ರುಚಿಯಾದ ಮೀನೂಟ ಬಡಿಸಿದವನಿಗೆ ಭರ್ಜರಿ ಗಿಫ್ಟ್ ನೀಡಿದ ಜಮೀರ್ ಅಹ್ಮದ್
ಮಂಗಳೂರು, ಅಕ್ಟೋಬರ್ 19: ಮಂಗಳೂರಿನ ಮೀನುಗಳ ಫ್ರೈ ರುಚಿಗೆ ಫಿದಾ ಆದ ಸಚಿವ ಜಮೀರ್ ಅಹಮ್ಮದ್, ಅಡುಗೆ ತಯಾರಿಸಿದ ಬಾಣಸಿಗನಿಗೆ ಮಕ್ಕಾ ಯಾತ್ರೆಗೆಂದು ಬಕ್ಷೀಷ್ ನೀಡಿದ್ದಾರೆ. ಅಷ್ಟೆ ಅಲ್ಲ ಹೊಟೇಲ್ನ ಕಾರ್ಮಿಕರಿಗೆ 25 ಸಾವಿರ ರೂಪಾಯಿ ಟಿಪ್ಸ್ ಕೂಡ ನೀಡಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಜಮೀರ್ ಅಹ್ಮದ್ ನಿನ್ನೆ ಮಂಗಳೂರಿಗೆ ಭೇಟಿ ನೀಡಿದ್ದರು. ವಕ್ಫ್ ಹಾಗೂ ಹಜ್ ಸಚಿವರು ಆಗಿರುವ ಜಮೀರ್ ಅಹಮ್ಮದ್ ಖಾನ್ ನಗರದ ಪಾಂಡೇಶ್ವರದಲ್ಲಿದಲ್ಲಿರುವ ಮೌಲಾನ ಅಜಾದ್ ಭವನದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಮದ್ಯಾಹ್ನದ ಊಟಕ್ಕೆ ನಗರದ ಕಂಕನಾಡಿ ಲೋವರ್ ಬೆಂದೂರ್ ವೆಲ್ ನಲ್ಲಿರುವ 'ಫಿಶ್ ಮಾರ್ಕೆಟ್' ಸೀಫುಡ್ ರೆಸ್ಟೋರೆಂಟ್ ಗೆ ತೆರಳಿದ್ದರು.
ಅಲ್ಲಿ ತಮ್ಮ ಸ್ನೇಹಿತರೊಂದಿಗೆ ಕರಾವಳಿಯ ವಿವಿಧ ಬಗೆಯ ಅಂಜಲ್, ಮಾಂಜಿ, ಸಿಗಡಿ ಮೀನೂಟ, ವಿವಿಧ ಖಾದ್ಯಗಳು, ನೀರುದೋಸೆ, ಕಲ್ತಪ್ಪವನ್ನು ಸವಿದರು. ರುಚಿಕರ ಮೀನಿನ ಖಾದ್ಯಗಳಿಗೆ ಫಿದಾ ಆದ ಸಚಿವ ಜಮೀರ್ ಅಹ್ಮದ್ ಹೋಟೆಲ್ ನಲ್ಲಿ ಶುಚಿರುಚಿಯಾದ ಮೀನು ಅಡುಗೆ ತಯಾರಿಸಿದ ಬೋಳಿಯಾರ್'ನ ಹನೀಫ್ ಅವರಿಗೆ ಪವಿತ್ರ ಮಕ್ಕಾ ಯಾತ್ರೆ ಯ ಖರ್ಚು ವೆಚ್ಚ ನೋಡಿಕೊಳ್ಳುವ ಇನಾಮು ನೀಡಿದ್ದಾರೆ.
ಬಾಣಸಿಗ ಹನೀಫ್ ನನ್ನು ತನ್ನ ಬಳಿ ಕರೆದ ಸಚಿವ ಜಮೀರ್ ಅಹ್ಮದ್ ಮೀನೂಟ ತುಂಬಾ ಸ್ವಾದಭರಿತವಾಗಿ ಮಾಡಿದ್ದೀರಾ. ನಿಮಗೆ ಉಮ್ರಾ ಯಾತ್ರೆ ಕೈಗೊಳ್ಳಲು ಪ್ರಾಯೋಜಕತ್ವ ನೀಡುತ್ತೇನೆ ಎಂದಿದ್ದಾರೆ. ಅದಲ್ಲದದೇ ಯು ಟಿ ಖಾದರ್ ಅವರ ಸಹೋದರ ಡಾ.ಯು.ಟಿ.ಇಫ್ತಿಕಾರ್ ಅವರಿಗೆ ಇದರ ಜವಾಬ್ದಾರಿಯನ್ನು ವಹಿಸಿದರು.
ಅಷ್ಟುಮಾತ್ರ ವಲ್ಲದೇ ಹೊರಡುವ ಮುನ್ನ ಫಿಶ್ ಮಾರ್ಕೆಟ್ ಹೋಟೆಲ್'ನಲ್ಲಿರುವ ಎಲ್ಲಾ ಸಿಬ್ಬಂದಿಗಳನ್ನು ತನ್ನ ಬಳಿ ಕರೆದು 25 ಸಾವಿರ ರೂಪಾಯಿ ಟಿಪ್ಸ್ ಕೂಡ ಸಚಿವ ಜಮೀರ್ ಅಹಮ್ಮದ್ ನೀಡಿದ್ದಾರೆ.