ಆರು ತಿಂಗಳ ತನಕ ಹೆಂಡತಿಯ ಜೊತೆಗೆ ಖುಷಿಯಲ್ಲೇ ಇದ್ದ. ಆದರೆ ಆನಂತರ ವಾರದಲ್ಲೊಮ್ಮೆ ತೆಗೆದುಕೊಳ್ಳುತ್ತಿದ್ದ ಮದ್ಯವನ್ನು ಪ್ರತಿದಿನ ತೆಗೆದುಕೊಳ್ಳಲು ಆರಂಭಿಸಿದ್ದಾನೆ.
ದಾವಣಗೆರೆ; ಇಬ್ಬರು ಮಹಿಳೆಯರ ಹತ್ಯೆ, ಕೊಳೆತ ಸ್ಥಿತಿಯಲ್ಲಿ ಪತ್ತೆ
ಕುಡಿದ ಅಮಲು ಜಾಸ್ತಿಯಾಗುತ್ತಿದ್ದಂತೆಯೇ ಗಂಡ-ಹೆಂಡತಿ ನಡುವೆ ಸಣ್ಣ ಭಿನ್ನಾಭಿಪ್ರಾಯ ತಲೆದೂರಿದೆ. ಹೆಂಡತಿಯ ಬಗ್ಗೆ ಸದಾ ಅನುಮಾನ ವ್ಯಕ್ತಪಡಿಸುತ್ತಿದ್ದ ದಿನರಾಜ್, ಕಂಠ ಪೂರ್ತಿ ಕುಡಿದು ಬಂದು ಹಲ್ಲೆ ಮಾಡುತ್ತಿದ್ದ. ಇತ್ತ ಕುಡುಕ ಗಂಡನ ಕಾಟ ತಡೆಯಲಾರದೆ ಸುನೀತಾ ತವರು ಮನೆಯಲ್ಲಿ ದೂರು ನೀಡಿದರೂ, ಹಿರಿಯರೆಲ್ಲಾ ಮಾತುಕತೆ ನಡೆಸಿ ಗಂಡ-ಹೆಂಡತಿಯ ಅಸಮಾಧಾನಗಳನ್ನು ದೂರ ಮಾಡಿದ್ದರು.
ಮತ್ತೆ ಮದ್ಯದ ದಾಸನಾದ ದಿನರಾಜ್ ಪ್ರತಿದಿನ ಕುಡಿದು ಮನೆಗೆ ಬಂದು ಹೆಂಡತಿ ಸುನೀತಾ ಜೊತೆ ಗಲಾಟೆ ಆರಂಭಿಸಿದ್ದಾನೆ. ಆಗಸ್ಟ್ 17ರ ಸಂಜೆ 6 ಗಂಟೆಗೇನೇ ಕುಡಿದು ಬಂದು ಪುನಃ ಹೆಂಡತಿಯ ಜೊತೆ ತಗಾದೆ ಎತ್ತಿದ್ದಾನೆ. ಹೆಂಡತಿಯ ಶೀಲದ ಬಗ್ಗೆ ಸಂಶಯಿಸಿ ಗಲಾಟೆ ಆರಂಭಿಸಿದ್ದಾನೆ. ಗಂಡ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಂತೆಯೇ ಹೆಂಡತಿಯೂ ಗಲಾಟೆ ಆರಂಭಿಸಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಮಾತು ಮಿತಿ ಮೀರಿ ಹೊಡೆದಾಟ ವಾಗಿದೆ.
ಈ ಸಂದರ್ಭದಲ್ಲಿ ದಿನರಾಜ್ ಮದ್ಯದ ಅಮಲಿನಲ್ಲಿ ಕೈಗೆ ಸಿಕ್ಕ ಬಲವಾದ ವಸ್ತುವಿನಲ್ಲಿ ಹೆಂಡತಿಯ ತಲೆಗೆ ಹೊಡೆದಿದ್ದಾನೆ. ಹೆಂಡತಿ ಸುನೀತಾ ರಕ್ತದ ಮಡುವಿನಲ್ಲಿ ಬಿದ್ದಿದ್ದರಿಂದ ಭಯಗೊಂಡ ದಿನರಾಜ್ ಪಕ್ಕದ ಮನೆಯವರಿಗೆ ಕರೆ ಮಾಡಿ ಹೆಂಡತಿ ಮೆಟ್ಟಿಲಿನಿಂದ ಕಾಲು ಜಾರಿ ಬಿದ್ದಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ.
ತಕ್ಷಣ ಸ್ಥಳೀಯರು ಸುನೀತಾಳನ್ನು ಮೂಡಬಿದಿರೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವ ಆಗಿದ್ದರಿಂದ ತಕ್ಷಣ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುನೀತಾ ಸಾವನ್ನಪ್ಪಿದ್ದಾಳೆ.
ಸುನೀತಾ ತಲೆಯಲ್ಲಿ ಬಲವಾದ ಗಾಯವಾಗಿದ್ದರಿಂದ ಸಂಶಯ ವ್ಯಕ್ತಪಡಿಸಿದ ಸುನೀತಾ ಸಂಬಂಧಿಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸುನೀತಾ ಮನೆಗೆ ಭೇಟಿ ನೀಡಿದ ಮೂಡಬಿದಿರೆ ಪೊಲೀಸರಿಗೆ ಮನೆಯ ಒಳಗೆ ರಕ್ತದ ಕೋಡಿ ಕಂಡಿದೆ. ದಿನರಾಜ್ಗೆ ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಒಟ್ಟಿನಲ್ಲಿ ಬಡ ಕುಟುಂಬದ ಹೆಣ್ಣುಮಗಳ ಬಾಳು ಅನ್ಯಾಯವಾಗಿ ಕಮರಿ ಹೋಗಿದೆ. ಪಾಪಿ ಪತಿ ನಂಬಿ ಬಂದ ಪತ್ನಿಯ ಜೀವ ತೆಗೆದಿದ್ದಾನೆ. ಮದ್ಯದ ಅಮಲು ಅಮಾಯಕ ಹೆಣ್ಣನ್ನು ಬಲಿ ಪಡೆದಿರೋದು ಮಾತ್ರ ದುರಂತವಾಗಿದೆ.