ಕರಾವಳಿಯಲ್ಲಿ ಮುಂಗಾರು ಪ್ರವೇಶಕ್ಕೆ ದಿನಗಣನೆ
ಮಂಗಳೂರು, ಜೂನ್ 04: ಪಕ್ಕದ ಶ್ರೀಲಂಕಾಕ್ಕೆ ಮುಂಗಾರು ಮಾರುತಗಳ ಪ್ರವೇಶವಾಗಿದೆ. ನೈಋತ್ಯ ಮಾರುತಗಳು ಅರಬ್ಬಿ ಸಮುದ್ರದ ದಕ್ಷಿಣ ತುದಿಯಲ್ಲಿದ್ದು, ಸೋಮವಾರ ಮಧ್ಯಾಹ್ನ ಶ್ರೀಲಂಕಾ ತಲುಪಿವೆ ಎಂದು ಹವಾಮಾನ ಕೇಂದ್ರ ಹೇಳಿದೆ. ಜೂನ್ 6ರ ವೇಳೆಗೆ ಮುಂಗಾರು ಕೇರಳ ತಲುಪುವ ಸಂಭವವಿದೆ ಎಂದು ಹೇಳಲಾಗಿದ್ದು, ಈ ವಾರದಲ್ಲಿ ಕರಾವಳಿಗೆ ಮುಂಗಾರು ಆಗಮಿಸುವ ನಿರೀಕ್ಷೆ ಇದೆ. ಕಳೆದ ಬಾರಿಯಂತೆ ಈ ಬಾರಿಯೂ ಕರಾವಳಿಯಲ್ಲಿ ಉತ್ತಮ ಮಳೆ ಸುರಿಯಲಿದೆ ಎಂದು ಈಗಾಗಲೇ ಹವಾಮಾನ ಸಂಸ್ಥೆಗಳು ತಿಳಿಸಿವೆ.
ಜೂನ್ 6ರಂದು ಅಧಿಕೃತವಾಗಿ ಕೇರಳ ಪ್ರವೇಶಿಸಲಿದೆ ಮುಂಗಾರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಮುಂಗಾರು ಉತ್ತಮವಾಗಿತ್ತು. ಕಳೆದ ಜೂನ್ 1ರಿಂದ ಸೆಪ್ಟೆಂಬರ್ ಕೊನೆಯವರೆಗೆ ಜಿಲ್ಲೆಯಲ್ಲಿ 3,441 ಮಿ.ಮೀ ಮಳೆ ಸುರಿದಿರುವುದಾಗಿ ದಾಖಲಿಸಲಾಗಿದೆ. ವಾಡಿಕೆ ಮಳೆಗಿಂತ ಕಳೆದ ಬಾರಿ ಶೇ.3 ಪ್ರಮಾಣ ಹೆಚ್ಚಳವಾಗಿತ್ತು. ದಕ್ಷಿಣ ಭಾರತದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿರಲಿದ್ದು, ಶೇ.93ರಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಅನಾಹುತಗಳು, ಪ್ರಾಕೃತಿಕ ವಿಕೋಪಗಳು ಸಂಭವಿಸಿದ್ದು, ಈ ಬಾರಿ ಹೆಚ್ಚಿನ ಮುಂಜಾಗೃತೆ ವಹಿಸಲಾಗಿದೆ. ಮುಂಗಾರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ವಿಪತ್ತುದಳ ಈಗಾಗಲೇ ಸಜ್ಜಾಗಿದೆ. ಆಂಧ್ರ ಪ್ರದೇಶದ ಗುಂಟೂರಿನ ಎನ್ಡಿಆರ್ ಎಫ್ 10ನೇ ಬೆಟಾಲಿಯನ್ ನಿಂದ 50 ಮಂದಿ ಈಗಾಗಲೇ ಆಗಮಿಸಿದ್ದು, ಸದ್ಯ ಪಣಂಬೂರಿನ ಸಿಐಎಸ್ ಎಫ್ ಘಟಕದಲ್ಲಿ ಕ್ಯಾಂಪ್ ಮಾಡಿದೆ.
ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಅಗತ್ಯವಿರುವ ಉಪಕರಣವನ್ನು ಈ ತಂಡ ಹೊಂದಿದೆ. ಪ್ರಥಮ ಚಿಕಿತ್ಸೆ ಮೆಡಿಕಲ್ ಕಿಟ್, 3 ಮಂದಿ ಮುಳುಗು ತಜ್ಞರು, ಬೋಟ್, ಲೈಫ್ ಜಾಕೆಟ್, ಲೈಫ್ ಬಾಯ್, ಜನರೇಟರ್ , ಮರ-ಕಾಂಕ್ರಿಟ್ ಕತ್ತರಿಸುವ ಸಾಧನ, ಡ್ರಿಲ್ಲಿಂಗ್ ಮೆಷಿನ್ ಸೇರಿದಂತೆ ಇನ್ನಿತರ ಉಪಕರಣಗಳಿವೆ. ಜಿಲ್ಲೆಯಲ್ಲಿ ಮೆಸ್ಕಾಂ, ಅರಣ್ಯ ಇಲಾಖೆ ಸಹಿತ ಇನ್ನಿತರ ಇಲಾಖೆಗಳು ಕೂಡ ಮುಂಗಾರು ಮುಂಜಾ ಗ್ರತೆಗೆಂದು ಪ್ರತ್ಯೇಕ ತಂಡವನ್ನು ರಚಿಸಿವೆ.