ಮಂಗಳೂರಿನ ಡಿ.ಸಿ ಕಛೇರಿಯಲ್ಲೊಬ್ಬ ಕಣ್ಣು ಕಾಣದ ಅಸಾಮಾನ್ಯ ವ್ಯಕ್ತಿ
ಮಂಗಳೂರು, ಸೆಪ್ಟೆಂಬರ್ 4: ಸಾಮಾನ್ಯವಾಗಿ ಪಂಚೇಂದ್ರಿಯಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೂ ನಾವೆಲ್ಲಾ ಎಷ್ಟೋ ಬಾರಿ ಎಡವುತ್ತೇವೆ. ಆದರೆ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲೊಬ್ಬರಿದ್ದಾರೆ. ಇವರಿಗೆ ಕಣ್ಣು ಕಾಣಿಸುವುದೇ ಇಲ್ಲ. ಹೀಗಿದ್ದೂ ಇವರು ಜಿಲ್ಲಾಧಿಕಾರಿ ಕಛೇರಿಯ ಎಲ್ಲಾ ಕೆಲಸಗಳನ್ನು ಕಣ್ಣು ಸರಿ ಇದ್ದವರನ್ನೂ ನಾಚಿಸುವಂತೆ ಕೆಲಸ ಮಾಡುತ್ತಾರೆ.
5ನೇ ವರ್ಷದಲ್ಲಿ ಕಣ್ಣು ಕಳೆದುಕೊಂಡರು
ಇವರ ಹೆಸರು ಪ್ರಮೋದ್ ನಾಯಕ್. ಮೂಲತಃ ಕುಂದಾಪುರದವರಾದ ಇವರು ನಗರದ ಉರ್ವಾದಲ್ಲಿ ವಾಸಿಸುತ್ತಿದ್ದಾರೆ. ಪ್ರಮೋದ್ ರಿಗೆ 5ನೇ ವಯಸ್ಸಿನಲ್ಲಿರುವಾಗ ಜ್ವರ ಬಂದಿತ್ತು. ಈ ಸಂದರ್ಭ ದಿನ ಕಳೆದಂತೆ ಇವರ ಎರಡೂ ಕಣ್ಣಿನ ದೃಷ್ಟಿ ಮಂಜಾಗುತ್ತಾ ಬಂದು, ಕೊನೆಗೊಂದು ದಿನ ಪೂರ್ತಿ ದೃಷ್ಟಿಯೇ ಹೊರಟು ಹೋಯ್ತು.
27 ವರ್ಷಗಳ ಶ್ರಮದಿಂದ ಕೆರೆ ನಿರ್ಮಿಸಿ ಹಳ್ಳಿಯ ಬರ ನೀಗಿಸಿದ ಸಾಧಕ
ದೃಷ್ಟಿ ಕಳೆದುಕೊಂಡರೇನಂತೆ, ಪ್ರಮೋದ್ ಉತ್ಸಾಹಕ್ಕೇನೂ ಇದು ಅಡ್ಡಿಯಾಗಲಿಲ್ಲ. ಬೆಂಗಳೂರಿನಲ್ಲಿರುವ ಅಂಧ ಮಕ್ಕಳ ತರಬೇತಿ ಶಾಲೆಯಲ್ಲಿ ಶಿಕ್ಷಣ ಪಡೆದು ಸರ್ಕಾರಿ ಕೋಟಾದಡಿ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕೆಲಸಕ್ಕೆ ಸೇರಿದರು. ಎದೆಗುಂದದ ಪ್ರಮೋದ್ 1997ರಲ್ಲಿ ತನ್ನ ಎಸ್.ಎಸ್.ಎಲ್.ಸಿ ಶಿಕ್ಷಣವನ್ನು ದ್ವಿತೀಯ ದರ್ಜೆಯ ಪಾಸು ಮಾಡಿದದರು. ಅಂದಿನಿಂದ ಸತತ 22 ವರ್ಷ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗ್ರೂಪ್ ಡಿ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಡಿ.ಸಿ ಕಛೇರಿಯ ಮೂಲೆ ಮೂಲೆಯೂ ಪರಿಚಯ
ಸದ್ಯ ಅಪರ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿರುವ ಇವರು ಅಲ್ಲಿನ 30ರಿಂದ 35 ವಿಭಾಗಗಳಿಗೆ ಯಾರ ಸಹಾಯವಿಲ್ಲದೇ ಹೋಗಿ ಬರುತ್ತಾರೆ. ಜತೆಗೆ ಯಾವ ವಿಭಾಗದಲ್ಲಿ ಪ್ರತಿದಿನ ಯಾವ ಅಧಿಕಾರಿ ಇದ್ದಾರೆ, ಯಾವ ಅಧಿಕಾರಿ ಗೈರಾಗಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ.
ಕಛೇರಿಗೆ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಾರೆ. ಹಾಗೂ ಯಾವ ಅಧಿಕಾರಿ ಕರೆ ಮಾಡಿದ್ದಾರೆ ಎಂಬುದನ್ನು ಅವರ ಧ್ವನಿಯ ಮೂಲಕ ತಿಳಿದುಕೊಳ್ಳುತ್ತಾರೆ. ಇನ್ನು ಕಛೇರಿಯಿಂದ ಬೇರೆ ವಿಭಾಗಗಳಿಗೆ ಸ್ವತಃ ತಾವೇ ಕರೆ ಮಾಡುತ್ತಾರೆ. ಇಂಥಹ ಅಸಮಾನ್ಯ ಇಂದ್ರಿಯ ಶಕ್ತಿ ಅವರಲ್ಲಿದೆ.
ನಾವೆಲ್ಲಾ ಕಣ್ಣಿದ್ದೂ ಕುರುಡರಂತಾಗಿದ್ದೇವೆ
ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳು ವರ್ಗಾವಣೆಯಾಗಿ ಹೊಸ ಜಿಲ್ಲಾಧಿಕಾರಿಯ ಬಂದಾಗ ಅವರ ಹೆಸರು ತಿಳಿದುಕೊಳ್ಳುತ್ತಾರೆ. ನಂತರ ಅವರ ಧ್ವನಿಯನ್ನು ಗುರುತು ಹಿಡಿದು ಕೆಲಸ ನಿರ್ವಹಿಸಲು ಆರಂಭಿಸುತ್ತಾರೆ.
"ಪ್ರಮೋದ್ ಅವರಿಗೆ ಕಣ್ಣು ಕಾಣದಿದ್ದರೂ, ಕಣ್ಣು ಕಾಣುವ ನಮ್ಮನ್ನೂ ಸಹ ನಾಚಿಸುವಂತೆ ಕೆಲಸ ಮಾಡುತ್ತಾರೆ. ಜತೆಗೆ ಎಲ್ಲಾ ಅಧಿಕಾರಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಇಲ್ಲಿನ ಎಲ್ಲಾ ಕಛೇರಿಗೂ ಹೋಗಿ ಬರುವ ಅಸಾಮಾನ್ಯ ವ್ಯಕ್ತಿ ಅವರು. ಇವರ ಮುಂದೆ ನಾವು ಕಣ್ಣಿದ್ದೂ ಕರುಡರಂತಾಗಿದ್ದೇವೆ" ಎನ್ನುತ್ತಾರೆ ಅಪರ ಜಿಲ್ಲಾಧಿಕಾರಿಯವರ ಆಪ್ತ ಸಹಾಯಕಿ ರೂಪಾ.
ಬಸ್ ಮೂಲಕ ಒಬ್ಬರೇ ಬರುತ್ತಾರೆ
ಇವರು ನಗರದ ಉರ್ವದಿಂದ ಡಿ.ಸಿ ಕಛೇರಿವರೆಗೆ ಯಾರ ಸಹಾಯವೂ ಇಲ್ಲದೇ ಬರುತ್ತಾರೆ. ಮನೆಯಿಂದ ಬಸ್ ನಿಲ್ದಾಣದವರೆಗೆ ನಡೆದುಕೊಂಡು ಬಂದು, ಡಿ.ಸಿ ಕಛೇರಿವರೆಗೆ ಯಾವ ಬಸ್ಸು ತೆರಳುತ್ತದೆಂದು ತಾವೇ ಗ್ರಹಿಸಿ ಬಸ್ ಹತ್ತುತ್ತಾರೆ.
ನಂತರ ಬಸ್ ಡಿ.ಸಿ ಕಛೇರಿ ಬರುತ್ತಿದ್ದಂತೆ ಇಳಿಯುವ ಇವರು ಅಲ್ಲಿಂದ ಡಿ.ಸಿ ಕಛೇರಿಗೆ ಯಾರ ಸಹಾಯವಿಲ್ಲದೇ ತೆರಳುತ್ತಾರೆ. ಜತೆಗೆ ಯಾರ ಸಹಾಯವೂ ಇಲ್ಲದೆ ರಸ್ತೆ ದಾಟುತ್ತಾರೆ. ಜೊತೆಗೆ ಫ್ಯಾಕ್ಸ್ ಕಳುಹಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆ. ಹೀಗೆ ಎಲ್ಲಾ ಕೆಲಸ ನಿರ್ವಹಿಸುತ್ತಾರೆ.
ವಾಟ್ಸಪ್ ಬಳಸುವ ಪ್ರಮೋದ್
ಸ್ವತಃ ಆಂಡ್ರಾಯ್ಡ್ ಮೊಬೈಲ್ ಹೊಂದಿರುವ ಇವರು ತಾವೇ ಕರೆಗಳನ್ನು ಮಾಡುತ್ತಾರೆ. ಸ್ಪೀಕ್ ಬ್ಯಾಕ್ ಎಂಬ ಆ್ಯಪ್ ಮೂಲಕ ಯಾರಿಗೆ ಕರೆ ಮಾಡಬೇಕು ಎಂಬುವುದನ್ನು ತಿಳಿದು ಕರೆ ಮಾಡುತ್ತಾರೆ. ಜತೆಗೆ ವಾಟ್ಸಪ್ ಮೂಲಕವೂ ಮೇಸೇಜ್ ಮಾಡುತ್ತಾರೆ.
ಪುಟ್ಟ ಸಂಸಾರ
ಇವರಿಗೆ ಮದುವೆಯಾಗಿದ್ದು, ಪತ್ನಿ ಗೃಹಿಣಿ. ಇನ್ನು ಮಗಳು 3ನೇ ತರಗತಿಯಲ್ಲಿ ಓದುತ್ತಿದ್ದಾಳೆ.
"ನಾವು ಅಂಧರು ಅಂತ ತಿಳಿದುಕೊಂಡು ಸುಮ್ಮನಿರುವುದಲ್ಲ. ಬದಲಿಗೆ ಸರಕಾರದಿಂದ ಸಿಗುವ ಸವಲತ್ತು ಪಡೆದು ಮುಂದೆ ಬರಬೇಕು. ಅಂಧತ್ವ ಎನ್ನುವುದು ಶಾಪವಲ್ಲ," ಎನ್ನುತ್ತಾರೆ ಪ್ರಮೋದ್. ತಾವು ಪ್ರತಿದಿನ ರಸ್ತೆ ದಾಟುವಾಗ ಕುರುಡ ಅಂತ ಗೊತ್ತಿದ್ದರೂ ಯಾರೂ ಸಹಾಯ ಮಾಡುವುದಿಲ್ಲ ಎಂಬ ಬೇಸರವೂ ಅವರಿಗಿದೆ.