ಮಂಗಳೂರಿನಲ್ಲಿ ಮಳೆಗಾಗಿ ಮುಸ್ಲಿಮರಿಂದ ವಿಶೇಷ ನಮಾಝ್
ಮಂಗಳೂರು, ಮೇ 15: ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ತೀವ್ರ ಅಭಾವ ಎದುರಾಗಿದೆ. ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.
ಮಂಗಳೂರು ನಗರಕ್ಕೆ ನೀರುಣಿಸುವ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಪ್ರಮಾಣ ಕುಸಿಯುತ್ತಿದ್ದು, ಮುಂಬರುವ ದಿನಗಳಲ್ಲಿ 4 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಪಾಲಿಕೆ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
ಮಂಗಳೂರಿನಲ್ಲಿ ನೀರಿನ ಸಮಸ್ಯೆ: ಮಳೆಗಾಗಿ ದೇವರ ಮೊರೆ ಹೋದ ಜನರು
ಈ ನಡುವೆ ಜನರು ಶೀಘ್ರ ಮಳೆಗಾಗಿ ದೈವ, ದೇವರುಗಳ ಮೊರೆ ಹೋಗಿದ್ದಾರೆ. ಮಂಗಳವಾರ ಶ್ರೀ ಕ್ಷೇತ್ರ ಕದ್ರಿಯಲ್ಲಿ ಮಳೆಗಾಗಿ ಸೀಯಳಾಭಿಷೇಕ ನೆರವೇರಿಸಲಾಗಿತ್ತು. ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕಲ್ಕೂರ ಪ್ರತಿಷ್ಠಾನ, ಸ್ಥಳೀಯರು ಹಾಗೂ ಸಾರ್ವಜನಿಕ ಸಂಘಸಂಸ್ಥೆಗಳ ಸಹಯೋಗದಲ್ಲಿ ಸೀಯಾಳಾಭಿಷೇಕ ನೆರವೇರಿಸಿ ಶೀಘ್ರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಅದರಂತೆ ಮಂಗಳೂರಿನಲ್ಲಿ ಇಂದು ಮಳೆಗಾಗಿ ಮುಸ್ಲಿಮರು ವಿಶೇಷ ನಮಾಝ್, ಕುತ್ಬಾ ಪಾರಾಯಣ ನಡೆಸಿದರು. ಕುದ್ರೋಳಿಯ ಸಲಾಫಿ ಮಸೀದಿಯ ಖತೀಬ್ ಮುಹಮ್ಮದ್ ಶೇಖ್ ಸಾಕಿಬ್ ಸಲೀಂ ಉಮ್ರಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ತುಂಬೆ ಅಣೆಕಟ್ಟಿನಲ್ಲಿ ಉಳಿದಿರುವುದು ಕೇವಲ 4.90 ಮೀಟರ್ ನೀರು!
ವಿಶೇಷ ಪ್ರಾರ್ಥನೆ ವೇಳೆ ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು. ಎಸ್.ಕೆ.ಎಸ್.ಎಂ ಕಾರ್ಯದರ್ಶಿ ಎಂ.ಜಿ. ಮುಹಮ್ಮದ್ ಹಾಗೂ ನೂರಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ವಿಶೇಷ ನಮಾಝ್ ಮತ್ತು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.