ಮಂಜೇಶ್ವರದಲ್ಲಿ ಗೋವಿಂದ ಪೈ ಸ್ಮಾರಕ ಲೋಕಾರ್ಪಣೆ
ಕರ್ನಾಟಕ, ಕೇರಳ ಹಾಗೂ ಕೇಂದ್ರ ಸರಕಾರ ಮತ್ತು ಇತರ ದಾನಿಗಳ ಸಹಕಾರ, ಸಹಯೋಗದೊಂದಿಗೆ ನಿರ್ಮಿಸಲಾದ 'ಗಿಳಿ ವಿಂಡು' ಮಂಜೇಶ್ವರ ಗೊವಿಂದ ಪೈ ಸ್ಮಾರಕ ಗುರುವಾರ ಲೋಕಾರ್ಪಣೆಗೊಂಡಿತು.
ಮಂಗಳೂರು, ಜನವರಿ. 20 : ರಾಜ್ಯದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಗೌರವಾರ್ಥ ಅವರ ಹುಟ್ಟೂರಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ 'ಗಿಳಿ ವಿಂಡು' ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗುರುವಾರ ಲೋಕಾರ್ಪಣೆಗೊಂಡಿತು.
ಕರ್ನಾಟಕ, ಕೇರಳ ಹಾಗೂ ಕೇಂದ್ರ ಸರಕಾರ ಮತ್ತು ಇತರ ದಾನಿಗಳ ಸಹಕಾರ, ಸಹಯೋಗದೊಂದಿಗೆ ನಿರ್ಮಿಸಲಾದ ಗಿಳಿವಿಂಡು ಸಾಂಸ್ಕೃತಿಕ ಕೇಂದ್ರದಲ್ಲಿ ಭವನಿಕಾ ರಂಗ ಮಂದಿರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, 'ಹಿರಿಯ ಸಾಹಿತಿ ಮಂಜೇಶ್ವರ ಗೋವಿಂದ ಪೈ ಅವರ ನೆನಪಿನ ಸ್ಮಾರಕ ಗಿಳಿವಿಂಡು ಅಭಿವೃದ್ದಿಗೆ ಎರಡು ಕೋಟಿ ರೂ ಅನುದಾನ ಬಿಡುಗಡೆಗೊಳಿಸಲಾಗುವುದು' ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಈಗಾಗಲೇ ಒಂದು ಕೋಟಿ ಬಿಡುಗಡೆ ಮಾಡಲಾಗಿದೆ ಎಂದ ಸಿಎಂ ಸಿದ್ದರಾಮಯ್ಯ, ಮುಂದೆಯೂ ಸಹಾಯ ನೀಡುವುದಾಗಿ ಹೇಳಿದರು. ಇದೇ ವೇಳೆ ಗೋವಿಂದ ಪೈ ಸ್ಮಾರಕವನ್ನು ಎರಡು ರಾಜ್ಯ ಸರಕಾರ ಸೇರಿ ನಡೆಸಲು ಮುಂದಾಗಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.
ಇಂತಹ ಮಹತ್ವದ ಯೋಜನೆ ಇಲ್ಲಿ ಕಾರ್ಯಗತಗೊಳ್ಳಲು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ನ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಪ್ರಮುಖ ಕಾರಣ ಎಂದ ಸಿಎಂ ಸಿದ್ದರಾಮಯ್ಯ, ಇದಕ್ಕೆ ಸಹಕಾರ ನೀಡಿದ ಎಲ್ಲಾ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕೇರಳ ಸರಕಾರ ಸಹಾಯ
ಇಕ್ಕೇರಿ ಅರಸರು ಕಟ್ಟಿದ ಪುರಾತನ ಬೇಕಲ ಕೋಟೆ ಇರುವ ಐತಿಹಾಸಿಕ ಮಹತ್ವದ ಕೇಂದ್ರ ಇರುವ ಪ್ರದೇಶದಲ್ಲಿ ಗೋವಿಂದ ಪೈಗಳ ಸ್ಮಾರಕದ ಅಭಿವೃದ್ಧಿಗೆ ಕೇರಳ ಸರಕಾರ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.
75 ವರ್ಷದ ಹಿಂದಿನ ಕನಸು ಈಗ ನನಸು
ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈಯವರು ಹೆಸರು ಗಳಿಸಿದ್ದರೂ ಅವರ ಹೆಸರಿನಲ್ಲಿ ಸ್ಮಾರಕ ಇಲ್ಲದೆ ಇರುವುದು ಒಂದು ಕೊರತೆಯಾಗಿತ್ತು. ಇದೀಗ ಸುಮಾರು 75 ವರ್ಷದ ಹಿಂದಿನ ಆ ಕನಸು ಇಂದು ಸ್ಮಾರಕ ರಚನೆಯಾಗುವ ಮೂಲಕ ನೆರವೇರಿದೆ ಎಂದು ಟ್ರಸ್ಟ್ನ ಅಧ್ಯಕ್ಷ , ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸರಕಾರದ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಸಂತಸ ವ್ಯಕ್ತಪಡಿಸಿದರು.
ಗೋವಿಂದ ಪೈ ಪ್ರತಿಮೆ ಅನಾವರಣ
ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಗೋವಿಂದ ಪೈ ಪ್ರತಿಮೆ ಅನಾವರಣಗೊಳಿಸಿದರು.
ಗೋವಿಂದ ಪೈ ನಿವಾಸ ಉದ್ಘಾಟನೆ
ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವ ಇ. ಚಂದ್ರಶೇಖರನ್ , ಗಿಳಿವಿಂಡು ಯಕ್ಷ ದೇಗುಲವನ್ನು ಹಾಗೂ ನವೀಕೃತ ಗೋವಿಂದ ಪೈ ನಿವಾಸವನ್ನು ಉದ್ಘಾಟಿಸಿದರು.