ಕೋಡಿ ಮಠದ ಶ್ರೀಗಳ ಭವಿಷ್ಯದ ಮೊರೆ ಹೋದ ಶಾಸಕ ಮೊಯ್ದೀನ್ ಬಾವಾ
ಮಂಗಳೂರು, ಜನವರಿ 20: ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ಕೋಡಿ ಮಠದ ಶ್ರೀ ಶಿವಯೋಗಿ ಶಿವಾನಂದ ರಾಜೇಂದ್ರ ಮಹಾ ಸ್ವಾಮೀಜಿಯವರನ್ನ ಭೇಟಿ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕೋಡಿ ಮಠದ ಸ್ವಾಮೀಜಿ ಅವರನ್ನು ಶಾಸಕ ಮೊಯ್ದೀನ್ ಬಾವಾ ಭೇಟಿಯಾಗಿರುವ ಫೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಬಿರುಸಿನ ಚಟುವಟಿಕೆ ಆರಂಭಿಸಿರುವ ಶಾಸಕ ಮೊಯಿದ್ದಿನ್ ಬಾವಾ ಈ ನಡುವೆ ಏಕಾಏಕಿ ಕೋಡಿ ಮಠದ ಸ್ವಾಮೀಜಿ ಅವರನ್ನು ಭೇಟಿಯಾಗಿರುವುದು ಭಾರಿ ಕುತೂಹಲ ಮೂಡಿಸಿದೆ.
ಕರ್ನಾಟಕ ಚುನಾವಣೆ: ಇವಿಎಂ ಮೇಲೆ ಭವಿಷ್ಯ ನುಡಿದ ಕೋಡಿಶ್ರೀ
ಇತ್ತೀಚೆಗೆ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಬರ್ಬರ ಹತ್ಯೆ ಪ್ರಕರಣ ಹಾಗೂ ನಂತರ ನಡೆದ ಕೆಲ ಬೆಳವಣಿಗೆಗಳಿಂದ ಬಾವಾ ಆತಂಕಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಶಾಸಕ ಮೊಯ್ದಿನ್ ಬಾವಾ ತಮ್ಮ ರಾಜಕೀಯ ಭವಿಷ್ಯ ಹಾಗೂ ಪರಿಹಾರ ಮತ್ತು ಮಾರ್ಗೋಪಾಯಗಳ ಬಗ್ಗೆಯೂ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ,
ರಾಜ್ಯ ರಾಜಕೀಯದಲ್ಲಿ ಆಗಲಿರುವ ಬದಲಾವಣೆಯ ಕುರಿತು ಭವಿಷ್ಯ ನುಡಿಯುತ್ತಿರುವ ಕೋಡಿ ಮಠದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಅವರಿಂದ ಮೊಯ್ದೀನ್ ಬಾವಾ ಆಶೀರ್ವಾದ ಪಡೆದಿರುವ ಬಗ್ಗೆ ಹಲವಾರು ದೃಷ್ಠಿಕೋನದಲ್ಲಿ ಚರ್ಚೆಗಳು ಆರಂಭವಾಗಿವೆ.
ಮುಂಬರುವ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಶಾಸಕ ಮೊಯ್ದೀನ್ ಬಾವಾ ಅವರ ಎದುರು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಈ ನಡುವೆ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳಲು ಇನ್ನೆರಡು ತಿಂಗಳು ಬಾಕಿ ಇರುವಾಗ ನಡೆದಿರುವ ಬಾವಾ ಮತ್ತು ಕೋಡಿ ಮಠದ ಶ್ರೀಗಳ ಭೇಟಿ ಮಹತ್ವ ಪಡೆದುಕೊಂಡಿದೆ.