ನೆಲ,ಜಲದ ಮಹತ್ವ ಬಗ್ಗೆ ಕಿರುಚಿತ್ರ ರೂಪಿಸಿದ ಮಂಗಳೂರು ಪಂಚಾಯಿತಿ CEO
ಮಂಗಳೂರು, ಸೆಪ್ಟೆಂಬರ್ 26: ಸದಾ ಕರ್ತವ್ಯದ ಬ್ಯುಸಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯೊಬ್ಬರು ಕಿರುಚಿತ್ರ ನಿರ್ಮಿಸಿದ್ದಾರೆ ಎಂದರೆ ಯಾರಾದ್ರೂ ನಂಬುತ್ತಿರಾ?. ನಂಬಲಸಾಧ್ಯವಾದರೂ ನಂಬಲೇಬೇಕು.
ಹೌದು...ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎಂ.ಆರ್. ರವಿ ಅವರು ಈ ಸಾಹಸಕ್ಕೆ ಕೈ ಹಾಕಿ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಇದು ಅಂತಿಂಥ ಕಿರು ಚಿತ್ರವಲ್ಲ. ನಶಿಸಿ ಹೋಗುತ್ತಿರುವ ನೆಲ ಜಲದ ಮಹತ್ವವನ್ನು ಸಾರುವ ಕಿರು ಚಿತ್ರವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ವತಿಯಿಂದ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ "ಇರುವುದೊಂದೇ ಭೂಮಿ" ಹಾಗೂ ನೀರಿನ ಸಂರಕ್ಷಣೆ ಕುರಿತು "ಜಲಧಾರೆ" ಕಿರುಚಿತ್ರಕ್ಕೆ ಸಾಹಿತ್ಯ ಗೀತೆ ರಚನೆಯನ್ನು ಸಿಇಒ ಡಾ ರವಿ ಮಾಡಿದ್ದಾರೆ.
ಕಿರು ಚಿತ್ರಗಳನ್ನು ಶಾಲೆಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ, ಗ್ರಾಮಸಭೆಗಳಲ್ಲಿ ಪ್ರದರ್ಶಿಸುವ ಗುರಿಯನ್ನು ಸಿಇಒ ಡಾ ರವಿ ಹೊಂದಿದ್ದಾರೆ. ಜಿಲ್ಲೆಯಲ್ಲಿ 2044 ಶಾಲೆಗಳಲ್ಲಿ ಪ್ರದರ್ಶಿಸಿದರೆ 3.21 ಲಕ್ಷ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯವಿದೆ. ಇನ್ನು ಸಾರ್ವಜನಿಕ ಸಭೆ ಗ್ರಾಮಸಭೆ ಮುಂತಾದವುಗಳ ಮೂಲಕ 10 ಲಕ್ಷಕ್ಕೂ ಹೆಚ್ಚು ಜನರನ್ನು ಮುಟ್ಟಲು ಕಟ್ಟಲು ಅವಕಾಶವಿದೆ ಎನ್ನುತ್ತಾರೆ ಡಾ ರವಿ.
ಸಕಲ ಜೀವ ಸಂಕುಲಕ್ಕೆ ಎಂಬ ಹಿತವಾದ ಟೈಟಲ್ ಸಾಂಗ್ ನೊಂದಿಗೆ ನೆಲದ ಮಹತ್ವದ ಕುರಿತು ಚಿತ್ರ ಆರಂಭವಾಗುತ್ತದೆ. ನಮಗೆ ವಾಸಿಸಲು ಇರುವ ಭೂಮಿ ಒಂದೇ ಅದನ್ನು ತ್ಯಾಜ್ಯದಿಂದ ತುಂಬಿಸಿ ಡಸ್ಟ್ ಬಿನ್ ಮಾಡಬೇಡಿ ಎಂಬ ಸಂದೇಶವನ್ನು ಈ ಚಿತ್ರ ಹೇಳಿದೆ.
"ಜಲ ಜಲಧಾರ ಕಿಲಕಿಲ ನಗುತ್ತಾ ನೀ ಬಾರಾ ಮನೆ ಮನೆಗಳ ಅಮೃತಧಾರಾ" ಎಂಬ ಟೈಟಲ್ ಸ್ವಾಮಿಯೊಂದಿಗೆ ನೀರಿನ ಮಹತ್ವವನ್ನು "ಜಲಧಾರೆ" ಕಿರುಚಿತ್ರ ತೆರೆದಿಡುತ್ತದೆ.
ಜಿಲ್ಲೆಯಲ್ಲಿ ನರೇಗಾ ಬಳಸಿಕೊಂಡು ಒಂದು ಸಾವಿರ ಕಿಂಡಿ ಅಣೆಕಟ್ಟು ನಿರ್ಮಿಸುವ ಗುರಿಯ ಕುರಿತು ಈ "ಜಲಧಾರೆ" ಚಿತ್ರದಲ್ಲಿ ತೋರಿಸಲಾಗಿದೆ.
ಈ ಎರಡು ಕಿರು ಚಿತ್ರದಲ್ಲಿ ಆರಂಭದಲ್ಲಿ ಮೊಳಗುವ ಹಾಡುಗಳೇ ಬಹಳ ಇಂಪಾಗಿವೆ, ಲೈಟ್ ಮ್ಯೂಸಿಕ್ ನಡುವೆ ನೆಲ ಜಲದ ಮಹತ್ವವನ್ನು ಹಾಡುಗಳು ಸಾರುತ್ತಿವೆ.
ಚಿತ್ರಕ್ಕೆ ಮಾರ್ಗದರ್ಶನ ಪರಿಕಲ್ಪನೆ ಸಾಹಿತ್ಯ ಜಿಲ್ಲಾ ಪಂಚಾಯಿತಿ ಸಿಇಒ ಡಾ ಎಂ ಆರ್ ರವಿ ಅವರದ್ದಾಗಿದೆ. ಗೀತೆ ಟೈಟಲ್ ಸಾಂಗ್ ಕೂಡ ಅವರೇ ಬರೆದಿದ್ದಾರೆ.
ನಮ್ಮ ನೆಲ ಜಲದ ಬಗ್ಗೆ ವಿಶೇಷ ಗಮನ ಹರಿಸುವುದು ನಮ್ಮ ಮೊದಲ ಕರ್ತವ್ಯ ಈ ಹಿನ್ನೆಲೆಯಲ್ಲಿ ನೆಲ ಜಲದ ಸಂದೇಶ ಸಾರುವ ಎರಡು ಕಿರುಚಿತ್ರಗಳನ್ನು ನಿರ್ಮಿಸಲಾಗಿದೆ.
ಸಾರ್ವಜನಿಕ ಸಭೆಗಳಲ್ಲಿ ಶಾಲೆಗಳಲ್ಲಿ ಕಿರುಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಡಾಕ್ಟರ್ ಎಂಬ ರವಿ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.