ದಕ್ಷಿಣ ಕನ್ನಡ: ತಾವೇ ಸೇತುವೆ ನಿರ್ಮಿಸಿ ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾದ ಮೊಗ್ರದ ಜನರು
ಮಂಗಳೂರು, ಜುಲೈ 1: ಅಲ್ಲಿ ಸಂಭ್ರಮವಿತ್ತು, ಏನೋ ಸಾಧಿಸಿದ ಹೆಮ್ಮೆಯಿತ್ತು. ಗ್ರಾಮಸ್ಥರೆಲ್ಲಾ ಹಬ್ಬದ ರೀತಿಯ ಸಡಗರದಲ್ಲಿದ್ದರು. ತಮ್ಮೂರಿನ ಸಮಸ್ಯೆಗೆ ತಾವೇ ಪರಿಹಾರ ಹುಡುಕಿದ ಸಮಾಧಾನ ಅವರಲ್ಲಿತ್ತು. ಇಂತಹ ಒಂದು ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬ ಸಣ್ಣ ಹಳ್ಳಿ.
ಹಲವು ದಶಕಗಳಿಂದ ಸರ್ಕಾರದ ಶಾಶ್ವತದ ಪರಿಹಾರಕ್ಕಾಗಿ ಕಾದು ಕಾದು ಸುಸ್ತಾಗಿ, ತಮ್ಮೂರಿನ ಹೊಳೆಯ ಸಮಸ್ಯೆಗೆ ತಾವೇ ಪರಿಹಾರ ಅಂತಾ ಭಾವಿಸಿ, ತಮ್ಮದೇ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆಯ ಉದ್ಘಾಟನೆಯ ಅವಿಸ್ಮರಣೀಯ ಕ್ಷಣಕ್ಕೆ ಮೊಗ್ರದ ಜನರು ಸಾಕ್ಷಿಯಾಗಿದ್ದಾರೆ.
ಪ್ರಧಾನಿ ಸೂಚಿಸಿದರೂ ಈಡೇರದ ಬೇಡಿಕೆ; ಸ್ವಂತ ಖರ್ಚಿನಲ್ಲಿ ಸೇತುವೆ ನಿರ್ಮಾಣ
ಪ್ರಧಾನಿಯಿಂದ ಹಿಡಿದು ಗ್ರಾಮ ಪಂಚಾಯತಿವರೆಗೆ ಮನವಿ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕುಗ್ರಾಮದ ಜನರ ಅಭಿವೃದ್ಧಿಯ ಆಶಾಭಾವ ಕಮರಿ ಹೋಗಿ, ಜನಪ್ರತಿನಿಧಿಗಳ ಪೊಳ್ಳು ಭರವಸೆಗೆ ಕಾದು, ಬಸವಳಿದು ತಮ್ಮೂರಿನ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಲಾಗಿತ್ತು. ಹಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹೊಳೆ ದಾಟಲು ಸೇತುವೆಗಾಗಿ ಪ್ರಧಾನಿಯಿಂದ ಹಿಡಿದು ಗ್ರಾಮ ಪಂಚಾಯತಿವರೆಗೆ ಗುತ್ತಿಗಾರಿನ ಮೊಗ್ರ ಎಂಬ ಊರಿನ ಜನ ಮನವಿ ಮಾಡಿದ್ದರೂ ಫಲ ಸಿಕ್ಕಿರಲಿಲ್ಲ. ಆಗ ತಾವೇ ಹೊಳೆಗೆ ಕಬ್ಬಿಣದ ಸೇತುವೆ ನಿರ್ಮಿಸಲು ತೀರ್ಮಾನ ಮಾಡಿದರು.
ಜೀವ ಕೈಯಲ್ಲಿ ಹಿಡಿದುಕೊಂಡೆ ಹೋಗಬೇಕಿತ್ತು
ಮಳೆಗಾಲ ಬಂತೆಂದರೆ ಮೊಗ್ರದ ಜನರು ಪಡಬಾರದ ಕಷ್ಟ ಪಡುತ್ತಿದ್ದರು. ತಮ್ಮೂರಿನ ಹೊಳೆಯನ್ನು(ನದಿ) ದಾಟಿ ಇವರು ಪಟ್ಟಣಕ್ಕೆ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡೆ ಹೋಗಬೇಕಿತ್ತು. ಹೀಗಾಗಿ ತಮ್ಮೂರಿನ ಹೊಳೆಗೆ ಶಾಶ್ವತ ಸೇತುವೆ ಬೇಕೆಂದು ಶಾಸಕ-ಸಚಿವರುಗಳಿಗೆ ಮನವಿ ಸಲ್ಲಿಸಿದರು.
ಸ್ವಂತ ಖರ್ಚಿನಿಂದ ಸೇತುವೆ ನಿರ್ಮಿಸಲು ಮುಂದಾದರು
ಆದರೆ ಇದು ಪ್ರಯೋಜನಕಾರಿಯಾಗದೇ ನೇರ ಪ್ರಧಾನಿಗೆ ಮನವಿ ಮಾಡಿದ್ದರು. ಸಂಕಷ್ಟದ ವಿಡಿಯೋ ಸಿಡಿ ಕಳುಹಿಸಿ ಸೇತುವೆಗೆ ಮನವಿ ಮಾಡಿದ್ದರಿಂದ ಪ್ರಧಾನಿ ಕಾರ್ಯಾಲಯದಿಂದ ಸಮಸ್ಯೆ ಬಗೆಹರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ಗೆ ಸೂಚನೆ ಬಂದಿತ್ತು. ಆದರೆ ಪ್ರಧಾನಿಯೇ ಸೂಚಿಸಿದರೂ ಅಧಿಕಾರಿಗಳು ಇಚ್ಛಾ ಶಕ್ತಿಯನ್ನು ಮೆರೆದಿಲ್ಲ. ಹೀಗಾಗಿ ಅಧಿಕಾರಿಗಳನ್ನು ಕಾದರೆ ಇನ್ನು ಪ್ರಯೋಜನವಿಲ್ಲ ಎಂದು ಊರಿನ ಜನರೇ ಸೇತುವೆ ನಿರ್ಮಿಸಿದ್ದಾರೆ. ಇಲ್ಲಿಯವರೆಗೂ ಕಾದಿದ್ದ ಮೊಗ್ರದ ಜನರು ಜನಪ್ರತಿನಿಧಿಗಳಿಂದ, ಸರ್ಕಾರದಿಂದ ಪರಿಹಾರವನ್ನು ಅಪೇಕ್ಷಿಸುವುದೇ ವ್ಯರ್ಥವೆಂದು ಭಾವಿಸಿ, ಊರಿನ ಜನರೇ ತಮ್ಮ ಸ್ವಂತ ಖರ್ಚಿನಿಂದ ಸೇತುವೆ ನಿರ್ಮಿಸಲು ಮುಂದಾಗಿದ್ದರು.
ಮಕ್ಕಳನ್ನೇ ಕಾಯುತ್ತಿದ್ದ ಪೋಷಕರ ಯಾತನೆ ತಪ್ಪಿದೆ
ಗ್ರಾಮ ಭಾರತ ಎಂಬ ಯುವಕರ ಗುಂಪು ಈ ಸೇತುವೆ ನಿರ್ಮಾಣ ಕಾಮಗಾರಿಯ ಹೊಣೆ ಹೊತ್ತು, ದಾನಿಗಳ ಸಹಕಾರದಿಂದ ಸೇತುವೆ ನಿರ್ಮಿಸಿದ್ದಾರೆ. ಸೇತುವೆ ಉದ್ಘಾಟನೆಯ ಸಂಭ್ರಮದಲ್ಲಿ ಗ್ರಾಮಸ್ಥರೇ ಸೇತುವೆಯನ್ನು ವಿಶೇಷವಾಗಿ ಸಿಂಗರಿಸಿದ್ದಾರೆ. ಸೇತುವೆಗೆ ಬಣ್ಣ ಬಳಿದು, ಬಲೂನ್, ಹೂವು, ಬಾಳೆ ಗಿಡಗಳಿಂದ ಅಲಂಕಾರ ಮಾಡಿದ್ದಾರೆ. ಶಾಲಾ ವಿದ್ಯಾರ್ಥಿಗಳು ಸೇತುವೆಯನ್ನು ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ ಮಕ್ಕಳು ಅನುಭವಿಸುತ್ತಿದ್ದ ಸಂಕಷ್ಟ, ಹೊಳೆ ದಾಟುವ ಮಕ್ಕಳನ್ನೇ ಕಾಯುತ್ತಿದ್ದ ಪೋಷಕರ ಯಾತನೆ ತಪ್ಪಿದಂತಾಗಿದೆ.