ಸ್ಯಾಟಲೈಟ್ ಫೋನ್ ತನಿಖೆ ವಿಚಾರ; ಕೇಂದ್ರ ಸರಕಾರ ಸ್ಪಷ್ಟನೆ ನೀಡಲಿ ಎಂದ ಯು.ಟಿ.ಖಾದರ್
ಮಂಗಳೂರು ಆಗಸ್ಟ್ 20: ಸ್ಯಾಟಲೈಟ್ ಫೋನ್ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿಯ ಗೋವಿಂದೂರಿನ ವ್ಯಕ್ತಿಯೊಬ್ಬರ ಮೇಲೆ ಹೊರಿಸಲಾದ ಭಯೋತ್ಪಾದನಾ ಆರೋಪಕ್ಕೆ ಶಾಸಕ ಯು.ಟಿ.ಖಾದರ್ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆಗಿದ್ದರೂ ಮಾಧ್ಯಮಗಳಲ್ಲಿ 'ಮೂಲಗಳು ತಿಳಿಸಿವೆ' ಎಂದು ಅಮಾಯಕನನ್ನು ತಪ್ಪಿತಸ್ಥನನ್ನಾಗಿಸಿರುವುದು ತಪ್ಪು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು. "ರಾಷ್ಟ್ರೀಯ ಭದ್ರತಾ ವಿಚಾರಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಘಟನೆಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗೂ ತಿಳಿಯದ ಆ ಮೂಲಗಳು ಯಾವುದು ಎಂಬುದು ಬಹಿರಂಗವಾಗಬೇಕು" ಎಂದು ಅವರು ಪರೋಕ್ಷವಾಗಿ ಮಾಧ್ಯಮಗಳ ಕುರಿತು ಮಾತನಾಡಿದರು.
ಸ್ಯಾಟಲೈಟ್ ಫೋನ್ ಕಾಲ್ ಪತ್ತೆ; ಕರಾವಳಿಯಲ್ಲಿ ಎನ್ ಐ ಎ ತನಿಖೆ
"ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಇಂತಹ ಯಾವುದೇ ವಿಚಾರಗಳು, ಘಟನೆಗಳು ನಡೆದಿದ್ದಲ್ಲಿ ಆ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡುವಂತಾಗಬೇಕು. ಈ ವಿಚಾರವನ್ನು ರಾಜ್ಯ ಅಥವಾ ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕು. ಭಯೋತ್ಪಾದನಾ ಚಟುವಟಿಕೆಯಂತಹ ಸೂಕ್ಷ್ಮ ವಿಚಾರದಲ್ಲಿ ಜಿಲ್ಲೆಯಲ್ಲಿ ಗೊಂದಲ ಉಂಟಾಗಿದೆ. ಈ ಸಂಬಂಧ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಅಧೀಕ್ಷಕ, ನಗರ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಬೇಕು" ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೋವಿಂದೂರಿನ ಅಬ್ದುಲ್ ರವೂಫ್, "ನಿನ್ನೆ ನನ್ನ ಕುರಿತು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದ ಸುದ್ದಿ ನೋಡಿ ಆಘಾತವಾಗಿದೆ. ನಾನು 16 ವರ್ಷಗಳಿಂದ ಮಂಜನಾಡಿಯ ಅಲ್ ಮದೀನಾ ಸಂಸ್ಥೆಯಲ್ಲಿದ್ದು, ಅಲ್ಲೇ ಸಹಾಯಕ ಧರ್ಮಗುರುವಾಗಿದ್ದೇನೆ. ಮಾಧ್ಯಮಗಳಲ್ಲಿ ಪ್ರಸಾರವಾದಂತೆ ನನಗೂ ಕೇರಳಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರಗೊಂಡ ವರದಿಯ ಬ್ಗಗೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮೌಖಿಕ ದೂರು ಸಲ್ಲಿಸಿದ್ದೇನೆ. ಈ ವಿಚಾರದ ಬಗ್ಗೆ ಸೂಕ್ತ ತನಿಖೆ ಆಗಬೇಕು" ಎಂದರು.