ಕುವೈತ್ ನಲ್ಲಿನ 35 ಯುವಕರು ಶೀಘ್ರ ಮಂಗಳೂರಿಗೆ-ವೇದವ್ಯಾಸ್ ಕಾಮತ್
ಮಂಗಳೂರು ಜೂನ್ 22: ಕುವೈತ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರಿನ 35 ಯುವಕರನ್ನು ಕರೆತರಲು ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಿಂದ ಕೊಲ್ಲಿ ರಾಷ್ಟ್ರ ಕುವೈತ್ ಗೆ ಉದ್ಯೋಗಕ್ಕೆಂದು ಹೋಗಿ, ಬಳಿಕ ವಂಚನೆಗೊಳಗಾದ 35 ಮಂದಿ ಮಂಗಳೂರಿನ ಯುವಕರು ಕಳೆದ 6 ತಿಂಗಳಿನಿಂದ ಕುವೈತ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ಯುವಕರನ್ನು ಶೀಘ್ರ ಮಂಗಳೂರಿಗೆ ಕರೆತರಲು ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಹೆಲ್ಮೆಟ್ ಇಲ್ಲದೆ ಬೈಕ್ ರೈಡ್; ಫೋಟೊ ತೆಗೆದ ಪೊಲೀಸ್ ಮೇಲೆ ಹಲ್ಲೆ
ಮಂಗಳೂರಿನ ಈ ಯುವಕರ ಬಗ್ಗೆ ಈಗಾಗಲೇ ವಿದೇಶಾಂಗ ಸಚಿವಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರ ಜೊತೆಗೆ ಮಾತುಕತೆ ನಡೆಸಲಾಗಿದೆ. ಕೇಂದ್ರ ಸಚಿವ ಸದಾನಂದ ಗೌಡ ಸೇರಿದಂತೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಜೊತೆ ಈ ಬಗ್ಗೆ ನಿರಂತರ ಮಾತುಕತೆ ನಡೆಸಿದ್ದೇನೆ. ಯುವಕರನ್ನು ಮರಳಿ ಕರೆತರಲು ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಶೀಘ್ರ ಸಮಸ್ಯೆಯನ್ನು ಬಗೆಹರಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕುವೈತ್ ನಲ್ಲಿರುವ ಮಂಗಳೂರಿನ ಯುವಕರ ಜೊತೆ ಈಗಾಗಲೇ ನಾನು ಹಲವು ಬಾರಿ ಮಾತನಾಡಿದ್ದು, ಅವರನ್ನು ಮತ್ತೆ ಕರೆತರುವ ಬಗ್ಗೆ ಮಾತು ಕೊಟ್ಟಿದ್ದೇನೆ. ಅದರಂತೆ ಅವರಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದರು.