ಮತ್ಸ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಕೋಟ ಶ್ರೀನಿವಾಸ್
ಮಂಗಳೂರು, ಸೆಪ್ಟೆಂಬರ್ 6: "'ಮತ್ಸ್ಯ ದರ್ಶಿನಿ' ಉಪಾಹಾರ ಮಂದಿರಗಳನ್ನು ರಾಜ್ಯದೆಲ್ಲೆಡೆ ವಿಸ್ತರಿಸಲಾಗುವುದು. ಈ ಮೂಲಕ ಮತ್ಸ್ಯ ಪ್ರಿಯರಿಗೆ ಕರಾವಳಿ ಮೀನಿನ ಖಾದ್ಯಗಳ ರುಚಿ ನೀಡುವುದರೊಂದಿಗೆ ಮೀನುಗಾರಿಕೆಯನ್ನೂ ಬೆಂಬಲಿಸಲಾಗುವುದು" ಎಂದಿದ್ದಾರೆ ಮುಜರಾಯಿ, ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ.
ಗುರುವಾರ ಮಂಗಳೂರಿನಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು, "ಪ್ರಸ್ತುತ ಮೀನುಗಾರಿಕಾ ಇಲಾಖೆಯ ಮತ್ಸ್ಯ ದರ್ಶಿನಿ ಉಪಾಹಾರ ಮಂದಿರಗಳು ಆಯ್ದ ಕೆಲವು ನಗರಗಳಲ್ಲಿ ಮಾತ್ರ ಇವೆ. ಹೀಗಾಗಿ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಅತ್ಯಂತ ಸ್ವಾದದ ಸಮುದ್ರಾಹಾರಗಳು ದೊರೆಯುವಂತೆ ಮತ್ಸ್ಯ ದರ್ಶಿನಿ ಆರಂಭಿಸಲಾಗುವುದು, ಈ ಮೂಲಕ ಮೀನುಗಾರಿಕೆಯನ್ನು ಬೆಂಬಲಿಸಲಾಗುವುದು" ಎಂದು ತಿಳಿಸಿದರು.
ಮೀನುಗಾರಿಕೆಗೆ ತಟ್ಟಿದ ಫಿಶ್ಮೀಲ್ ಉದ್ದಿಮೆಗಳ ಮುಷ್ಕರದ ಬಿಸಿ
ಇದೇ ಸಂದರ್ಭದಲ್ಲಿ, "ಮೀನುಗಾರ ಮಹಿಳೆಯರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಹೊಂದಿರುವ ಐವತ್ತು ಸಾವಿರ ರೂಪಾಯಿ ಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಸಾಲ ಮರುಪಾವತಿಸಲು ಒತ್ತಡ ಹೇರಬಾರದೆಂದು ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ನಿರ್ದೇಶಿಸಲಾಗಿದೆ" ಎಂದು ತಿಳಿಸಿದರು.
ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾ ಮಂಡಳಿಯ ಅಧ್ಯಕ್ಷ ಯಶಪಾಲ ಸುವರ್ಣ, ಉಪಾಧ್ಯಕ್ಷ ಪುರುಷೋತ್ತಮ ಅಮೀನ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಸುಶ್ಮಿತಾ ರಾವ್, ಗಣೇಶ್ ಕೆ, ಸಹಕಾರ ಇಲಾಖೆಯ ಉಪ ನಿಬಂಧಕರಾದ ಬಿ.ಕೆ.ಸಲೀಂ, ಪ್ರವೀಣ್ ನಾಯಕ್ ಇದ್ದರು.