ಕರಾವಳಿಯಲ್ಲಿ ಎಲ್ಲೆಲ್ಲೂ ಮೊಳಗಿದ ಮೋದಿ ಅಭಿಮಾನ
ಮಂಗಳೂರು ಮೇ 30: ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಭಾರತ ಪ್ರಧಾನಿಯಾಗಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಈ ಭವ್ಯ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಈ ನಡುವೆ ದೇಶದಾದ್ಯಂತ ಮೋದಿ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಮೋದಿ ಕುರಿತ ಅಭಿಮಾನವನ್ನು ಈಗಾಗಲೇ ಹಲವರು, ಹಲವಾರು ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಕರಾವಳಿಯಲ್ಲಿ ಮೋದಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇಲ್ಲಿನ ಮೋದಿ ಅಭಿಮಾನಿಗಳು ಕೆಲವು ಸೇವೆಗಳನ್ನು ಉಚಿತವಾಗಿ ನೀಡುವ ಮೂಲಕ ಅಭಿಮಾನ ಮೆರೆಯುತ್ತಿದ್ದಾರೆ.
ಸಂಜೆವರೆಗೂ ಕ್ಷೌರ ಫ್ರೀ
ನರೇಂದ್ರ ಮೋದಿ ಅಭಿಮಾನಿಯಾಗಿರುವ ಉಡುಪಿ ಜಿಲ್ಲೆಯ ಉಪ್ಪುಂದದ ಕ್ಷೌರಿಕ ನಯನ್ ಕುಮಾರ್(32) ಇಂದು ನಡೆಯುವ ಪ್ರಧಾನಿ ಪ್ರಮಾಣ ವಚನ ಸ್ವೀಕಾರದ ಸಂಭ್ರಮವನ್ನು ತನ್ನ ಗ್ರಾಹಕರಿಗೆ ಉಚಿತ ಕ್ಷೌರ ಮಾಡುವ ಮೂಲಕ ಆಚರಿಸಲಿದ್ದಾರೆ. ಕಳೆದ 12 ವರ್ಷಗಳಿಂದ ಕ್ಷೌರಿಕನಾಗಿ ಕೆಲಸ ಮಾಡುತ್ತಿರುವ ನಯನ್ ಕುಮಾರ್, ಉಪ್ಪುಂದ ದೇವಾಲಯದ ಸಮೀಪ ಕ್ಷೌರ ಅಂಗಡಿಯನ್ನು ನಡೆಸುತ್ತಿದ್ದಾರೆ. ಮನೆಯಲ್ಲಿ ಕೃಷಿ ಕೆಲಸ ಮಾಡುವ ಇವರು, ವೃತ್ತಿಯಲ್ಲಿ ಕ್ಷೌರಿಕ. ಮೋದಿ ಪ್ರಧಾನಿಯಾಗಿ ಎರಡನೆ ಬಾರಿಗೆ ಪ್ರಮಾಣ ಸ್ವೀಕರಿಸುವ ಇಂದು, ಬೆಳಗ್ಗೆ 7:30 ರಿಂದ ಸಂಜೆ 7 ಗಂಟೆಯವರೆಗೆ ಅಂಗಡಿಗೆ ಬರುವ ಎಲ್ಲ ಗ್ರಾಹಕರಿಗೂ ಉಚಿತ ಕ್ಷೌರ ಮಾಡುತ್ತಿದ್ದಾರೆ.
ಮೋದಿ ಪ್ರಧಾನಿಯಾಗಿ ಇಂದೇ ಪ್ರಮಾಣವಚನ ಸ್ವೀಕರಿಸೋದು ಯಾಕೆ ಗೊತ್ತಾ?
ಉಚಿತ ಚಾ ವಿತರಣೆ
ನರೇಂದ್ರ ಮೋದಿಯವರಿಗೆ ತಾಯಿ ಭಾರತಾಂಬೆಯ ಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಗಲಿ ಎಂದು ಹಾರೈಸಿ ಮಂಗಳೂರಿನ ಮೋರ್ಗನ್ ಗೇಟ್ ಮೋದಿ ಅಭಿಮಾನಿ ಬಳಗದ ವತಿಯಿಂದ ಇಂದು ನಮೋ ಟೀ ಸ್ಟಾಲ್ ಬೆಳಿಗ್ಗೆ ಉದ್ಘಾಟನೆಗೊಂಡಿದೆ. ಸ್ಟಾಲ್ ಉದ್ಘಾಟನೆಗೊಳಿಸಿ ಬಿಜೆಪಿ ಮುಖಂಡರೊಂದಿಗೆ ಚಾ ಸೇವಿಸಿದ ಶಾಸಕ ಕಾಮತ್ ಮೋದಿ ಅಭಿಮಾನಿಗಳ ಉಚಿತ ಚಾ ವಿತರಿಸುವ ಸೇವೆಗೆ ಶುಭ ಹಾರೈಕೆಯ ಮಾತುಗಳನ್ನು ಆಡಿ ಹುರಿದುಂಬಿಸಿದರು.
ಪ್ರಯಾಣಿಕರಿಗೆ 5 ಕಿ.ಮೀ ಉಚಿತ ಪ್ರಯಾಣ
ನರೇಂದ್ರ ಮೋದಿ ಪ್ರಧಾನಿಯಾಗಿ ಇಂದು ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಅಪೂರ್ವ ಕ್ಷಣವನ್ನು ಸ್ಮರಣೀಯ ಮಾಡಿಕೊಳ್ಳಲು ಉಪ್ಪಿನಂಗಡಿಯ 15 ಅಟೋ ಚಾಲಕರು ನಿರ್ಧರಿಸಿದ್ದಾರೆ. ಮೋದಿ ಪ್ರಮಾಣ ವಚನ ಹಿನ್ನೆಲೆಯಲ್ಲಿ ಇಂದು ದಿನಪೂರ್ತಿ ಪ್ರಯಾಣಿಕರಿಗೆ 5 ಕಿಲೋಮೀಟರ್ ಉಚಿತ ಪ್ರಯಾಣ ಒದಗಿಸಲಿದ್ದಾರೆ. ಮೋದಿ ಪ್ರಧಾನಿಯಾಗಿ ಬಡ ಹಾಗೂ ಮಧ್ಯಮವರ್ಗದ ಜನರಿಗೆ ಇನ್ನಷ್ಟು ಉತ್ತಮ ಯೋಜನೆಗಳನ್ನು ತರಲಿ ಎನ್ನುವ ಆಶಯದೊಂದಿಗೆ ಈ ಉಚಿತ ಸೇವೆಯನ್ನು ನೀಡುತ್ತಿರುವುದಾಗಿ ಅಟೋ ಚಾಲಕರು ಮಾಹಿತಿ ನೀಡಿದ್ದಾರೆ.
ಉಚಿತ ಬಸ್ ಸೇವೆ: ಮಂಗಳೂರಿನಲ್ಲಿ ಮೋದಿ ಅಭಿಮಾನಿಗಳಿಂದ ಇಂದು ಉಚಿತ ಬಸ್ ಸೇವೆ ಆರಂಭಿಸಲಾಗಿದೆ. ಮೂಡಬಿದ್ರೆ - ಕಿನ್ನಿಗೋಳಿ - ಮಂಗಳೂರು ಮದ್ಯೆ ಸಂಚರಿಸಲಿರುವ ಕೋಟ್ಯಾನ್ ಹೆಸರಿನ ಖಾಸಗಿ ಬಸ್ ಜನರಿಗೆ ಉಚಿತ ಸೇವೆ ನೀಡುತ್ತಿದೆ. ಮುಂಜಾನೆಯಿಂದ ಸಂಜೆವರೆಗೆ 6 ಟ್ರಿಪ್ ನ 250 ಕಿ.ಮೀ ಪ್ರಯಾಣವನ್ನು ಜನರಿಗೆ ಉಚಿತವಾಗಿ ನೀಡುತ್ತದೆ.
ಮರಳು ಶಿಲ್ಪದ ಮೂಲಕ ಶುಭ ಹಾರೈಕೆ
ಮೋದಿ ಪ್ರಮಾಣವಚನಕ್ಕೆ ಶುಭಾಶಯ ಕೋರಿ ಮೋದಿ ಅಭಿಮಾನಿ ಕಡಲತಡಿಯಲ್ಲಿ ಮರಳು ಶಿಲ್ಪ ನಿರ್ಮಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರದ ಮರಳು ಶಿಲ್ಪ ಕಲಾವಿದ ಹರೀಶ್ ಸಾಗಾ ಮೋದಿ ಪ್ರಮಾಣ ವಚನ ಮತ್ತು ಸಂಪುಟ ರಚನೆಗೆ ಮರಳು ಶಿಲ್ಪದ ಮೂಲಕ ಶುಭ ಹಾರೈಸಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸ್ಲೋಗನ್ ಅಡಿಯಲ್ಲಿ ರಚಿಸಿದ ಮರಳು ಶಿಲ್ಪ ಮಲ್ಪೆ ಕಡಲ ತೀರದ ಪ್ರವಾಸಿಗರನ್ನು ಆಕರ್ಷಿಸಿತು. ಅನೇಕ ಪ್ರವಾಸಿಗರು, ಮೋದಿ ಅಭಿಮಾನಿಗಳು ಮರಳು ಶಿಲ್ಪದ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಮೋದಿಗಾಗಿ ಕೂದಲು ಬಿಟ್ಟ ಅಭಿಮಾನಿ
ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲೀಕರ ಸಂಘ ಬಂಟ್ವಾಳದ ಕೋಶಾಧಿಕಾರಿ ಬಾಲಾಜಿ ಸರ್ವಿಸ್ ಸ್ಟೇಷನಿನ ಮಾಲೀಕ ಪ್ರಶಾಂತ್ ಭಂಡಾರ್ಕಾರ, ಮೋದಿ ಅವರ ಅಪ್ಪಟ ಅಭಿಮಾನಿ. ಮೋದಿಯ ಆಡಳಿತಕ್ಕೆ ಮನಸೋತವರು. ಮೋದಿಯ ಅಭಿಮಾನವನ್ನು ಬೆಳೆಸಿಕೊಂಡ ಇವರು, ಕಳೆದ ಒಂದು ವರುಷದಿಂದ ತನ್ನ ಗಡ್ಡ ಕೂದಲಿಗೆ ಕತ್ತರಿ ಹಾಕದೆ ಮೋದಿಜಿ ಪ್ರಮಾಣ ವಚನದಂದೇ ಇದಕ್ಕೆ ಮುಕ್ತಿ ಎಂದು ಪ್ರತಿಜ್ಞೆ ಮಾಡಿದವರು. ಇಂದು ಮೋದಿ ಅವರ ಪ್ರಮಾಣ ವಚನದ ನಂತರ ಪ್ರಶಾಂತ ಭಂಡಾರ್ಕಾರ ನ್ಯೂ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ..