ಬೋರ್ ವೆಲ್ ನಲ್ಲಿ ಉಕ್ಕಿದ ಜಲ: ಪೂಜೆಯ ಪವಾಡ?
ಮಂಗಳೂರು, ಜೂನ್ 07: 600 ಅಡಿ ಕೊರೆದಿದ್ದರೂ ನೀರೇ ಕಾಣದಿದ್ದ ಕೊಳವೆ ಬಾವಿಗಳಲ್ಲಿ ಇದ್ದಕ್ಕಿದ್ದಂತೆ ನೀರು ಉಕ್ಕಿದ ಪವಾಡ ಪ್ರಸಂಗ ಮಂಗಳೂರು ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಕ್ರೈಸ್ತ ಕುಟುಂಬವೊಂದು, ಐದು ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಸಿಗದೇ ಕಂಗಾಲಾಗಿ ತಮ್ಮ ಜಮೀನಿನಲ್ಲಿ ದೈವ ಪೂಜೆಯನ್ನು ಇತ್ತೀಚೆಗೆ ನೆರವೇರಿಸಿತ್ತು. ಇದೀಗ ಇದ್ದಕ್ಕಿದ್ದಂತೆ ಕೊಳವೆ ಬಾವಿಗಳಲ್ಲಿ ನೀರು ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರು ಹೊರವಲಯದ ನಿಡ್ಡೋಡಿ ಗುಂಡೆಲ್ ಗ್ರಾಮದ ನಿವಾಸಿ ವಿಕ್ಟರ್ ಡಿಸಿಲ್ವ ಹಲವಾರು ವರ್ಷಗಳಿಂದ ಕೃಷಿ ಮಾಡಿಕೊಂಡಿದ್ದಾರೆ. ತಮ್ಮ 7 ಎಕರೆ ಜಮೀನಿನಲ್ಲಿ ತೆಂಗು, ಭತ್ತ ಮತ್ತಿತರ ಬೆಳೆಗಳನ್ನು ಬೆಳೆದುಕೊಂಡಿದ್ದಾರೆ. ಬೆಳೆಗೆ ನೀರುಣಿಸಲು ಬಾವಿಯೊಂದನ್ನು ತೋಡಿದ್ದು, ಅದರಲ್ಲಿ ಬೇಕಾದಷ್ಟು ನೀರು ಸಿಗುತ್ತಿತ್ತು. ಆದರೆ ಈ ಬಾರಿ ಮಳೆ ಪ್ರಮಾಣ ಕಡಿಮೆಯಾದ್ದರಿಂದ ಏಪ್ರಿಲ್ ತಿಂಗಳಿನಲ್ಲೇ ಬಾವಿಯಲ್ಲಿ ನೀರು ಬರಿದಾಗಿತ್ತು.
ದಕ್ಷಿಣ ಕನ್ನಡದ ಅನಂತನ ಸನ್ನಿಧಿಯಲ್ಲಿ ಒಂದರ ಹಿಂದೆ ಮತ್ತೊಂದು ಪವಾಡ!
ಈ ಹಿನ್ನೆಲೆಯಲ್ಲಿ ತಮ್ಮ ಜಮೀನಿನಲ್ಲಿ ವಿಕ್ಟರ್ ಡಿಸಿಲ್ವ ಅವರು ಕೊಳವೆ ಬಾವಿಯನ್ನು ತೋಡಿಸಿದರು. ಸುಮಾರು 600 ಅಡಿ ಕೊರೆದರೂ ನೀರು ಸಿಗಲಿಲ್ಲ. ಇದರಿಂದ ಬೇಸತ್ತು ಮತ್ತೊಂದು ಕೊಳವೆ ಬಾವಿ ಕೊರೆಸಿದರು. ಅದೂ 700 ಅಡಿ ಅಳಕ್ಕೆ ಹೋದರೂ ಒಂದು ತೊಟ್ಟೂ ನೀರು ಬರಲಿಲ್ಲ. ಇಷ್ಟಕ್ಕೆ ಸುಮ್ಮನಾಗದ ವಿಕ್ಟರ್ ಡಿಸಿಲ್ವ ಒಂದರ ನಂತರ ಒಂದರಂತೆ ಮತ್ತೆ ಎರಡು ಕೊಳವೆ ಬಾವಿಯನ್ನು ತೋಡಿದರು. ಆದರೂ ನೀರು ಸಿಗಲಿಲ್ಲ, ಒಟ್ಟು 4 ಬೋರ್ ವೆಲ್ ಗಳನ್ನು ತೋಡಿ ಸುಮಾರು 5 ಲಕ್ಷದಷ್ಟು ಖರ್ಚು ಮಾಡಿ ಮಾನಸಿಕವಾಗಿ ಕುಗ್ಗಿದ್ದರು.
ಕೃಷಿಯನ್ನೇ ನಂಬಿ ಬದುಕಿದ ಇವರು, ತಾವು ಕಷ್ಟಪಟ್ಟು ಬೆಳೆಸಿದ ತೋಟ ನೀರಿಲ್ಲದೆ ಒಣಗಿದ್ದನ್ನು ನೋಡಲಾಗದೆ ದಾರಿ ತೋಚದಂತಾದರು. ಹೀಗಿರುವಾಗ, ಬೋರ್ ವೆಲ್ ಬಾರಿ ಮಾಲೀಕ, ಬೆಳ್ತಂಗಡಿಯ ಜಗದೀಶ್ ಶಾಂತಿ ಎಂಬುವವರ ಮೊಬೈಲ್ ನಂಬರ್ ಕೊಟ್ಟು ಸಮಸ್ಯೆಗೆ ಪರಿಹಾರ ಹುಡುಕುವಂತೆ ಹೇಳಿದ್ದರು. ಅದರಂತೆ ಡಿಸಿಲ್ವ, ಅವರನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು.
ಅಚ್ಚರಿಯ ಘಟನೆ: ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಪ್ರತ್ಯಕ್ಷವಾದ ನವಿಲು!
ಡಿಸಿಲ್ವ ಅವರ ಜಮೀನಿನಲ್ಲಿ ನಾಗನ ದೋಷವಿದೆ ಎಂದು ಹೇಳಿ, ಪೂಜೆ ಮಾಡಿಸಲು ಅವರು ಸಲಹೆ ನೀಡಿದ್ದರು. ಧರ್ಮಸ್ಥಳ ಮತ್ತು ಸುಬ್ರಮಣ್ಯದಲ್ಲಿ ಪ್ರಾರ್ಥನೆ ಮಾಡುವುದರೊಂದಿಗೆ ಕಾರ್ಕಳ ಮಂಗಳೂರು ಮತ್ತು ತಮ್ಮ ಗ್ರಾಮದ ವ್ಯಾಪ್ತಿಯ ಚರ್ಚ್ ಗಳಲ್ಲಿ ಪೂಜೆ ಸಲ್ಲಿಸಿ ಎಂದೂ ಹೇಳಿದ್ದರು. ಡಿಸಿಲ್ವ ಪೂಜೆಯನ್ನೂ ಸಲ್ಲಿಸಿದ್ದರು, ನಂತರ, ಜಗದೀಶ್ ಅವರು ಹೇಳಿದಂತೆ, ಒಂದು ಸ್ಥಳವನ್ನು ಗುರುತಿಸಿ ಈ ಜಾಗದಲ್ಲಿ ಕೊಳವೆ ಬಾವಿ ಕೊರೆಯಲು ಆರಂಭಿಸಿದ್ದರು. 35 ಅಡಿ ಆಳದಲ್ಲೇ ನೀರು ಕಾಣಿಸಿಕೊಂಡು, 600 ಅಡಿ ಅಳಕ್ಕೆ ಹೋಗುತ್ತಿದ್ದಂತೆ ಬೇಕಾದಷ್ಟು ನೀರು ದೊರಕಿತ್ತು. ಈ ಹಿಂದೆ ತೋಡಿದ್ದ ಐದು ಕೊಳವೆ ಬಾವಿಗಳಲ್ಲೂ ನೀರು ಕಂಡಿತ್ತು.
ಪೊಳಲಿ ರಾಜರಾಜೇಶ್ವರಿ ದೇವಾಲಯದ ಧ್ವಜಸ್ತಂಭ ಪ್ರತಿಷ್ಠೆ ವೇಳೆ ಪವಾಡ!
ಹೀಗೆ ಒಮ್ಮಿಂದೊಂಮ್ಮೆಲೇ ಕೊಳವೆ ಬಾವಿಗಳಲ್ಲಿ ನೀರು ಕಾಣಿಸಿಕೊಂಡಿರುವುದು ಸಂತೋಷದೊಂದಿಗೆ ಆಚ್ಚರಿಯನ್ನೂ ತಂದಿದೆ. ಕಾರಣ ಏನಿದ್ದರೂ, ಈ ಪವಾಡವನ್ನು ನೋಡಲು ಜನರೂ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ.