ಸ್ವಕ್ಷೇತ್ರದಲ್ಲಿ ಸರಿಯಾದ ರಸ್ತೆಯಿಲ್ಲದೇ ಜೀಪ್ನಿಂದ ಇಳಿದು ನಡೆದುಕೊಂಡೇ ಹೋದ ಸಚಿವ ಎಸ್. ಅಂಗಾರ!
ಮಂಗಳೂರು, ಆಗಸ್ಟ್ 09: ಕಳೆದ 30 ವರ್ಷಗಳಿಂದ ಸುಳ್ಯ ಕ್ಷೇತ್ರದ ಶಾಸಕರಾಗಿ ಸೋಲಿಲ್ಲದ ಸರದಾರನಾರುವ ಸಚಿವ, ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ ಶಾಸಕರಾಗಿ ಸುಳ್ಯಗೆ ನೀಡಿದ ಕೊಡುಗೆ ಏನು ಅಂತಾ ಒಮ್ಮೆ ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರವನ್ನು ಸ್ವತಃ ಸಚಿವ ಅಂಗಾರರವರೇ ಕಂಡುಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮೀನುಗಾರಿಕಾ ಮತ್ತು ಒಳನಾಡು ಮತ್ತು ಜಲಸಾರಿಗೆ ಸಚಿವರಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಎಸ್. ಅಂಗಾರ ಸುಳ್ಯ ಕ್ಷೇತ್ರಕ್ಕೆ ಆಗಮಿಸಿದ ಒಂದು ವಾರದೊಳಗೇ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಬೊಮ್ಮಾಯಿ ಸಂಪುಟಕ್ಕೆ ಸೇರಿದರೂ ಬದಲಾಗದ ಅಂಗಾರ, ಕೋಟಾ ಜೀವನ ಶೈಲಿ!
ಸತತ ಆರು ಬಾರಿ ವಿಧಾನಸಭೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಎಸ್.ಅಂಗಾರ, ನಡೆ- ನುಡಿಯಲ್ಲಿ ಮಾದರಿ ರಾಜಕಾರಣಿ. ಆದರೆ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಹೇಳಿಕೊಳ್ಳುವ ಸಾಧನೆ ಏನು ಇಲ್ಲ ಅನ್ನೋದು ಸುಳ್ಯ ಕ್ಷೇತ್ರದ ಮತದಾರರ ಮಾತಾಗಿದೆ. ಆದರೆ ಆ ಮಾತು ಮತ್ತೊಮ್ಮೆ ನಿಜ ಅಂತಾ ರುಜುವಾತಾಗಿದೆ.
ಮೂಲಭೂತ ಸೌಕರ್ಯಕ್ಕಾಗಿ ಪರಿತಪಿಸುತ್ತಿದ್ದಾರೆ
ಸುಳ್ಯದ ಮತದಾರ ಕಳೆದ ಅಷ್ಟೂ ವರ್ಷಗಳಿಂದ ಮೂಲಭೂತ ಸೌಕರ್ಯಕ್ಕಾಗಿ ಪರಿತಪಿಸುತ್ತಲೇ ಇದ್ದಾರೆ. ಇದರ ನೇರ ಅನುಭವ ಈಗ ಸುಳ್ಯ ಶಾಸಕ ಮತ್ತು ಸಚಿವ ಎಸ್. ಅಂಗಾರರಿಗೆ ಆಗಿದೆ. ಕಳಪೆ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನ ಕೂಡಾ ಹೋಗದ ಹಿನ್ನಲೆಯಲ್ಲಿ ಕಾರಿನಲ್ಲಿದ್ದ ಸಚಿವ ಎಸ್. ಅಂಗಾರ ನಡೆದುಕೊಂಡೇ ಹೋದ ಘಟನೆ ಸುಳ್ಯ ತಾಲೂಕಿನ ಅಲೆಟ್ಟಿ ಎಂಬಲ್ಲಿ ನಡೆದಿದೆ.
ರಸ್ತೆ ಸರಿಪಡಿಸುವ ಭರವಸೆ ನೀಡಿದ್ದ ಅಂಗಾರ
ಹಾಗಂತ ಅಲೆಟ್ಟಿಯ ಸಮಸ್ಯೆ ಅದು ನಿನ್ನೆ ಮೊನ್ನೆಯದಲ್ಲ. ಕಳೆದ ವಿಧಾನಸಭಾ ಕ್ಷೇತ್ರ ಚುನಾವಣಾ ವೇಳೆಯಲ್ಲಿ ಅಲೆಟ್ಟಿಯ ಮತದಾರರು ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದರು. ಆಗ ಎಸ್. ಅಂಗಾರ ಜನರ ಬಳಿ ಬಂದು ರಸ್ತೆ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು. ಆಗ ಇದೇ ರಸ್ತೆಯಲ್ಲಿ ಹೋಗಿ ರಸ್ತೆ ಸರಿಪಡಿಸುವ ಭರವಸೆಯನ್ನು ನೀಡಿದ್ದರು. ಆದರೆ ಅಂಗಾರ ಮತ್ತೆ ಚುನಾಯಿತರಾಗಿ ನಾಲ್ಕು ವರ್ಷಗಳ ಸನಿಹವಾಗುತ್ತಿದೆ, ರಸ್ತೆ ಮಾತ್ರ ಹಾಗೆಯೇ ಇದೆ. ಜನರು ಮತ್ತೊಂದು ಚುನಾವಣೆ ಬಹಿಷ್ಕಾರ ಹಾಕುವ ಯೋಜನೆ ಹಾಕುತ್ತಿದ್ದಾರೆ.
ಹಾಳಾದ ರಸ್ತೆಯಲ್ಲಿ ಜೀಪ್ ಹೋಗದೆ ನಿಂತಿತು
ಅಲೆಟ್ಟಿಯ ಕೋಟೆಲು ಗ್ರಾಮಕ್ಕೆ ಹೊರಟಿದ್ದ ಎಸ್. ಅಂಗಾರ ಇದ್ದ ಜೀಪ್, ಹಾಳಾದ ರಸ್ತೆಯಲ್ಲಿ ಹೋಗದೇ ನಿಂತಿದೆ. ಚಾಲಕ ಎಷ್ಟೇ ಪ್ರಯತ್ನ ಪಟ್ಟರೂ ಜೀಪ್ ಮಾತ್ರ ಒಂದಿಂಚೂ ಕದಲಿಲ್ಲ. ಜೀಪ್ನಿಂದ ಇಳಿದು ಅಂಗಾರ ಕಾಲಿಗೆ ಕೆಲಸ ಕೊಟ್ಟರೆ ಅಂಗಾರ ಹಿಂಬಾಲಕರು ಜೀಪ್ ತಳ್ಳಿದ್ದಾರೆ.
"ಚುನಾವಣೆಯ ಸಂದರ್ಭದಲ್ಲಿ ಭರವಸೆ ಕೊಟ್ಟ ಎಸ್. ಅಂಗಾರ ಈಗ ತಮ್ಮ ಊರಿನಲ್ಲಿ ಬಂದು ರಸ್ತೆಯಲ್ಲಿ ಹೋಗಲಾರದೇ ಚಡಪಡಿಸಿದ್ದನ್ನು ಕಂಡು ಗ್ರಾಮಸ್ಥರು, ನಮ್ಮ ಸಮಸ್ಯೆಯ ಬಗ್ಗೆ ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಸ್ವತಃ ಸಚಿವರೇ ಸಮಸ್ಯೆಯ ಗಂಭೀರತೆಯನ್ನು ಅನುಭವಿಸಿದ್ದಾರೆ. ಇನ್ನಾದರೂ ರಸ್ತೆ ಆಗುತ್ತಾ ಎಂಬುವುದನ್ನು ನೋಡಬೇಕು,'' ಎಂದು ಗ್ರಾಮಸ್ಥರು ಹೇಳಿದ್ದಾರೆ.
Recommended Video
ಸಮಸ್ಯೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು
ಎಸ್. ಅಂಗಾರರ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೂಲಭೂತ ಸಮಸ್ಯೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಗುತ್ತಿಗಾರು ಸಮೀಪದ ಮೊಗ್ರ ಎಂಬಲ್ಲಿ ಶಾಲೆಯನ್ನು ಸಂಪರ್ಕಿಸುವ ಮಧ್ಯ ಹರಿಯುವ ಹೊಳೆಗೆ ಸೇತುವೆ ಕಟ್ಟಬೇಕೆಂದು ಅಂಗಾರರ ಬಳಿ ಹಲವು ವರ್ಷಗಳಿಂದ ಜನರು ಮನವಿ ಮಾಡಿದ್ದರು. ಕೊನೆಗೆ ಊರಿನವರೇ ಕೈಯಿಂದ ಹಣ ಹಾಕಿ ಸೇತುವೆ ನಿರ್ಮಾಣ ಮಾಡಿದ್ದರು. ಇನ್ನೊಂದೆಡೆ ಜಾಲ್ಸೂರು ಸಮೀಪದ ಹೊಳೆಯನ್ನು ದಾಟಲಾಗದೇ ವೃದ್ಧ ಮಹಿಳೆಯನ್ನು ಎತ್ತಿಕೊಂಡು ಹೋಗಿ ಜನರು ಹೊಳೆ ದಾಟಿದ ವಿಡಿಯೋ ವೈರಲ್ ಆಗಿತ್ತು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಅಂಗಾರರಿಗೆ ಕುಖ್ಯಾತಿ ತಂದುಕೊಟ್ಟಿತ್ತು.
ಇನ್ನಾದರೂ ಎರಡನೇ ಬಾರಿಗೆ ಸಚಿವರಾಗಿರುವ ಎಸ್. ಅಂಗಾರ ಸುಳ್ಯ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಸತತ 30 ವರ್ಷಗಳಿಂದ ಸುಳ್ಯ ಕ್ಷೇತ್ರದ ಶಾಸಕರನ್ನಾಗಿ ಮಾಡಿರುವ ಸುಳ್ಯ ಕ್ಷೇತ್ರದ ಜನರ ಋಣ ತೀರಿಸಬೇಕು ಎಂಬುದು ಜನರ ಕೋರಿಕೆಯಾಗಿದೆ.