ಆಸ್ಟ್ರೇಲಿಯಾ ವಧು ವರಿಸಿದ ಮಂಗಳೂರು ಕುವರ
ಮಂಗಳೂರು, ಜ. 9: ಮದುವೆ ಅನ್ನೋದು ಏಳೇಳು ಜನ್ಮದ ಅನುಬಂಧ ಅನ್ನೋ ಮಾತಿಗೆ ಮಂಗಳೂರಿನಲ್ಲಿ ನಡೆದ ವಿಭಿನ್ನ ಮದುವೆ ಸಾಕ್ಷಿಯಾಯಿತು. ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋದ ಮಂಗಳೂರಿನ ಯುವಕ ಇದೀಗ ಅಲ್ಲಿನ ಯುವತಿಯೊಬ್ಬಳನ್ನು ತನ್ನ ಬಾಳ ಸಂಗತಿಯನ್ನಾಗಿ ಆರಿಸಿಕೊಂಡಿದ್ದಾರೆ. ಈ ಅಪರೂಪದ ಮದುವೆಗೆ ವೇದಿಕೆಯಾಗಿದ್ದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ.
ಮಂಗಳೂರಿನ ಮಣ್ಣಗುಡ್ಡ ನಿವಾಸಿ ವಿನೀತ್ ಹಾಗೂ ಆಸ್ಟ್ರೇಲಿಯಾದ ಸ್ಯಾಲಿ ಹಿಂದೂ ಸಂಪ್ರದಾಯದಂತೆ ಶುಕ್ರವಾರ ಹೊಸ ಬಾಳಿಗೆ ಕಾಲಿಟ್ಟರು. ಪ್ರೀತಿಗೆ ಭಾಷೆ, ಜಾತಿ, ಧರ್ಮ, ದೇಶದ ಅಡೆತಡೆಯಿಲ್ಲ ಎಂಬುದಕ್ಕೆ ಈ ಮದುವೆಯೇ ಉತ್ತಮ ನಿದರ್ಶನವಾಯಿತು.[58 ವರ್ಷದ ಥಾಣೆ 'ಯುವಕ'ನಿಗೆ 20ರ ಕನ್ಯೆ!]
ಮಣ್ಣಗುಡ್ಡ ನಿವಾಸಿಯಾದ ವಿನೀತ್ 2007ರಲ್ಲಿ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ನಂತರ ಅಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಅಂತಾರಾಷ್ಟ್ರೀಯ ವಾಲಿಬಾಲ್ ಪಟುವಾಗಿರುವ ವಿನೀತ್ ಆಸ್ಟ್ರೇಲಿಯಾದ ಶಾಲೆಯೊಂದಕ್ಕೆ ತರಬೇತುದಾರಾಗಿಯೂ ಹೋಗುತ್ತಿದ್ದರು. ಆ ಶಾಲೆಯ ಶಿಕ್ಷಕಿಯಾಗಿದ್ದ ಸ್ಯಾಲಿಯೊಂದಿಗೆ ಪ್ರೇಮಾಂಕುರವಾಗಿದ್ದು 5 ವರ್ಷಗಳ ಪ್ರೀತಿಯ ಬಳಿಕ ಮದುವೆಗೆ ನಿರ್ಧರಿಸಿದ್ದರು.
ಅದರಂತೆ ಎಲ್ಲರ ಒಪ್ಪಿಗೆಯೊಂದಿಗೆ ಕಳೆದ ಡಿಸೆಂಬರ್ 19 ಕ್ಕೆ ಆಸ್ಟ್ರೇಲಿಯಾದಲ್ಲಿ ಅಲ್ಲಿನ ಸಂಪ್ರದಾಯದಂತೆ ಮದುವೆಯಾಗಿದ್ದು ಶುಕ್ರವಾರ ಕುದ್ರೋಳಿ ಕ್ಷೇತ್ರದಲ್ಲಿ ಹಿಂದೂ ಸಂಪ್ರದಾಯದೊಂದಿಗೆ ಮದುವೆಯಾದರು. ಭಾರತದ ಸಂಸ್ಕೃತಿ ಹಾಗೂ ಇಲ್ಲಿನ ಆಚಾರ ವಿಚಾರಗಳು ಜೊತೆಗೆ ವಿನೀತ್ ಒಳ್ಳೆತನ ತನಗೆ ಇಷ್ಟವಾಯಿತು ಅನ್ನುವ ಮದುಮಗಳು ಮಂಗಳೂರನ್ನು ನೆಚ್ಚಿಕೊಂಡಿದ್ದಾಳೆ.[ಕುಡ್ಲದ ಕಾಲೇಜು ಕುವರನ 'ರಾಣಿ' ಇನ್ನಿಲ್ಲ]
ಎರಡು ಕುಟುಂಬದವರು ಮದುವೆಯಲ್ಲಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸ್ನೇಹಿತರು ಸಹ ಶುಭ ಹಾರೈಸಿದರು. ಹೊಸ ಜೋಡಿಗೆ ನಮ್ಮ ಪರವಾಗಿಯೂ ಒಂದು ಶುಭ ಹಾರೈಕೆ.