ಕರಾವಳಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಉಗ್ರರ ಸಿದ್ಧತೆ: ಆತಂಕಕಾರಿ ಮಾಹಿತಿ ಹೊರಹಾಕಿದ ಕೇಂದ್ರ ಗುಪ್ತಚರ ಇಲಾಖೆ!
ಮಂಗಳೂರು, ಸೆಪ್ಟೆಂಬರ್ 18: ರಾಜ್ಯದ ಕರಾವಳಿ ಭಾಗದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆಗಳ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಭಯಾನಕ ಮಾಹಿತಿಯನ್ನು ಹೊರಹಾಕಿದೆ.
ಹಬ್ಬದ ಸಂದರ್ಭದಲ್ಲಿ ಕರಾವಳಿಯಲ್ಲಿ ಜಾಸ್ತಿ ಜನಸಂದಣಿ ಸೇರುವ ಜಾಗದಲ್ಲಿ ಉಗ್ರರು ವಿಧ್ವಂಸಕ ಕೃತ್ಯಗಳನ್ನು ಎಸಗುವ ಬಗ್ಗೆ ಯೋಜನೆ ಹಾಕಿರುವ ಮಾಹಿತಿ ಕೇಂದ್ರ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಹೈಅಲರ್ಟ್ ಆಗಿ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ತುರಾಯ ಸ್ಯಾಟಲೈಟ್ ಫೋನ್ ಸಂಪರ್ಕ ಸಾಧಿಸುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ಸಂಶಯಾಸ್ಪದ ಪ್ರದೇಶಗಳಿಗೆ ಅಧಿಕಾರಿಗಳು ತೆರಳಿ ಪರಿಶೀಲನೆ ಕೂಡ ಮಾಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲ ಅರಣ್ಯ ಭಾಗ, ಉತ್ತರ ಕನ್ನಡದ ಕೆಲ ಭಾಗ ಮತ್ತು ಉಡುಪಿಯಲ್ಲಿ ಈ ಸ್ಯಾಟಲೈಟ್ ಫೋನ್ಗಳು ನಿಗೂಢ ವ್ಯಕ್ತಿ ಜೊತೆ ಸಂಪರ್ಕ ಸಾಧ್ಯ ಮಾಡಿತ್ತು.
ಬಳಿಕ ಅಧಿಕಾರಿಗಳು ನೆಟ್ವರ್ಕ್ ಟ್ರೇಸಿಂಗ್ ಆಧರಿಸಿ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಫೋನ್ಗಳು ಅರಣ್ಯ ಅಂಚಿನ ರಸ್ತೆಯಲ್ಲಿ ಸಂಪರ್ಕ ಸಾಧಿಸಿರುವ ಬಗ್ಗೆ ತಿಳಿದು ಬಂದಿದೆ. ಇದರ ಬೆನ್ನಲ್ಲೇ ಕರಾವಳಿಯಲ್ಲಿ ಉಗ್ರ ಸಂಪರ್ಕ ಇರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಕರಾವಳಿಯ ಕೆಲ ಭಾಗಗಳಲ್ಲಿ ಅನುಮಾನಸ್ಪದ ಚಟುವಟಿಕೆ ನಡೆದಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ.
ಈ ಹಿನ್ನಲೆಯಲ್ಲಿ ರಾಜ್ಯ ಕರಾವಳಿಯ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಕರಾವಳಿಯ ಜಾಸ್ತಿ ಜನಸಂದಣಿ ಸೇರುವ ಪ್ರದೇಶ ಮತ್ತು ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ ನೀಡವಂತೆ ಗುಪ್ತಚರ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮುಂಬರುವ ನವರಾತ್ರಿ, ದೀಪಾವಳಿ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ಎಸಗುವ ಎಚ್ಚರಿಕೆಯನ್ನು ಕೇಂದ್ರ ಗುಪ್ತಚರ ಇಲಾಖಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕರಾವಳಿಯ ಕಡಲತಡಿ, ದಟ್ಟ ಅರಣ್ಯ ಪ್ರದೇಶ ಮತ್ತು ಪರ್ವತ ಶ್ರೇಣಿಗಳಲ್ಲಿ ಹದ್ದಿನ ಕಣ್ಣಿಡಲು ಸೂಚನೆ ನೀಡಲಾಗಿದೆ.
ಕರಾವಳಿಯಲ್ಲಿ ಉಗ್ರರು ಲಂಚ್ ಬಾಕ್ಸ್ನಲ್ಲಿ ಸ್ಫೋಟವನ್ನಿರಿಸಿ ಬಾಂಬ್ ದಾಳಿ ಮಾಡುವ ಸಾಧ್ಯತೆಗಳಿವೆ. ಪಾಕಿಸ್ತಾನದ ಐಎಸ್ಐ ಕುಮ್ಮಕ್ಕಿನಲ್ಲಿ ಈ ಬಾರಿ ರಾಜ್ಯದ ಕರಾವಳಿಯಲ್ಲೇ ಬಾಂಬ್ ಸ್ಫೋಟ ನಡೆಸಲು ಉಗ್ರ ಸಂಘಟನೆಗಳು ಸಂಚು ಹೂಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗಳು ಎಚ್ಚರಿಸಿದೆ.
ಹಬ್ಬದ ಸಂದರ್ಭದಲ್ಲಿ ಜಾಸ್ತಿ ಜನಸಂದಣಿ ಸೇರುವ ಪ್ರದೇಶದಲ್ಲಿ ಪ್ಲಾಸ್ಟಿಕ್ ಲಂಚ್ ಬಾಕ್ಸ್ನಲ್ಲಿ ಸ್ಪೋಟಕವನ್ನಿರಿಸಿ ಹೆಚ್ಚು ಜನರ ಸಾವು- ನೋವುಗಳನ್ನು ಮಾಡುವುದು ಉಗ್ರರ ಯೋಜನೆಯಾಗಿದೆ. ಉಗ್ರರು ದಾಳಿ ಮಾಡುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮೀನುಗಾರಿಕಾ ಬಂದರು, ಜೆಟ್ಟಿಗಳು, ಮಾರುಕಟ್ಟೆ ಸೇರಿದಂತೆ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ಏರಿಸಲು ಗುಪ್ತಚರ ಇಲಾಖೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.