ಉಳ್ಳಾಲ ವಲಯದ ಸಿಪಿಐಂ ಕಚೇರಿಗೆ ದುಷ್ಕರ್ಮಿಗಳಿಂದ ಬೆಂಕಿ
ತೊಕ್ಕೊಟ್ಟು, ಫೆಬ್ರವರಿ. 23 : ಮಂಗಳೂರು ಹೊರವಲಯದ ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಸಿಪಿಐಂ ಉಳ್ಳಾಲ ವಲಯದ ಪಕ್ಷದ ಕಛೇರಿಗೆ ಬುಧವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಪಿಠೋಪಕರಣ, ಪಕ್ಷದ ಕಡತಗಳು ಬೆಂಕಿಗೆ ಆಹುತಿಯಾಗಿವೆ. ಕಚೇರಿಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ದುಷ್ಕರ್ಮಿಗಳು ಕಚೇರಿಯ ಸಾಮಾಗ್ರಿಗಳನ್ನು ನಾಶ ಮಾಡಿದ್ದಾರೆ.[ಪಿಣರಾಯಿ ಆಗಮನದಂದೇ ದಕ್ಷಿಣ ಕನ್ನಡ ಜಿಲ್ಲಾ ಬಂದ್ - ಸಂಘ ಪರಿವಾರ]
ಮುಂಜಾನೆ ಈ ಕೃತ್ಯ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫೆಬ್ರವರಿ 25ರಂದು 'ಐಕ್ಯತಾ ರ್ಯಾಲಿ' ನಡೆಸುವ ಮುನ್ನವೇ ದುಷ್ಕರ್ಮಿಗಳು ಈ ಕೃತ್ಯ ಎಸಗಿರುವುದು ಸಿಪಿಎಂ ಕಾರ್ಯಕರ್ತರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಫೆಬ್ರವರಿ 25 ರಂದು ಮಂಗಳೂರಿನಲ್ಲಿ ನಡೆಯುವ ಸಿಪಿಐಎಂ ಪಕ್ಷದ ಐಕ್ಯತಾ ರ್ಯಾಲಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಆಗಮನಕ್ಕೆ ಸಂಘ ಪರಿವಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಕೇರಳದಲ್ಲಿ ಸಂಘ ಪರಿವಾರದ ನಾಯಕರ, ಕಾರ್ಯಕರ್ತರ ಹತ್ಯೆಗಳು ನಿರಂತರ ನಡೆಯುತ್ತಿತ್ತಿರುವುದರಿಂದ ಕೇರಳ ಸಿಎಂ ಆಗಮನ ವಿರೋಧಿಸಿ, ಫೆಬ್ರವರಿ 25ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರ ಬಂದ್ ಗೆ ಕರೆ ನೀಡಿದೆ.
ಬಂದ್ ಮುನ್ನವೇ ದ್ವೇಷದ ಜ್ವಾಲೆ ಎಬ್ಬಿದೆ. ದುಷ್ಕರ್ಮಿಗಳ ಈ ಕೃತ್ಯಕ್ಕೆ ಸಿಪಿಐಎಂ ಪಕ್ಷ ತೀವ್ರ ಖಂಡನೆ ವ್ಯಕ್ತ ಪಡಿಸಿದ್ದು ದುಷ್ಕರ್ಮಿಗಳನ್ನ ಪತ್ತೆ ಹಚ್ಚುವಂತೆ ಆಗ್ರಹಿಸಿದೆ.