ಕೋವಿಡ್ ನಿಯಮ ಉಲ್ಲಂಘಿಸಿ ಧರ್ಮಸ್ಥಳ ದೇವಸ್ಥಾನ ಪ್ರವೇಶಿಸಿದ ಸಚಿವ ಲಿಂಬಾವಳಿ
ಮಂಗಳೂರು, ಜೂನ್ 5: ಅರಣ್ಯ ಸಚಿವ ಅರವಿಂದ್ ಲಿಂಬಾವಳಿ ಸರ್ಕಾರದ ಲಾಕ್ಡೌನ್ ನಿಯಮ ಮೀರಿ ಧರ್ಮಸ್ಥಳ ದೇವಸ್ಥಾನ ಒಳಗೆ ಪ್ರವೇಶಿಸಿ ದೇವರ ದರ್ಶನ ಪಡೆದಿರುವ ಆರೋಪ ವ್ಯಕ್ತವಾಗಿದೆ.
ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ವತಿಯಿಂದ 200ಕ್ಕೂ ಹೆಚ್ಚು ಹಣ್ಣು-ಹಂಪಲುಗಳ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಸಚಿವ ಅರವಿಂದ್ ಲಿಂಬಾವಳಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಅರವಿಂದ್ ಲಿಂಬಾವಳಿ ದೇವಸ್ಥಾನ ಭೇಟಿಯ ಕುರಿತು ಫೇಸ್ಬುಕ್ನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಫೋಟೋ ಪೋಸ್ಟ್ ಮಾಡಿದ್ದು, "ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು' ಎಂದು ಬರೆದುಕೊಂಡಿದ್ದಾರೆ. ಸಚಿವ ಅರವಿಂದ್ ಲಿಂಬಾವಳಿ ಅವರಿಂದ ಮಂಜುನಾಥ ದೇವರ ದರ್ಶನ ಅಂತಾ ದೇವಸ್ಥಾನ ಮೆಟ್ಟಿಲಿನ ಬಳಿಯ ಫೋಟೋವನ್ನು ಶಾಸಕ ಹರೀಶ್ ಪೂಂಜಾ ಪೋಸ್ಟ್ ಮಾಡಿದ್ದಾರೆ.
ಹರೀಶ್ ಪೂಂಜಾ ಪೋಸ್ಟ್ಗೆ ಕೆಲವರು ಅಸಮಾಧಾನ ಹೊರಹಾಕಿದ್ದು, ಲಾಕ್ಡೌನ್ ನಿಯಮ ಉಲ್ಲಂಘಿಸಿ ದೇವರ ದರ್ಶನ ಪಡೆದ ಬಗ್ಗೆ ವಿರೋಧಿಸಿದ್ದಾರೆ. ಮಂದಿರ-ಮಠ ಪ್ರವೇಶ ನಿಷೇಧವಿದ್ದರೂ, ದೇವರ ದರ್ಶನ ಪಡೆದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಜನಸಾಮಾನ್ಯರು ಏನು ಅನ್ಯಾಯ ಮಾಡಿದ್ದಾರೆ. ಜನಸಾಮಾನ್ಯರಿಗೊಂದು ಕಾನೂನು, ಜನಪ್ರತಿನಿಧಿಗಳಿಗೊಂದು ಕಾನೂನು ಯಾಕೆ ಅಂತಾ ಪ್ರಶ್ನಿಸಿದ್ದಾರೆ.