ಸುರಿಯುವ ಮಳೆಯ ನಡುವೆ ಕರಾವಳಿ ಹುಡುಗರ ಭರ್ಜರಿ ಏಡಿ ಬೇಟೆ!
ಮಂಗಳೂರು, ಜೂನ್ 15; ಕರಾವಳಿಯಲ್ಲಿ ಮುಂಗಾರು ಬಿರುಸಾಗಿದೆ. ದಿನವಿಡೀ ಸುರಿಯುವ ಮಳೆಗೆ ಜನರು ಮನೆಯೊಳಗೆ ಲಾಕ್ ಆಗಿದ್ದಾರೆ. ಸುರಿಯುವ ಸೋನೆ ಮಳೆಯಿಂದ ಗದ್ದೆ, ಹಳ್ಳ-ಕೊಳ್ಳ, ನದಿ-ತೊರೆಗಳಿಗೆಲ್ಲಾ ಜೀವಕಳೆ ಬಂದು ಮೈ ತುಂಬಿ ಹರಿಯುತ್ತಿದೆ.
ಮಳೆಯ ಹಿನ್ನಲೆಯಲ್ಲಿ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧವಿದ್ದು, ಹಳ್ಳಗಳಲ್ಲಿ ಸಿಗುವ ಏಡಿಗಳ ಬೇಟೆ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಬಂದರೆ ಸಾಕು, ರಾತ್ರಿ ಹಳ್ಳ-ಗದ್ದೆಗಳಿಗಿಳಿಯುವ ಯುವಕರ ತಂಡ ಮೀನು, ಏಡಿಯ ಶಿಕಾರಿ ಮಾಡುತ್ತದೆ.
ಜೂನ್ 17ರ ತನಕ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ
ಸುರಿಯುವ ಮಳೆಯ ನಡುವೆಯೇ ಗಾಢವಾದ ಕತ್ತಲಿನಲ್ಲಿ ನೀರಿನಲ್ಲಿ ಹೋಗುತ್ತಾ ಏಡಿ ಬೇಟೆಯಾಡುತ್ತಾರೆ. ಎದುರಿನಲ್ಲಿದ್ದವನು ಕೈ ಯಲ್ಲಿ ಮಚ್ಚು ಹಿಡಿದುಕೊಂಡು ಸಾಗಿದರೆ, ಹಿಂದಿರುವವರು ಪ್ರಖರವಾದ ಟಾರ್ಚ್ ಹಾಕಿ ಏಡಿಗಳಿಗಾಗಿ ಶೋಧ ನಡೆಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಅಬ್ಬರ; ದಿನವಿಡೀ ಧಾರಾಕಾರ ಮಳೆ
ಪರಿಶುದ್ಧವಾಗಿ ಹರಿಯುವ ನೀರಿನಲ್ಲಿ, ತೊರೆಗಳ ಸಂದಿನಲ್ಲಿರುವ ಏಡಿಗಳು ಮಳೆ ನೀರು ಬಂದಾಕ್ಷಣ ತೊರೆಯ ಮುಖ್ಯವಾಹಿನಿಗೆ ಬರುತ್ತದೆ. ಈ ಸಮಯಕ್ಕೆ ಹೊಂಚು ಹಾಕಿ ಯುವಕರು ಬೇಟೆಯಾಡುತ್ತಾರೆ.
ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ; ತಗ್ಗು ಪ್ರದೇಶ ಜಲಾವೃತ
"ಮಳೆಗಾಲ ಬಂತೆದರೆ ಸಾಕು ಊರಿನ ಸ್ನೇಹಿತರ ಜೊತೆಗೂಡಿ ರಾತ್ರಿ ಏಡಿ ಹಿಡಿಯಲು ಹೋಗುತ್ತೇವೆ. ದಿನವಿಡೀ ಮಳೆ ಬಂದು ಸಂಜೆಯ ವೇಳೆಗೆ ಮಳೆ ಬಿಟ್ಟರೆ ಆ ದಿನ ತುಂಬಾ ಏಡಿ ಸಿಗುವ ಸಾಧ್ಯತೆಗಳಿವೆ. ರಾತ್ರಿ ಏಡಿ ಬೇಟೆಯಾಡೋದೇ ಒಂದು ರೋಚಕ ಅನುಭವ. ಏಡಿಗಳಲ್ಲಿ ಮಾಡುವ ವಿವಿಧ ಖಾದ್ಯಗಳು ಬಹಳ ರುಚಿಕರ" ಎನ್ನುತ್ತಾರೆ ಏಡಿ ಬೇಟೆಗಾರ ಸವಣಾಲು ಪ್ರದೀಪ.
ಏಡಿಯ ಜೊತೆಗೆ ನದಿಯ ಮೀನುಗಳು ಯಥೇಚ್ಛವಾಗಿ ಲಭಿಸುತ್ತದೆ. ಕಲ್ಮೂರು, ಬಾಳೆ, ಪುರಿಯೊಳು, ಮುಗುಡು ಸೇರಿದಂತೆ ಹಲವು ಜಾತಿಯ ಮೀನುಗಳು ಈ ಸಂಧರ್ಭದಲ್ಲಿ ಸಿಗುತ್ತದೆ. ಸಮುದ್ರದ ಮೀನುಗಳು ಲಭಿಸದೇ ಇದ್ದಾಗ ಸ್ಥಳೀಯವಾಗಿ ಸಿಗುವ ಮೀನುಗಳನ್ನೇ ಹಿಡಿದು ಖಾದ್ಯಗಳನ್ನು ಕರಾವಳಿಯ ಮಂದಿ ತಯಾರಿಸುತ್ತಾರೆ.