ವಿದ್ಯುತ್ ಅಘಾತದಿಂದ ಮೆಸ್ಕಾಂ ಉದ್ಯೋಗಿ ಸಾವು
ಮಂಗಳೂರು, ಜೂನ್ 13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಆಘಾತದಿಂದ ಲೈನ್ ಮ್ಯಾನ್ ಒಬ್ಬರು ಸಾವನ್ನಪ್ಪಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಆಘಾತಕ್ಕೆ ನಿನ್ನೆಯಿಂದ ಈ ವರೆಗೆ ಒಟ್ಟು ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಮೆಸ್ಕಾಂ ನಿರ್ಲಕ್ಷ್ಯತನಕ್ಕೆ ಇಂದು ಲೈನ್ ಮ್ಯಾನ್ ಒಬ್ಬರು ಮೃತಪಟ್ಟಿದ್ದು, ಪುತ್ತೂರು ಸಮೀಪದ ಉಪ್ಪಿನಂಗಡಿಯ ಬೇರಿಕೆ ಎಂಬಲ್ಲಿ ಈ ಘಟನೆ ನಡೆದಿದೆ. ಮೃತ ಲೈನ್ ಮ್ಯಾನ್ ನನ್ನು ಮೀಟ್ಯಾ ನಾಯಕ್ (32) ಎಂದು ಗುರುತಿಸಲಾಗಿದೆ.
ಬಂಟ್ವಾಳದಲ್ಲಿ ವಿದ್ಯುತ್ ತಂತಿ ತುಳಿದು ತಂದೆ, ಮಗಳ ಸಾವು
ಮೀಟ್ಯಾ ನಾಯಕ್ ಮೂಲತಃ ದಾವಣಗೆರೆಯ ಹರಿಹರ ಮೂಲದವರು. ಕಳೆದ 5 ವರ್ಷಗಳಿಂದ ಸವಣೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ವಿದ್ಯುತ್ ಸ್ಪಾರ್ಕ್ ಬಂದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಕರ್ತವ್ಯದಲ್ಲಿದ್ದ ಸಂದರ್ಭ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿದ್ದಾರೆ.
ನಿನ್ನೆಯಷ್ಟೇ ತೋಟದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮಗಳು ಸಾವನ್ನಪ್ಪಿದ ಘಟನೆ ಬಂಟ್ವಾಳದಲ್ಲಿ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಸಾವು ಸಂಭವಿಸಿದೆ.