ಆಸ್ಟ್ರೇಲಿಯಾದಲ್ಲಿ ಮೋದಿಗಾಗಿ ಉನ್ನತ ಹುದ್ದೆಯನ್ನೇ ತೊರೆದ ಮಂಗಳೂರಿನ ಯುವಕ
ಮಂಗಳೂರು, ಏಪ್ರಿಲ್ 14:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದೆ.ಇದೇ ಬರುವ ಏಪ್ರಿಲ್ 18 ರಂದು ದಕ್ಷಿಣ ಕನ್ನಡ ಲೋಕಸಭಾ ವ್ಯಾಪ್ತಿಯಲ್ಲಿ ಮತದಾನ ನಡೆಯಲಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಂಗಳೂರಿಗೆ ಆಗಮಿಸಿ ಬೃಹತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಅಬ್ಬರಿಸಿ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಸರಿ ಪಾಳಯದಲ್ಲಿ ಚುನಾವಣಾ ರಣೋತ್ಸಾಹ ಇಮ್ಮಡಿಯಾಗಿದೆ.
ಮಂಗಳೂರಲ್ಲಿ ಮೋದಿ ಸ್ವಾಗತಕ್ಕೆ ಚೌಕಿದಾರ್ ವೇಷ ಧರಿಸಿದ ಬಿಜೆಪಿ ಮುಖಂಡ
ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ಅಭಿಯಾನ ಬಿರುಸುಗೊಂಡಿದೆ.
ಹೌದು, ನರೇಂದ್ರ ಮೋದಿ ಅವರನ್ನು ಎರಡನೇ ಬಾರಿಗೆ ಪ್ರಧಾನಿಯನ್ನಾಗಿ ನೋಡುವ ಇಚ್ಛೆ ಹೊಂದಿರುವ ಮಂಗಳೂರಿನ ಯುವಕನೊಬ್ಬ ಬಹುರಾಷ್ಟ್ರೀಯ ವಿಮಾನಯಾನ ಸಂಸ್ಥೆಯೊಂದರ ಉದ್ಯೋಗಕ್ಕೆ ಗುಡ್ ಬೈ ಹೇಳಿ ಸ್ವದೇಶಕ್ಕೆ ಮರಳಿದ ಅಪರೂಪದ ಪ್ರಸಂಗ ಬೆಳಕಿಗೆ ಬಂದಿದೆ.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಮಂಗಳೂರಿನಲ್ಲಿ ಫ್ಲಾಷ್ ಮಾಬ್
ಮಂಗಳೂರಿನ ಸುರತ್ಕಲ್ ನಿವಾಸಿ ಸುಧೀಂದ್ರ ಹೆಬ್ಬಾರ್ . ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು . ಸುಧೀಂದ್ರ ಮೋದಿ ಅವರ ಕಟ್ಟಾ ಅಭಿಮಾನಿ. ತವರಿಗೆ ಮರಳಿ ಏಪ್ರಿಲ್ 18 ರಂದು ಮತ ಚಲಾಯಿಸಲು ರಜೆಗೆ ಮನವಿ ಸಲ್ಲಿಸಿದ್ದರು. ಮುಂದೇನಾಯ್ತು ಗೊತ್ತಾ?
ರಜೆ ನೀಡುವುದಿಲ್ಲ ಎಂದ ಸಂಸ್ಥೆ
ಸುಧೀಂದ್ರ ಅವರಿಗೆ ಸಂಸ್ಥೆಯು ಏಪ್ರಿಲ್ 5 ರಿಂದ ಏಪ್ರಿಲ್ 12 ವರೆಗೂ ರಜೆ ನೀಡಿ ಆ ಬಳಿಕ ಈಸ್ಟರ್ ಹಾಗೂ ರಂಜಾನ್ ಹಬ್ಬ ಇರುವ ಕಾರಣ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಕರು ಇರುವುದರಿಂದ ರಜೆಯನ್ನು ವಿಸ್ತರಣೆ ಮಾಡಲು ಆಗುವುದಿಲ್ಲ ಎಂದು ಹೇಳಿತು. ಈ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ಮತ ಚಲಾಯಿಸುವ ದೃಷ್ಟಿಯಿಂದ ಸುಧೀಂದ್ರ ಅಂತಿಮವಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ತವರಿಗೆ ಆಗಮಿಸಿದ್ದಾರೆ.
ಮತ್ತೊಂದು ಕೆಲಸವನ್ನು ಪಡೆಯಬಲ್ಲೆ
ಎಂಬಿಎ ಪದವಿ ಹೊಂದಿರುವ ಸುಧೀಂದ್ರ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೆಲಸಕ್ಕೆ ರಾಜೇನಾಮೆ ನೀಡಿರುವ ಬಗ್ಗೆ ತಮಗೆ ಯಾವುದೇ ರೀತಿಯಲ್ಲಿ ಬೇಸರವಿಲ್ಲ. ಏಕೆಂದರೆ ನಾನು ಮತ್ತೊಂದು ಕೆಲಸವನ್ನು ಪಡೆಯಬಲ್ಲೆ. ಆಸ್ಟ್ರೇಲಿಯಾದಲ್ಲಿ ನಾನು ಶಾಶ್ವತ ನಿವಾಸದ ಕಾರ್ಡ್ ಹೊಂದಿದ್ದೇನೆ. ತಾವು ಆಸ್ಟ್ರೇಲಿಯಾ ಪ್ರಜೆ ಫಿಜಿ ಎಂಬವರನ್ನು ವಿವಾಹವಾಗಿದ್ದು, ಪರಿಣಾಮ ಶಾಶ್ವತ ನಿವಾಸದ ಕಾರ್ಡ್ ತಮಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಬೇರೆ ಕೆಲಸ ದೊರಕಿಸಿಕೊಳ್ಳುವುದು ಕಷ್ಟವಾಗದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮಾತು ಕೇಳಿದಾಗ ಹೆಮ್ಮೆ ಎನಿಸುತ್ತಿತ್ತು
ಸಿಡ್ನಿ ಏರ್ ಪೋರ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಪ್ರಪಂಚದ ಹಲವು ಜನರ ಮಧ್ಯೆ ಇದ್ದೆ. ಇದರಲ್ಲಿ ಯುರೋಪಿಯನ್ಸ್, ಪಾಕಿಸ್ತಾನಿಗಳು ಕೂಡ ಇದ್ದರು. ಅವರು ನನ್ನೊಂದಿಗೆ ಮಾತನಾಡುತ್ತಾ ಭಾರತಕ್ಕೆ ಉತ್ತಮ ಭವಿಷ್ಯ ಇದೆ ಎಂದು ಹೇಳಿದಾಗ ಹೆಮ್ಮೆ ಆಗುತ್ತಿತ್ತು. ಬದಲಾಗುತ್ತಿರುವ ಭಾರತದ ಬಗ್ಗೆ ಪ್ರಧಾನಿ ಮೋದಿ ಅವರ ಕೊಡುಗೆ ಹೆಚ್ಚಿದೆ. ಆದ್ದರಿಂದ ನಾನು ದೇಶದ ಗಡಿ ಕಾಯುವ ಸೈನಿಕನಾಗದಿದ್ದರೂ ಜವಾಬ್ದಾರಿಯುತ ಪ್ರಜೆಯಾಗಿ ಮತ ಚಲಾಯಿಸುವ ಮೂಲಕ ಕರ್ತವ್ಯ ನಿರ್ವಹಿಸಲು ತೀರ್ಮಾನಿಸಿದೆ ಎಂದು ಸುಧೀಂದ್ರ ತಿಳಿಸಿದ್ದಾರೆ.
ಮೇ 23 ರವರೆಗೆ ಮಂಗಳೂರಿನಲ್ಲೇ ಇರುತ್ತಾರೆ
ಸುಧೀಂದ್ರ ಅವರು ಮೇ 23 ರವರೆಗೆ ಲೋಕಸಭಾ ಚುನಾವಣಾ ಫಲಿತಾಂಶದವರೆಗೂ ಮಂಗಳೂರಿನಲ್ಲೇ ಇರಲಿದ್ದಾರೆ. ಬಳಿಕ ಆಸ್ಟ್ರೇಲಿಯಾಗೆ ಮರಳಿ ಹೊಸ ಉದ್ಯೋಗದ ಹುಡುಕಾಟ ನಡೆಸುವ ಚಿಂತನೆ ಹೊಂದಿದ್ದಾರೆ.