ಮಂಗಳೂರಿನ ಕದ್ರಿಯಲ್ಲಿ ಮಾವು - ಹಲಸಿನ ಘಮ ಘಮ
ತೋಟಗಾರಿಕೆ ಇಲಾಖೆ ಹಾಗು ಕರ್ನಾಟಕ ರಾಜ್ಯ ಅಭಿವೃದ್ಧಿ ಮಾರುಕಟ್ಟೆ ನಿಗಮದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಿನ್ನೆ ಯಿಂದ ಮಾವು-ಹಲಸಿನ ಮೇಳ ಆರಂಭವಾಗಿದ್ದು, ಮೇ 25 ರವರೆಗೂ ನಡೆಯಲಿದೆ.
ಮಂಗಳೂರು, ಮೇ 20: ಹಸಿದು ಹಲಸು, ಉಂಡು ಮಾವು ಅನ್ನೋದು ಗಾದೆ. ಆದರೆ ಹಸಿದಾಗಲೂ, ಹೊಟ್ಟೆ ತುಂಬಿದಾಗಲೂ ತಿನ್ನಬೇಕೆನ್ನಿಸುವ ಘಮ ಗಮ ಪರಿಮಳ ಬೀರುವ ಈ ಹಣ್ಣುಗಳು ಇದೀಗ ಎಲ್ಲೆಡೆ ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಾವು ಮತ್ತು ಹಲಸಿನ ಮೇಳಗಳು ಈಗಾಗಲೇ ಹಲವೆಡೆ ನಡೆಯುತ್ತಿದ್ದು, ಕದ್ರಿಯಲ್ಲೂ ಮಾವು-ಹಲಸಿನ ಮೇಳದ ಘಮ ಹರಡಿದೆ.
ತೋಟಗಾರಿಕೆ ಇಲಾಖೆ ಹಾಗು ಕರ್ನಾಟಕ ರಾಜ್ಯ ಅಭಿವೃದ್ಧಿ ಮಾರುಕಟ್ಟೆ ನಿಗಮದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಿನ್ನೆ (ಮೇ 19)ಯಿಂದ ಮೇಳ ಆರಂಭವಾಗಿದ್ದು ಮೇ 25 ರವರೆಗೂ ನಡೆಯಲಿದೆ. ಮಾವು ಹಾಗೂ ಹಲಸಿನ ಮೇಳಕ್ಕೆ ನೂರಾರು ಜನರು ಸಾಕ್ಷಿಯಾಗಲಿದ್ದಾರೆ.[ಮೈಸೂರಿನಲ್ಲಿ ಹಣ್ಣುಗಳ ರಾಜನ ಕಾರುಬಾರು ಬಲು ಜೋರು]
ಹತ್ತಾರು ತಳಿಗಳ ಮಾವು ಮತ್ತು ಹಲಸುಗಳು ಪ್ರದರ್ಶನವೂ ಇದ್ದು, ಆರಂಭದ ದಿನವೇ ಗ್ರಾಹಕರು ಅಪರೂಪದ ಹಣ್ಣುಗಳನ್ನು ಕೊಳ್ಳಲು ಮುಗಿಬಿದ್ದ ದೃಶ್ಯ ಕಂಡುಬರುತ್ತಿತ್ತು.[ಮೈಸೂರಿನಲ್ಲಿ ಆರಂಭವಾಗಿದೆ ಮಾವು ಮೇಳ]
ಈ ಬಗ್ಗೆ ಮಾತನಾಡಿದ ಮಂಗಳೂರು ಉಸ್ತುವಾರಿ ಸಚಿವ ರಮಾನಾಥ ರೈ, 'ರೈತರು ಬೆಳೆದ ಬೆಳೆಗಳಿಗೆ ನೇರ ಮಾರುಕಟ್ಟೆ ಒದಗಿಸುವ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಇಂತಹ ಮೇಳವನ್ನು ಆಯೋಜಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಮಾವು ಮತ್ತು ಹಲಸು ಲಾಭದಾಯಕ ಬೆಳೆಯಾಗಿ ಗುರುತಿಸಿಕೊಂಡಿದೆ. ಹೆಚ್ಚಿನ ರೈತರು ಇದರಲ್ಲಿ ತೊಡಗಿಸಿಕೊಂಡು ಪ್ರಯೋಜನ ಪಡೆಯುತ್ತಿದ್ದಾರೆ' ಎಂದರು.[ಕದ್ರಿಯಲ್ಲಿ ಮೇ 19 -25 ರವರೆಗೆ ಮಾವು ಮತ್ತು ಹಲಸು ಮೇಳ]
ವಿವಿಧ ಜಿಲ್ಲೆಯ ರೈತರು ಭಾಗಿ
ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ರೈತರು, ಮಾವು ಮತ್ತು ಹಲಸಿನ ಮೇಳದಲ್ಲಿ ಪಾಲ್ಗೊಂಡು ತಾವು ಬೆಳೆದ ವಿವಿಧ ಜಾತಿಯ ಮಾವು-ಹಲಸನ್ನು ಮರಾಟ ಮಾಡುತ್ತಿದ್ದಾರೆ.
ತರಹೇವಾರಿ ಮಾವು
ಅಲ್ಪೋನ್ಸ್, ನೀಲಂ, ಬೈಗನ್ ಪಲ್ಲಿ, ಕೈಸರ್, ಬಾದಾಮ್, ಮಲ್ಲಿಕಾ, ಸೆಂಡೂರ್, ದೇಹಾರಿ, ಮಲ್ಗೋವಾ, ತೋತಾಪುರಿ, ದಿಲ್ಪಸಂದ್, ಕೇಸರ್ ಸೇರಿದಂತೆ ಹಲವು ಬಗೆಯ ಮಾವುಗಳು ಮೇಳದಲ್ಲಿವೆ.
ಹಲಸಿಗೂ ಬರವಿಲ್ಲ
ಚಂದ್ರ ಹಲಸು, ಭೈರಸಂದ್ರ, ಸ್ವರ್ಣ, ತೂಬುಗೆರೆ, ಸಕ್ರೆಪಟ್ನ, ಚನ್ನರಾಯಪಟ್ನ, ರುದ್ರಾಕ್ಷಿ ಸೇರಿದಂತೆ ಹಲವು ತಳಿಯ, ಬಾಯಲ್ಲಿ ನೀರೂರಿಸುವ ಹಲಸುಗಳು ಗ್ರಾಹಕರಿಗಾಗಿ ಕಾದಿವೆ.
ಕದ್ರಿ ಉದ್ಯಾನವನದ ತುಂಬ ಘಮ ಘಮ
ಬಗೆ ಬಗೆಯ ಹಲಸು, ಮಾವಿನ ಹಣ್ಣುಗಳ ರಾಶಿಯ ಅಂಗಣವಾಗಿ ಪರಿವರ್ತನೆಗೊಂಡಿದೆ ಕದ್ರಿ ಉದ್ಯಾನವನ. ಘಮ್ಮನ್ನುವ ಈ ತಾಣಕ್ಕೆ ದಿನ ದಿನವೂ ಜಮಾಯಿಸುತ್ತಿರುವ ಹಣ್ಣುಪ್ರಿಯರು ತಮ್ಮಿಷ್ಟದ ಹಣ್ಣನ್ನು ಕೊಂಡು ಸವಿಯುತ್ತಿದ್ದಾರೆ.
ಇನ್ನೊಂದು ವಾರ ಮೇಳ
ಮೇಳ ಇನ್ನೂ ಆರು ದಿನ ನಡೆಯಲಿದ್ದು, ಒಟ್ಟು ಒಂದು ವಾರದ ಮೇಳ ಇದಾಗಿದೆ. ಅಪರೂಪದ ಜಾತಿಯ ಹಣ್ಣಿನ ಮಾರಾಟ, ಖರೀದಿಗೆ ಅವಕಾಶವಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆ ಮಧ್ಯವರ್ತಿಗಳ ಹಾವಳಿಗೆ ತುತ್ತಾಗಬಾರದೆಂಬ ಕಾರಣಕ್ಕಾಗಿ ಇಂಥ ಮೇಳಗಳು ನಡೆಯುತ್ತಿವೆ.