ಕಾಂಗ್ರೆಸ್ಗೆ ಬರುವವರು ಅರ್ಜಿ ಹಾಕಲಿ, ಪರಿಶೀಲನೆ ಮಾಡ್ತೇನೆ; ಆಫರ್ ಕೊಟ್ಟ ಡಿಕೆಶಿ
ಮಂಗಳೂರು, ಜುಲೈ 23: "ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಹೋದವರು ಮತ್ತೆ ಕಾಂಗ್ರೆಸ್ಗೆ ಬರುವುದಾದರೆ ಅರ್ಜಿ ಹಾಕಲಿ ಪರಿಶೀಲನೆ ನಡೆಸುತ್ತೇವೆ," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, "ಕಾಂಗ್ರೆಸ್ಗೆ ಯಾರಾದರೂ ಬರುವವರಿದ್ದರೆ ಅರ್ಜಿ ಹಾಕಲಿ, ಆ ಮೇಲೆ ಕೂತು ಮಾತನಾಡೋಣ. ಈಗ ಇದರ ಬಗ್ಗೆ ಸುಮ್ಮನೆ ಮಾತನಾಡಲ್ಲ. ಹೋದವರು ಬರುತ್ತಾರೆ ಅನ್ನೋದಲ್ಲ. ಯಾವುದೇ ಇದ್ದರೂ ಪಕ್ಷದ ಕಾನೂನಿನಡಿ ನಿರ್ಧಾರ ತೆಗೆದುಕೊಳ್ತೇವೆ. ಕಾಂಗ್ರೆಸ್ಗೆ ಬರಬೇಕು ಅಂತಾ ಇರುವವರು ತುಂಬಾ ಮಂದಿ ಇದ್ದಾರೆ. ಅವರ ಹೆಸರು ಈಗ ಹೇಳುವುದಿಲ್ಲ,'' ಎಂದು ತಿಳಿಸಿದರು.
ಇನ್ನು ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿ.ಕೆ. ಶಿವಕುಮಾರ್, "ಒಳ್ಳೆಯ ಸರ್ಕಾರ ಕೊಡಲು ಆಗದ ಕಾರಣ ಮುಖ್ಯಮಂತ್ರಿ ಬದಲಾವಣೆ ಆಗ್ತಿದೆ. ಎರಡು ವರ್ಷದಲ್ಲಿ ಡಬಲ್ ಇಂಜಿನ್ ಸರ್ಕಾರ ಇಟ್ಟುಕೊಂಡು ಒಳ್ಳೆಯ ಆಡಳಿತ ಕೊಡಲು ಆಗಿಲ್ಲ. ಆಡಳಿತ ಸರಿ ಇಲ್ಲ, ಅಧಿಕಾರಿಗಳಿಂದ ಹಿಡಿದು ಗ್ರಾ.ಪಂ, ವಿಧಾನಸೌಧದವರೆಗೆ ಯಾರೂ ಮಾತು ಕೇಳುತ್ತಿಲ್ಲ.''
"ಈಗ ತರಾತುರಿಯಲ್ಲಿ ಅನುದಾನ ಬಿಡುಗಡೆಯಾಗುತ್ತಿದೆ, ಫೈಲ್ಗಳಿಗೆ ಸಹಿ ಆಗುತ್ತಿದೆ. ನೀರಾವರಿ ಇಲಾಖೆ ಸೇರಿ ಬೇರೆ ಬೇರೆ ಇಲಾಖೆಯ ಫೈಲ್ಗಳು ಕ್ಲಿಯರ್ ಆಗ್ತಿದೆ. ಬಜೆಟ್ನಲ್ಲಿ ಎಷ್ಟು ದುಡ್ಡು ಇಟ್ಟಿದ್ದೀರಿ? ಈಗ ಎಷ್ಟು ಕ್ಲಿಯರ್ ಆಗುತ್ತಿದೆ? ಎರಡು ವರ್ಷದಿಂದ ಎಷ್ಟಾಗಿದೆ? ಈ ಬಗ್ಗೆ ಅಸೆಂಬ್ಲಿಯಲ್ಲಿ ದಾಖಲೆ ಸಮೇತ ನಾನು ಮಾತನಾಡುತ್ತೇನೆ,'' ಎಂದು ಡಿ.ಕೆ. ಶಿವಕುಮಾರ್ ಹರಿಹಾಯ್ದರು.
ಸರ್ಕಾರದ ವಿರುದ್ಧ ಮತ್ತೆ ಭ್ರಷ್ಟಾಚಾರದ ಆರೋಪ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಹಣಕಾಸು ಇಲಾಖೆಯಲ್ಲಿ ದುಡ್ಡಿಲ್ಲ ಅಂತ ಸರ್ಕಾರದ ಪ್ರಾಜೆಕ್ಟ್ ಕ್ಲಿಯರ್ ಆಗ್ತಿರಲಿಲ್ಲ, ಈಗ ದುಡ್ಡು ಎಲ್ಲಿಂದ ಬಂತು? ಇವೆಲ್ಲಾ ಕೂಡ ದೊಡ್ಡ ಚರ್ಚೆಯಾಗಬೇಕು, ಇದನ್ನು ನಾನು ಚರ್ಚೆ ಮಾಡುತ್ತೇನೆ,'' ಎಂದು ಹೇಳಿದರು.