27 ಜನರ ಜೀವ ಉಳಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ಖಾದರ್ ಅಭಿನಂದನೆ
ಮಂಗಳೂರು, ಜೂನ್ 4: ಉಳ್ಳಾಲದಲ್ಲಿ ಮುಳುಗುತ್ತಿದ್ದ ಬಾರ್ಜ್ ನಲ್ಲಿದ್ದ ಎಲ್ಲಾ 27 ಜನರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್ ಹಾಗೂ ಕಾವಲು ಪಡೆಗೆ ಸರಕಾರ ಹಾಗೂ ಜಿಲ್ಲಾಡಳಿತದ ಪರವಾಗಿ ಸಚಿವ ಯು.ಟಿ.ಖಾದರ್ ಅಭಿನಂದನೆ ಸಲ್ಲಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲದ ಮೊಗವೀರಪಟ್ನದಲ್ಲಿ ನಡೆದ ಬಾರ್ಜ್ ಅಪಘಾತಕ್ಕೆ ಕಂಪನಿಯೇ ನೇರ ಕಾರಣ. ಈ ಬಗ್ಗೆ ತನಿಖೆಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.[ಮಂಗಳೂರು: ದುರಂತಕ್ಕೀಡಾದ ಬಾರ್ಜ್ ನಲ್ಲಿದ್ದ 27 ನೌಕರರ ರಕ್ಷಣೆ]
ಇನ್ನು ಕೋಸ್ಟ್ ಗಾರ್ಡ್ ಅಧಿಕಾರಿ ಡಿಸಿಲ್ಲ ಮಾತನಾಡಿ, "ಯಾರಿಗೂ ಮಾಹಿತಿ ನೀಡದೆ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಕಂಪೆನಿ ಕಾಮಗಾರಿ ನಡೆಸಿತ್ತು. ಕಳೆದ ರಾತ್ರಿ ಪರಿಸ್ಥಿತಿ ಕಾರ್ಯಾಚರಣೆಗೆ ಸೂಕ್ತವಾಗಿರಲಿಲ್ಲ. ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದರೂ ಇಂದು ಮುಂಜಾನೆ 5 ಗಂಟೆಯಿಂದ 8 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಲಾಗಿದೆ," ಎಂದರು.
ಯು.ಟಿ.ಖಾದರ್ ನೇತೃತ್ವ ವಹಿಸಿದ್ದು ಹೇಗೆ?
ಮೈಸೂರು ಕಾರ್ಯಕ್ರಮ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮಂಗಳೂರು ತಲುಪಿದ ಸಚಿವ ಖಾದರ್ ಆ ನಂತರ ರಂಝಾನ್ ಉಪವಾಸದ ಸಹರಿ ಸೇವಿಸಿ ಮಸೀದಿಯಲ್ಲಿ ಭಾನುವಾರ ಬೆಳಗ್ಗಿನ ನಮಾಝ್ ಮುಗಿಸಿ ಬಾರ್ಜ್ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗೆ ವಿಶೇಷ ಪ್ರಾರ್ಥನೆ ನಡೆಸಿದರು. ಬಳಿಕ ನೇರವಾಗಿ ಪಣಂಬೂರು ಕೋಸ್ಟ್ ಗಾರ್ಡ್ ಕಛೇರಿಗೆ ತೆರಳಿ ಕಾರ್ಯಾಚರಣೆ ತಂಡದೊಂದಿಗೆ ಸೇರಿಕೊಂಡರು.
ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ ಖಾದರ್
ಈ ಸಂದರ್ಭದಲ್ಲಿ ಯು.ಟಿ.ಖಾದರ್ ಪಣಂಬೂರು ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು. ಇದಾದ ನಂತರ (Air Cutpon Vessel) ಓವರ್ ಕ್ರಾಫ್ಟ್ ಬೋಟನ್ನು ಬೆಳಗ್ಗಿನಿಂದ ಕಾರ್ಯಾಚರಣೆಗೆ ಇಳಿಸಲಾಯಿತ್ತು . ಈ ವಿಶೇಷ ಬೋಟ್ ನೀರು ಹಾಗೂ ಹೊಯ್ಗೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. 50 ಮಂದಿ ಕೋಸ್ಟ್ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದರು.[ಉಳ್ಳಾಲದಲ್ಲಿ ಹಡಗು ದುರಂತ; 33 ಜನರು ಅಪಾಯದಲ್ಲಿ]
ಹೆಲಿಕಾಫ್ಟರ್ ತರಿಸಲು ಸಿದ್ದತೆ
ಕೋಸ್ಟ್ ಗಾರ್ಡ್ ಗೆ ಅಸಾಧ್ಯವಾದರೆ ತಕ್ಷಣ ಹೆಲಿಕಾಪ್ಟರ್ ಆಗಮಿಸುವ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು. ಬಾರ್ಜ್ ನಲ್ಲಿ ಸಿಲುಕಿಕೊಂಡಿದ ಶೋಭಿತ್ ಅವರ ಜೊತೆ ಖಾದರ್ ಫೋನ್ ಮೂಲಕ ನಿರಂತರ ಸಂಪರ್ಕ ಇಟ್ಟುಕೊಂಡಿದ್ದರು. ಈ ಸಂದರ್ಭ ಅವರು ಎಲ್ಲಾ 24 ಮಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಎಲ್ಲರೂ ಆರೋಗ್ಯವಾಗಿದ್ದಾರೆ
ಇನ್ನು ರಕ್ಷಿಸಿದವರನ್ನು ಪಣಂಬೂರು ಎನ್ ಎಮ್ ಪಿ ಟಿಗೆ ವರ್ಗಾಯಿಸಲಾಗಿದ್ದು, ಅಲ್ಲಿ ಸಚಿವ ಖಾದರ್ ಜಿಲ್ಲಾ ವೈದ್ಯಾಧಿಕಾರಿಗೆ ಆದೇಶಿಸಿ ಮೆಡಿಕಲ್ ತಂಡವನ್ನು ಸಜ್ಜುಗೊಳಿಸಿದ್ದರು. ಎಲ್ಲರನ್ನೂ ಆರೋಗ್ಯ ತಪಾಸಣೆಗೊಳಪಡಿಸಲಾಗಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ.
ಶನಿವಾರ ನಡೆದಿದ್ದ ದುರಂತ
ಶನಿವಾರ ಬಾರ್ಜ್ ಬಲವಾದ ಗಾಳಿಗೆ ಬಂಡೆಕಲ್ಲಿಗೆ ಅಪ್ಪಳಿಸಿ ಒಂದು ಭಾಗದ ಆಂಕರ್ ತುಂಡಾದುದರಿಂದ ಈ ದುರಂತ ಸಂಭವಿಸಿತ್ತು. ಬಾರ್ಜ್ ನಲ್ಲಿ 27 ಮಂದಿ ಇದ್ದು ನಾಲ್ವರನ್ನು ಶನಿವಾರವೇ ರಕ್ಷಿಸಲಾಗಿತ್ತು. ಉಳಿದವರ ರಕ್ಷಣೆಗೆ ರಾತ್ರಿ ವೇಳೆ ಗಾಳಿ ತೊಡಕಾಗಿತ್ತು. ಜತೆಗೆ ಬಾರ್ಜ್ ಬಳಿ ದೊಡ್ಡ ಬೋಟ್ ಹೋಗುತ್ತಿರಲಿಲ್ಲ. ರಬ್ಬರ್ ಬೋಟ್ ಬಳಸಲು ಗಾಳಿ ಭಾರೀ ತೊಡಕಾಗಿದ್ದರಿಂದ ಇಂದು ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಲಾಗಿದೆ.