ಮೋಹನ್ ಆಳ್ವರ ಬೆಂಬಲಕ್ಕೆ ಹರಿದು ಬಂದ ಭಾರೀ ಜನಸ್ತೋಮ
ಮಂಗಳೂರು, ಆಗಸ್ಟ್ 13: ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಮೋಹನ್ ಆಳ್ವಾರ ಅಭಿಮಾನಿಗಳು ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ಆಯೋಜಿಸಿದ್ದ ಸಭೆಗೆ ಭಾರೀ ಬೆಂಬಲ ವ್ಯಕ್ತವಾಯಿತು. ಆಳ್ವಾಸ್ ಶಾಲೆ ವಿದ್ಯಾರ್ಥಿನಿ ಕಾವ್ಯ ಪೂಜಾರಿ ನಿಗೂಢ ಸಾವಿನಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಮೋಹನ್ ಆಳ್ವಾರ ತೇಜೋವಧೆಯನ್ನು ಖಂಡಿಸಿ ಈ ಸಭೆ ಹಮ್ಮಿಕೊಳ್ಳಲಾಗಿತ್ತು.
ಮಂಗಳೂರು : ಡಾ.ಮೋಹನ್ ಆಳ್ವರ ಪರ ಫ್ಲೆಕ್ಸ್ಗಳಿಗೆ ಮಸಿ
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ, ಸಚಿವ ಕೆ. ಅಮರನಾಥ ಶೆಟ್ಟಿ, "ಮೂಡಬಿದ್ರೆಗೆ ಇಂದು ಇಂತಹ ಹೆಸರು ಬರಲು ಮೋಹನ್ ಆಳ್ವಾರು ಕಾರಣರಾಗಿದ್ದಾರೆ. ಅವರ ಶಿಕ್ಷಣ ಸಂಸ್ಥೆಯ ಫಲವಾಗಿ ಮೂಡಬಿದ್ರೆ ಇಂದು ಇಷ್ಟೊಂದು ಅಭಿವೃದ್ಧಿಗೊಂಡಿದೆ. ಕಾವ್ಯಾಳ ಸಾವಿನ ಕುರಿತು ಕೆಲವೊಂದು ಮಾಧ್ಯಮಗಳು ತಾವೇ ತೀರ್ಪು ನೀಡಿವೆ. ಹಾಗಾದರೆ ನಮಗೆ ಪೋಲಿಸ್ ಮತ್ತು ನ್ಯಾಯಲಯದ ಅಗತ್ಯವೇನು?" ಎಂದು ಪ್ರಶ್ನಿಸಿದರು.
ಆಳ್ವಾ ಸದಾ ನಿಘರ್ವಿ, ತಾಳ್ಮೆಯ ವ್ಯಕ್ತಿ
"ಆಳ್ವಾರು ಸುಮಾರು 2700 ಮಕ್ಕಳನ್ನು ದತ್ತು ಪಡೆದು ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಆದರೆ ಇಂತಹ ಕೆಲಸ ಮಾಡಲು ಆಳ್ವಾರು ಬಿಟ್ಟು ಬೇರೆ ಯಾವುದೇ ಶಿಕ್ಷಣ ಸಂಸ್ಥೆ ಇದುವರೆಗೆ ಮುಂದೆ ಬಂದಿಲ್ಲ. ಡಾ ಆಳ್ವಾ ಸದಾ ನಿಘರ್ವಿ ಹಾಗೂ ತಾಳ್ಮೆಯ ವ್ಯಕ್ತಿ. ಹಲವಾರು ಮಂದಿ ನಿಜವಾದ ಸತ್ಯ ತಿಳಿಯದೆ ಇಂದು ಅವರನ್ನು ಟೀಕಿಸುತ್ತಿದ್ದಾರೆ," ಎಂದು ಅಮರನಾಥ ಶೆಟ್ಟಿ ಹೇಳಿದರು.
ಆಳ್ವಾರ ತೇಜೋವಧೆಗೆ ಖಂಡನೀಯ
ಮೂಲ್ಕಿ ಚರ್ಚಿನ ಧರ್ಮಗುರು ವಂ. ಫ್ರಾನ್ಸಿಸ್ ಝೇವಿಯರ್ ಗೋಮ್ಸ್ ಮಾತನಾಡಿ ಜುಲೈ 20 ರಂದು ಆಳ್ವಾರ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಮಾಡಿಕೊಂಡ ಬಳಿಕ ಕೆಲವು ವ್ಯಕ್ತಿಗಳು ಡಾ ಮೋಹನ್ ಆಳ್ವಾರನ್ನು ಗುರಿಯಾಗಿಸಿಕೊಂಡು ಟೀಕಿಸಲು ಆರಂಭಿಸಿದ್ದಾರೆ. ಪೋಲಿಸ್ ಇಲಾಖೆ ಪ್ರಕರಣದ ತನಿಖೆ ನಡೆಸುತ್ತಿದ್ದು ಸತ್ಯ ಸದ್ಯವೇ ಹೊರಬೀಳಲಿದೆ. ಆದರೆ ಕೆಲವೊಂದು ವ್ಯಕ್ತಿಗಳು ಆಳ್ವಾರ ತೇಜೋವಧೆಗೆ ನಿಂತಿವೆ ಇದು ಖಂಡನೀಯ," ಎಂದರು.
ಉದ್ದೇಶಪೂರ್ವಕವಾಗಿ ತೇಜೋವಧೆ
"ನನ್ನದು ಮತ್ತು ಆಳ್ವಾರದು ಸುಮಾರು 35 ವರ್ಷಗಳ ಸಂಬಂಧ. ತನ್ನ ಮಕ್ಕಳಿಗಿಂತಲೂ ಹೆಚ್ಚು ತನ್ನ ಸಂಸ್ಥೆಯ ಮಕ್ಕಳನ್ನು ಪ್ರೀತಿಸುವ ವಿಶೇಷ ಗುಣವನ್ನು ಹೊಂದಿರುವ ವ್ಯಕ್ತಿ ಡಾ. ಆಳ್ವಾ. ತನ್ನ ಸಂಸ್ಥೆಯ ವಿದ್ಯಾರ್ಥಿಗಳ ಕುರಿತು ಅತೀವ ಕಾಳಜಿ ಹೊಂದಿರುವ ಆಳ್ವಾರನ್ನು ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ," ಎಂದರು.
ಆಳ್ವಾರನ್ನು ಹಾಡಿ ಹೊಗಳಿದ ಗಣ್ಯರು
ಕಾರ್ಯಕ್ರಮದಲ್ಲಿದ್ದ ಹಲವು ಗಣ್ಯರು ಮೋಹನ್ ಆಳ್ವಾರ ಶೈಕ್ಷಣಿಕ, ಸಾಂಸ್ಕೃತಿಕ ಕೊಡುಗೆಗಳನ್ನು ಇದೇ ಸಂದರ್ಭದಲ್ಲಿ ಹಾಡಿಹೊಗಳಿದರು. ಕಾವ್ಯಾ ಪೂಜಾರಿ ಸಾವಿಗೆ ನ್ಯಾಯ ಸಿಗಬೇಕು, ಆದರೆ ಆಳ್ವಾಸ್ ಶಿಕ್ಷಣ ಸಂಸ್ಥೆ, ಡಾ ಮೋಹನ್ ಆಳ್ವಾರ ತೇಜೋವಧೆ ಸಲ್ಲದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಹಲವರು ಭಾಗಿ
ಸಭೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಡಾ. ಎಜೆ ಶೆಟ್ಟಿ, ಡಾ. ಮಂಜುನಾಥ ಭಂಡಾರಿ, ವೈದೇಹಿ, ಕರ್ನಲ್ ಐ ಎನ್ ರೈ, ಪ್ರೋ. ಎಮ್. ಬಿ. ಪುರಾಣಿಕ್, ಸುಂದರ್ ಜಿ ಆಚಾರ್ಯ, ವಿಜಯನಾಥ್ ವಿಠಲ್ ಶೆಟ್ಟಿ ಹಾಗೂ ಇತರರ ನಾಯಕರು ಪಾಲ್ಗೊಂಡಿದ್ದಾರೆ.