ಮಂಗಳೂರು: ಮಳೆಗಾಗಿ ಮಂಗಳಾದೇವಿಗೆ ವಿಶೇಷ ಪ್ರಾರ್ಥನೆ
ಮಂಗಳೂರು, ಜೂನ್ 04: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಮುಂಗಾರು ಪ್ರವೇಶ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಇನ್ನೆರಡು ದಿನದಲ್ಲಿ ಮಳೆ ಬಾರದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರೇಷನಿಂಗ್ ವ್ಯವಸ್ಥೆ ಜಾರಿಗೆ ತರಲಾಗಿದ್ದು, 4 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.
ಮಂಗಳೂರಿನಲ್ಲಿ ನೀರಿನ ಸಮಸ್ಯೆ: ಮಳೆಗಾಗಿ ದೇವರ ಮೊರೆ ಹೋದ ಜನರು
ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಂಗಳೂರಿನ ಪ್ರಸಿದ್ಧ ಮಂಗಳಾದೇವಿ ದೇವಾಲಯಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಂಗಳೂರಿನ ಮಹಾನಗರದಲ್ಲಿ ಕುಡಿಯುವ ನೀರಿನ ಕೊರತೆ ಉದ್ಭವಿಸಿದ್ದು, ಶೀಘ್ರದಲ್ಲಿ ಮಳೆ ಬಂದು ನಗರದ ಜನತೆಯ ಸಂಕಷ್ಟ ಬಗೆಹರಿಯಲು ದೇವರು ಅನುಗ್ರಹಿಸಬೇಕು ಎಂದು ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಧ್ಯಾಹ್ನದ ಮಹಾಪೂಜೆಯಲ್ಲಿ ಭಾಗವಹಿಸಿದ್ದ ಸಂದರ್ಭ ಮಾತನಾಡಿದ ಶಾಸಕರು, ಮಂಗಳೂರಿಗೆ ಹೆಸರು ಬರಲು ಕಾರಣವಾಗಿರುವ ಮಂಗಳಾಂಬೆಯ ಸನ್ನಿಧಿಯಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಹಿಂದೆ ಈ ರೀತಿ ನೀರಿನ ಕೊರತೆ ಉಂಟಾದಾಗ ನಮ್ಮ ಹಿರಿಯರು ದೇವರನ್ನು ಪ್ರಾರ್ಥಿಸಿದಾಗ ಮಳೆ ಬಂದು ತೊಂದರೆಗಳು ದೂರವಾಗಿದ್ದವು ಎನ್ನುವುದು ನಮಗೆ ಗೊತ್ತೇ ಇದೆ. ಈಗ ಮಳೆಯಿಲ್ಲದೆ ನಾವು ಪಡುತ್ತಿರುವ ಸಂಕಟವನ್ನು ದೇವಿಯ ಮುಂದೆ ಹೇಳಿಕೊಂಡಿದ್ದೇವೆ. ದೇವಿ ಕಾಪಾಡುತ್ತಾಳೆ ಎನ್ನುವ ನಂಬಿಕೆ ಇದೆ ಎಂದು ಹೇಳಿದರು.