ಆಶ್ಲೇಷ ಪೂಜೆಗೆ ಕುಕ್ಕೆಯಲ್ಲಿ ಸಾಲುಗಟ್ಟಿ ನಿಂತ ಭಕ್ತರು
ಮಂಗಳೂರು, ಡಿಸೆಂಬರ್ 06: ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಪೂಜೆ ಮಾಡಿಸಲು ಭಾನುವಾರ ಸಹಸ್ರಾರು ಭಕ್ತರು ಜಮಾಯಿಸಿದ್ದರು. ಆಶ್ಲೇಷ ಪೂಜೆಯ ರಶೀದಿ ಪಡೆಯಲು ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಬೆಳಗ್ಗಿನ ಜಾವದವರೆಗೂ ಸರತಿ ಸಾಲಿನಲ್ಲಿ ನಿಂತು ಜನರು ರಶೀದಿ ಪಡೆದುಕೊಂಡರು.
ಆಶ್ಲೇಷ ಪೂಜೆಗೆ ಆನ್ ಲೈನ್ ರಶೀದಿ ನೀಡುವುದನ್ನು ಸ್ಥಗಿತಗೊಳಿಸಲಾಗಿದ್ದು, ಈ ಹಿನ್ನಲೆಯಲ್ಲಿ ದೇವಸ್ಥಾನದಲ್ಲೇ ರಶೀದಿ ನೀಡಲಾಗುತ್ತಿದೆ. ನಿಗದಿತ ಕೌಂಟರ್ ನಲ್ಲಿ ಮಾತ್ರ ರಶೀದಿ ನೀಡುತ್ತಿರುವುದರಿಂದ ಸಹಸ್ರಾರು ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವು ಮಂದಿಗೆ ರಶೀದಿ ಸಿಗದೇ ಸೇವಾ ಕೌಂಟರ್ ಸಿಬ್ಬಂದಿ ಜೊತೆ ವಾಗ್ವಾದವೂ ನಡೆಯಿತು.
ಆಶ್ಲೇಷ ಸೇವೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ದಂಡು
ದೇವಸ್ಥಾನದ ರಶೀದಿ ಕೌಂಟರ್ ನಿಂದ ರಥಬೀದಿಯ ಉದ್ದಕ್ಕೂ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದರು. ಕ್ಷೇತ್ರದ ಒಳಗೂ ದೇವರ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿತ್ತು.
ಕೊರೊನಾ ಲಾಕ್ ಡೌನ್ ನಂತರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆಪ್ಟೆಂಬರ್ 14ರಿಂದ ದೇವರ ಸೇವೆಗಳನ್ನು ಆರಂಭಿಸಲಾಗಿತ್ತು. ಮುಜರಾಯಿ ಇಲಾಖೆಯ ಆದೇಶದಂತೆ ಸೂಕ್ತ ಮುಂಜಾಗೃತಾ ಕ್ರಮದೊಂದಿಗೆ, ನಿಗದಿತ ಭಕ್ತರೊಂದಿಗೆ ಸೇವೆಗಳ ಪುನರಾರಂಭವನ್ನು ಮಾಡಲಾಗಿತ್ತು. ಅಕ್ಟೋಬರ್ ತಿಂಗಳಿನಲ್ಲಿ ದಿನಕ್ಕೆ ಕೇವಲ 150 ಆಶ್ಲೇಷ ಬಲಿ ಸೇವೆಯನ್ನು ನೆರವೇರಿಸಲು ಅವಕಾಶ ನೀಡಲಾಗಿತ್ತು. ಆನಂತರ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ಪ್ರಕರಣಗಳು: ಡಿಸೆಂಬರ್ 5ರ ವರದಿಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 32108 ಪ್ರಕರಣಗಳು ದಾಖಲಾಗಿದ್ದು, 30930 ಮಂದಿ ಗುಣಮುಖರಾಗಿದ್ದಾರೆ. 458 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 718 ಮಂದಿ ಸಾವನ್ನಪ್ಪಿದ್ದಾರೆ.