ದ.ಕ, ಕೊಡಗು ಗಡಿಭಾಗದಲ್ಲೂ ಭೂಕಂಪನ: ಮನೆಗಳಿಗೆ ಹಾನಿ
ಮಂಗಳೂರು, ಜೂ.25: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂದು ಭೂಕಂಪದ ಅನುಭವ ಆಗಿದೆ. ಸುಳ್ಯದ ಗ್ರಾಮಾಂತರ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ರಿಕ್ಟರ್ ಮಾಪಕದಲ್ಲಿ 2.7 ಭೂಕಂಪನದ ತೀವ್ರತೆ ದಾಖಲು ಆಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೋಶ ದೃಢಪಡಿಸಿದೆ.
ಗುರುವಾರ ಹಾಸನದ ಹೊಳೆ ನರಸೀಪುರ, ಅರಕಲಗೂಡು ಹಾಗೂ ಕೊಡಗಿನ ಸೋಮವಾರಪೇಟೆ, ಮಡಿಕೇರಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕೂಡ ಭೂಮಿ ಕಂಪಿಸಿತ್ತು. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಈಗಾಗಲೆ ಭೂಕಂಪ ಸಂಭವಿಸಿ ಸಾವಿರಕ್ಕೂ ಹೆಚ್ಚು ಜನರ ಸಾವಾಗಿದೆ. ಈ ಕಾರಣದಿಂದ ಕಳೆದ ಎರಡು ದಿನಗಳ ಈ ಭೂಕಂಪ ಕರುನಾಡಿನ ಕೆಲವು ಭಾಗದಲ್ಲಿನ ಜನತೆಯಲ್ಲಿ ಆತಂಕವನ್ನು ಉಂಟುಮಾಡಿತ್ತು.
ಭೂಕಂಪನ ಮಹಾಮಳೆಯ ಮುನ್ಸೂಚನೆಯಾ?... ಅವತ್ತು ಹಾಗೆಯೇ ಆಗಿತ್ತು!
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶದ ಹಲವೆಡೆ ಇಂದು ಭೂಮಿ ಕಂಪಿಸಿದ ಅನುಭವ ಆಗಿದೆ. ಇಂದು ಬೆಳಗ್ಗೆ 9.10 ರ ಸುಮಾರಿಗೆ ಸುಳ್ಯ ತಾಲೂಕಿನ ಹಲವೆಡೆ ಜನರಿಗೆ ಕಂಪನದ ಅನುಭವ ಆಗಿದ್ದು ಜನರು ಭೀತಿಯಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಸುಳ್ಯ ತಾಲೂಕಿನ ಮರ್ಕಂಜ, ಗೂನಡ್ಕ, ಸಂಪಾಜೆ, ಆಲೆಟ್ಟಿ, ತೊಡಿಕಾನ, ಪೆರಾಜೆ, ಅರಂತೋಡು ಮೊದಲಾದೆಡೆ ಭೂಮಿ ಕಂಪಿಸಿದ ಅನುಭವಾಗಿದ್ದು, ಒಂದು ಕ್ಷಣ ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ.
ಈ ಹಿಂದೆ ಒಂದು ಬಾರೀ ಇದೇ ರೀತಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಗ್ರಾಮಸ್ಥರು ನೆನಪಿಸಿಕೊಂಡಿದ್ದಾರೆ. ಈ ಕಂಪನದಿಂದ ಗೂನಡ್ಕದಲ್ಲಿರುವ ಸಂಪಾಜೆ ಗ್ರಾಮಪಂಚಾಯತ್ ಸದಸ್ಯ ಅಬೂಸಾಲಿ ಅವರ ಮನೆಯ ಗೋಡೆಗಳು ಬಿರುಕು ಬಿಟ್ಟಿದೆ.
Breaking; ಹಾಸನ ಮಾತ್ರವಲ್ಲ ಕೊಡಗಿನಲ್ಲೂ ಕಂಪಿಸಿದ ಭೂಮಿ
ಸ್ಥಳದಲ್ಲಿ ಮೊಕ್ಕಾಂ ಹೂಡಿದ ಜಿಲ್ಲಾಡಳಿತ
ಲಘು ಭೂಕಂಪನ ಆಗಿರುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು,ರಿಕ್ಟರ್ ಮಾಪಕದಲ್ಲಿ 2.7 ಭೂಕಂಪನದ ತೀವ್ರತೆ ದಾಖಲು ಆಗಿರುವ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶ ದೃಢೀಕರಿಸಿದೆ. ಬೆಳಗ್ಗೆ 09 ಗಂಟೆ 09 ನಿಮಿಷ 48 ಸೆಕೆಂಡ್ ಗೆ ಕಂಪನ ಆಗಿದೆ. ಜಿಲ್ಲಾಧಿಕಾರಿ ತಕ್ಷಣ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಧೈರ್ಯ ತುಂಬಿದ್ದು, ಅಧಿಕಾರಿಗಳ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಕೋಶದಿಂದ ಭೂಕಂಪನ ದೃಢ
ಘಟನೆ ಕುರಿತು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ದಕ್ಷಿಣ ಕನ್ನಡ ಮತ್ತು ಕೊಡಗು ಭಾಗದ ಗಡಿ ಭಾಗದ ಜನರಿಗೆ ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಭೂಕಂಪನ ಆಗಿರುವ ಅನುಭವ ಆಗಿದೆ. ಈ ಬಗ್ಗೆ ಹಲವು ಕರೆಗಳು ನನಗೆ ಬಂದಿದೆ. ರಾಜ್ಯ ವಿಪತ್ತು ನಿರ್ವಹಣಾ ಕೋಶವು ಕೂಡ ಇದನ್ನ ದೃಢಪಡಿಸಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಗ್ರಾಮಗಳಲ್ಲಿ ರಿಕ್ಟರ್ ಮಾಪಕ 2.7 ಭೂಕಂಪನ ಆಗಿರೋದು ತಿಳಿದುಬಂದಿದೆ.
ಹಾನಿಯ ಬಗ್ಗೆ ವರದಿಗೆ ಸೂಚನೆ
ಗಡಿಭಾಗದ ಸುಮಾರು ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಕಂಪನ ಆಗಿದೆ. ಇದರಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ. ಜನ ಭಯಪಡುವ ಅವಶ್ಯಕತೆ ಇಲ್ಲ. ರಾಜ್ಯ ವಿಪತ್ತು ನಿರ್ವಹಣಾ ಕೋಶ ಹೇಳುವ ಪ್ರಕಾರ ಇದರಲ್ಲಿ ಯಾವುದೇ ತೊಂದರೆಗಳಿಲ್ಲ ಅಂತ ಹೇಳಿದೆ. ಆದರೂ ಜಿಲ್ಲಾ ವಿಪತ್ತು ನಿರ್ವಹಣಾ ತಂಡಕ್ಕೆ ಸನ್ನದ್ಧರಾಗಿರುವ ಸೂಚನೆ ನೀಡಿದ್ದೇನೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಈ ಭೂಕಂಪನದಿಂದ ಹಾನಿಗೊಳಗಾದ ಮನೆಗಳ ವರದಿಯನ್ನು ನೀಡೋಕೆ ಸೂಚನೆ ನೀಡಿದ್ದೇನೆ ಎಂದರು.
ಮುಂಜಾಗೃತಾ ಕ್ರಮಕ್ಕೆ ಸೂಚನೆ
ಜನರಿಗೆ ಮನವಿ ಮಾಡುವುದಿಷ್ಟೇ, ಮತ್ತೆ ಆ ರೀತಿಯ ಕಂಪನಗಳು ಆದಾಗ ಯಾರು ಮನೆಯ ಒಳಗೆ ಇರಬೇಡಿ. ಹೊರಗೆ ಬಂದು ಸುರಕ್ಷಿತ ಸ್ಥಳದಲ್ಲಿ ಇರಬೇಕಾಗಿ ವಿನಂತಿಸುತ್ತೇನೆ. ಈ ಸಂದರ್ಭದಲ್ಲಿ ಭೂಕುಸಿತ ಆಗುವ ಸಾಧ್ಯತೆಗಳು ಕೂಡಾ ಇರುವುದರಿಂದ, ಈಗಾಗಲೇ ಹಾಟ್ ಸ್ಪಾಟ್ ಅಂತ ಗುರುತಿಸಿರುವ ಸ್ಥಳದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ. ಭೂಕಂಪನ ಆಗೋಕೆ ಯಾವ ಕಾರಣ ಎಂಬುದನ್ನು ತನಿಖೆ ಮಾಡಲು ಆದೇಶ ಮಾಡಿದ್ದೇನೆ ಅಂತಾ ಹೇಳಿದ್ದಾರೆ.
ಕರಾವಳಿಯಲ್ಲಿ ಈ ರೀತಿ ಭೂಕಂಪದ ಅನುಭವಗಳು ಹೆಚ್ಚೇನು ಆಗಿಲ್ಲ. ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಗಾಲದಲ್ಲಿ ಗುಡ್ಡಕುಸಿತ ಪ್ರಕರಣಗಳು ಆಗಿದ್ದು ಬಿಟ್ಟರೆ, ಈ ರೀತಿ ಭೂಮಿ ಕಂಪಿಸಿದ ಘಟನೆಗಳು ಹೆಚ್ಚೇನು ಆಗಿರಲಿಲ್ಲ. ಒಟ್ಟಿನಲ್ಲಿ ಮುಂದೊಂದು ದಿನ ಭೂಕಂಪದ ಸುದ್ದಿಗಳು ಬರುತ್ತಿದ್ದಂತೆ ಜನರಲ್ಲಿ ಆತಂಕ ಮನೆ ಮಾಡುತ್ತಿದೆ. ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಇಂತಹದೇ ಕಂಪನವಾದ ಬೆನ್ನಲ್ಲೇ ಜಯಪ್ರಳಯವಾಗಿ ನೂರಾರು ಮನೆಗಳು, ಸಾವುಗಳಿಗೆ ಕಾರಣವಾಗಿತ್ತು.